ಅರ್ಧ ವರ್ಷ ಫ್ಲಾಪ್ ಶೋ ಗುರು: ಇದಕ್ಕೆ ಕಾರಣ ಏನಿರಬಹುದು.?
ಕಣ್ಮುಚ್ಚಿ ಕಣ್ತೆರೆಯುವುದರೊಳಗೆ ಅರ್ಧ ವರ್ಷ ಕಳೆದು ಹೋಗಿದೆ. ಚಿಟಿಕೆ ಹೊಡೆಯುವುದರೊಳಗೆ ಜೂನ್ ತಿಂಗಳು ಬಂದೇ ಬಿಟ್ಟಿದೆ. ಆರು ತಿಂಗಳಲ್ಲಿ ಸ್ಯಾಂಡಲ್ ವುಡ್ ನಲ್ಲಿ ಏನೇನಾಯಿತು ಅಂತ ಮೆಲುಕು ಹಾಕುವ ಸಮಯ ಇದೀಗ ಬಂದಿದೆ.
ಅರ್ಧ ವರ್ಷದ ಫ್ಲ್ಯಾಶ್ ಬ್ಯಾಕ್ ಗೆ ಹೋಗಿ ಬಂದರೆ, ನಿರಾಸೆಯೇ ಹೆಚ್ಚು ಕಾಡಿದರೆ ಆಶ್ಚರ್ಯ ಇಲ್ಲ. ಯಾಕಂದ್ರೆ, ಈ ವರ್ಷದಲ್ಲಿ ಬಿಡುಗಡೆ ಆದ ಸಿನಿಮಾಗಳ ಪೈಕಿ ಹಿಟ್ ಗಿಂತ ಫ್ಲಾಪ್ ಗಳೇ ಜಾಸ್ತಿ.
ಸದಭಿರುಚಿಯ ಸಿನಿಮಾಗಳು ತೆರೆಗೆ ಬಂದರೂ, ಕೆಲವು ಯಶಸ್ಸಿನ ಸವಿ ಸವಿಯಲೇ ಇಲ್ಲ, ಇದಕ್ಕೆ ಕಾರಣ ಏನಿರಬಹುದು.? ಫಸ್ಟ್ ಹಾಫ್ ನ ಪೋಸ್ಟ್ ಮಾರ್ಟಂ ಇಲ್ಲಿದೆ ನೋಡಿ...

ಥಿಯೇಟರ್ ಗಳ ಕೊರತೆ
'ಚೂರಿಕಟ್ಟೆ', 'ಗುಳ್ಟು', 'ಹೆಬ್ಬೆಟ್ ರಾಮಕ್ಕ', 'ಕಾನೂರಾಯಣ', 'ಕಿಚ್ಚು', 'ವೆನಿಲ್ಲಾ' ಸೇರಿದಂತೆ ಹಲವು ಸದಭಿರುಚಿಯ ಸಿನಿಮಾಗಳು ಈ ವರ್ಷ ತೆರೆಗೆ ಬಂದಿದೆ. ವಿಮರ್ಶಕರಿಂದ ಭೇಷ್ ಎನಿಸಿಕೊಂಡರೂ, ಬಾಕ್ಸ್ ಆಫೀಸ್ ನಲ್ಲಿ ಈ ಚಿತ್ರಗಳು ಸದ್ದು ಮಾಡಲಿಲ್ಲ. ಇದಕ್ಕೆ ಥಿಯೇಟರ್ ಗಳ ಕೊರತೆಯೇ ಮೂಲ ಕಾರಣ. ದಿನದಿಂದ ದಿನಕ್ಕೆ ಗಾಂಧಿನಗರದಲ್ಲಿ ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳ ಸಂಖ್ಯೆ ಕಮ್ಮಿ ಆಗುತ್ತಿದೆ. ಇನ್ನೂ ಮಲ್ಟಿಪ್ಲೆಕ್ಸ್ ಗಳಲ್ಲಿ ಪರಭಾಷಾ ಚಿತ್ರಗಳ ಹಾವಳಿಯೇ ಹೆಚ್ಚು. ಈ ಮಧ್ಯೆ ಸ್ಟಾರ್ ಗಳಿಲ್ಲದೇ ತೆರೆಗೆ ಬಂದ ಉತ್ತಮ ಚಿತ್ರಗಳು ಒದ್ದಾಡುವಂತಾಯಿತು.

ಪಬ್ಲಿಸಿಟಿ ಪ್ರಾಬ್ಲಂ
ಕೆಲವು ಸಿನಿಮಾಗಳು ಚೆನ್ನಾಗಿದ್ದರೂ, ಪಬ್ಲಿಸಿಟಿ ಇಲ್ಲದೇ ಜನರನ್ನ ತಲುಪುವಲ್ಲಿ ವಿಫಲ ಆಯಿತು. ''ಸಿನಿಮಾ ಚೆನ್ನಾಗಿದೆ'' ಎಂದು ಬಾಯಿಂದ ಬಾಯಿಗೆ ಹರಡುವಷ್ಟರಲ್ಲಿ ಥಿಯೇಟರ್ ಗಳಿಂದಲೇ ಎಷ್ಟೋ ಚಿತ್ರಗಳು ನಾಪತ್ತೆ ಆಗಿದ್ದವು.

ಚುನಾವಣೆ ಬಿಸಿ
ಈ ವರ್ಷ ವಿಧಾನಸಭೆ ಚುನಾವಣೆ ಬೇರೆ ಇದ್ದ ಕಾರಣ ಸಿನಿಮಾಗಿಂತ ರಾಜಕೀಯ ಡ್ರಾಮಾ ಕಡೆಗೆ ಹಲವರು ಆಸಕ್ತಿ ತೋರಿದ್ದರು. ಹೀಗಾಗಿ, ಎಲೆಕ್ಷನ್ ಹಿಂದೆ ಮುಂದೆ ನಿರೀಕ್ಷಿತ ಚಿತ್ರಗಳ್ಯಾವೂ ಬಿಡುಗಡೆ ಆಗಲಿಲ್ಲ. ಬಿಡುಗಡೆ ಆದ ಚಿತ್ರಗಳಿಗೆ ಜನ ಬರಲಿಲ್ಲ.

ಐ.ಪಿ.ಎಲ್ ಹಂಗಾಮ
ಕ್ರಿಕೆಟ್ ಪ್ರಿಯರಿಗೆ ಐ.ಪಿ.ಎಲ್ ಬಂದರೆ ಹಬ್ಬ. ಅದ್ರಲ್ಲೂ 'ಈ ಸಲ ಕಪ್ ನಮ್ದೆ' ಟ್ರೆಂಡಿಂಗ್ ಆಗಿದ್ರಿಂದ, ಜನ ಟಿವಿ ಮುಂದೆ ಕೂತಿದ್ದರೆ ವಿನಃ ಥಿಯೇಟರ್ ಕಡೆ ಹೆಜ್ಜೆ ಹಾಕಲಿಲ್ಲ.

ಸ್ಟಾರ್ ಸಿನಿಮಾ ಇಲ್ಲ ಗುರು.!
ಶಿವಣ್ಣ, ದುನಿಯಾ ವಿಜಯ್, ಚಿರಂಜೀವಿ ಸರ್ಜಾ ಬಿಟ್ಟರೆ ದರ್ಶನ್, ಪುನೀತ್, ಸುದೀಪ್, ಯಶ್, ಧ್ರುವ ಸರ್ಜಾ ಚಿತ್ರಗಳು ಬಿಡುಗಡೆ ಆಗಲಿಲ್ಲ. ಹೀಗಾಗಿ ಥಿಯೇಟರ್ ಮುಂದೆ ಸೆಲೆಬ್ರೇಷನ್ ಕೂಡ ಕಮ್ಮಿನೇ ಇತ್ತು. ಈ ಎಲ್ಲದರ ಮಧ್ಯೆ ವಿದ್ಯಾರ್ಥಿಗಳ ಪರೀಕ್ಷೆ ಬೇರೆ. ಈ ಎಲ್ಲ ಕಾರಣಗಳಿಂದ 2018 ರ ಮೊದಲಾರ್ಧ 'ಫ್ಲಾಪ್ ಶೋ' ಆಗಿದೆ. ಮುಂದಿನ ಭಾಗದಲ್ಲಿ ಬದಲಾವಣೆ ಆಗುತ್ತಾ, ನೋಡೋಣ...


Click it and Unblock the Notifications











