ಸಂಚಾರಿ ವಿಜಯ್ ಕಣ್ಣೀರಕಥೆಗೆ ಕಡೆಗೂ ಸಂದ ಜಯ
ಈ ಬಾರಿಯ 62ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿ ಪ್ರಕಟವಾದ ಕೂಡಲೆ ಎಲ್ಲರೂ ಸ್ಯಾಂಡಲ್ ವುಡ್ ಚಿತ್ರರಂಗದ ಕಡೆಗೆ ತಿರುಗಿ ನೋಡುವಂತಾಗಿದೆ. ಬಿ.ಎಸ್. ಲಿಂಗದೇವರು ನಿರ್ದೇಶನದ 'ನಾನು ಅವನಲ್ಲ, ಅವಳು' ಚಿತ್ರದಲ್ಲಿನ ಅಭಿನಯಕ್ಕಾಗಿ ಸಂಚಾರಿ ವಿಜಯ್ ಅವರಿಗೆ ಶ್ರೇಷ್ಠ ನಟ ಪ್ರಶಸ್ತಿ ಸಿಕ್ಕಿದೆ.
ಹವ್ಯಾಸಿ ರಂಗಭೂಮಿ ಕಲಾವಿದರಾಗಿರುವ ಸಂಚಾರಿ ವಿಜಯ್ ಅವಕಾಶಕ್ಕಾಗಿ ಪಟ್ಟ ಪಾಡು ಅಷ್ಟಿಷ್ಟಲ್ಲ. ಬಹುಶಃ ಅವರಿಗೆ ರಾಷ್ಟ್ರಪ್ರಶಸ್ತಿ ಒಲಿಯದಿದ್ದರೆ ವಿಜಯ್ ಕಥೆ ಅಕ್ಷರಶಃ ರಕ್ತಕಣ್ಣೀರಾಗುತ್ತಿತ್ತು ಎಂಬ ಸತ್ಯ ಇದೀಗ ಬೆಳಕು ಬಂದಿದೆ. [ರಾಷ್ಟ್ರ ಪ್ರಶಸ್ತಿ ಪಡೆದ 'ನಾನು ಅವನಲ್ಲ, ಅವಳು' ಚಿತ್ರ ಕುರಿತು]

ಸ್ಯಾಂಡಲ್ ವುಡ್ ನಲ್ಲಿ ಅವಕಾಶಕ್ಕಾಗಿ ಅವರು ಪ್ರತಿ ನಿರ್ದೇಶಕರ ಮನೆ ಬಾಗಿಲನ್ನೂ ತಟ್ಟಿದ್ದಾರೆ. ಆದರೆ ಯಾರೂ ಅವರಿಗೆ ಒಂದು ಸಣ್ಣ ಪಾತ್ರವನ್ನೂ ನೀಡಿಲ್ಲ. ಆದರೆ 'ನಾನು ಅವನಲ್ಲ, ಅವಳು' ಚಿತ್ರ ಅವರ ನಸೀಬನ್ನೇ ಬದಲಾಯಿಸಿದೆ.
62ನೇ ರಾಷ್ಟ್ರೀಯ ಪ್ರಶಸ್ತಿಗಳು ಪ್ರಕಟವಾದ ಕೂಡಲೇ ನಮ್ಮ ಗಾಂಧಿನಗರದ ಜನ ಯಾರಪ್ಪಾ ಈ ಸಂಚಾರಿ ವಿಜಯ್ ಎಂದು ತಲೆಕೆಡಿಸಿಕೊಂಡದ್ದುಂಟು. ಅಷ್ಟರ ಮಟ್ಟಿಗೆ ಅಜ್ಞಾತವಾಗಿದ್ದ ಈ ನಟ ಈಗ ಏಕ್ ದಂ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದಾರೆ.

ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದ್ದ 'ಹರಿವು' ಚಿತ್ರದಲ್ಲಿನ ಅಭಿನಯ ನೋಡಿದವರು ಸಂಚಾರಿ ವಿಜಯ್ ಕೈಕುಲುಕಿ ಬೆನ್ನುತಟ್ಟಿದ್ದರು. ಆ ಸಂದರ್ಭದಲ್ಲಿ ಸಾಕಷ್ಟು ಮಂದಿ ನಿರ್ದೇಶಕರು, ನಿರ್ಮಾಪಕರು ತಮ್ಮ ವಿವರಗಳನ್ನು ಕಳುಹಿಸುವಂತೆ ವಿಜಯ್ ಬಳಿ ಕೇಳಿದ್ದರು. [ನಾನು ಅವನಲ್ಲ, ಅವಳು ಟ್ರೇಲರ್]
ಬೆಟ್ಟದಷ್ಟು ಆಸೆ ಇಟ್ಟುಕೊಂಡು ಎಲ್ಲರಿಗೂ ವಾಟ್ಸಾಫ್ ನಲ್ಲಿ ತಮ್ಮ ಕಿರುಪರಿಚಯದ ಸಾಲುಗಳನ್ನು ರವಾನಿಸಿದ್ದರು. ಆದರೆ ಯಾವೊಬ್ಬ ನಿರ್ದೇಶಕ, ನಿರ್ಮಾಪಕರಿಂದಾಗಲಿ ಅವಕಾಶದ ಮಾತು ಹೋಗಲಿ ಒಂದು ಸಣ್ಣ ಪ್ರತಿಕ್ರಿಯೆಯೂ ಬಂದಿರಲಿಲ್ಲ.
ಈ ಬಗ್ಗೆ ಕಳೆದ 8 ವರ್ಷಗಳಿಂದ ಹವ್ಯಾಸಿ ರಂಗಭೂಮಿಯಲ್ಲಿರುವ ವಿಜಯ್ ಅವರಿಗೆ ಸಹಜವಾಗಿಯೇ ನೋವಾಗಿತ್ತು. ವಿಜಯ್ ಸಾಕಷ್ಟು ಕಿರುಚಿತ್ರಗಳಲ್ಲಿ, ಟೆಲಿ ಧಾರಾವಾಹಿಗಳಲ್ಲಿ, ರಮೇಶ್ ಅರವಿಂದ್ ಅವರ 'ರಂಗಪ್ಪ ಹೋಗ್ಬಿಟ್ನ' ಚಿತ್ರ ಸೇರಿದಂತೆ 'ದಾಸವಾಳ', 'ಒಗ್ಗರಣೆ' ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆದರೆ ನಿರ್ದೇಶಕರ ಜಾಣ ಕುರುಡು ಅವರ ಪ್ರತಿಭೆಯನ್ನು ಗುರುತಿಸುವಲ್ಲಿ ವಿಫಲವಾಗಿತ್ತು. (ಏಜೆನ್ಸೀಸ್)


Click it and Unblock the Notifications











