ಬಂಗಾರಪ್ಪನಂತೆ ಸಿದ್ದು ನಿರ್ಧರಿಸಿದ್ರೆ 'ಗಂಡಸು' ಆಗ್ತಿದ್ರು : ಶಿವಣ್ಣ
''ಅವತ್ತು ಬಂಗಾರಪ್ಪನವರು ತೆಗೆದುಕೊಂಡ ನಿರ್ಧಾರದಂತೆ ಇವತ್ತು ಸಿದ್ದರಾಮಯ್ಯನವರೂ ತೆಗೆದುಕೊಳ್ಳಬಹುದಿತ್ತು. ಹಾಗೆ ಅವರು ತಗೊಂಡಿದ್ರೆ, ಇವತ್ತು ಅವರು ಗಂಡಸು ಆಗುತ್ತಿದ್ದರು''
''ತಮಿಳುನಾಡಲ್ಲಿ ಇರುವ ಕನ್ನಡಿಗರು ಇಲ್ಲಿಗೆ ವಾಪಸ್ ಬಂದ್ರೆ ಇಲ್ಲಿ ಜಾಗ ಇದೆ. ಇಲ್ಲಿರುವ ತಮಿಳರು ಅಲ್ಲಿಗೆ ವಾಪಸ್ ಹೋದ್ರೆ, ಜಾಗ ಇದ್ಯಾ ಅಂತ ಮೊದಲು ನೋಡ್ಕೊಳ್ಬೇಕು''
''ಇದೇ ಸಿದ್ದರಾಮಯ್ಯ, ಯಡಿಯೂರಪ್ಪ, ಈಶ್ವರಪ್ಪನವರನ್ನು ನಂಬಿಕೊಂಡಿದ್ದರೆ, ನಮಗೆ ನ್ಯಾಯ ಸಿಗುವುದಿಲ್ಲ''
ಇಂತಹ ಮಾತುಗಳು ಉದುರಿದ್ದು ಕನ್ನಡ ಸಿನಿ ತಾರೆಯರ ಬಾಯಿಂದ. ನಾಡು, ನುಡಿ, ನೆಲ, ಜಲ ವಿಷಯ ಬಂದಾಗ ಕನ್ನಡ ಚಿತ್ರರಂಗ ಎಂದೂ ಮೌನ ವಹಿಸಿಲ್ಲ. ಗೋಕಾಕ್ ಚಳುವಳಿ, ಕಳಸಾ-ಬಂಡೂರಿ ಮತ್ತು ಕಾವೇರಿ ಹೋರಾಟದಲ್ಲಿ ಇದುವರೆಗೂ ಕನ್ನಡ ಚಿತ್ರರಂಗದ ಬೆಂಬಲ ನೀಡುತ್ತಾ ಬಂದಿದೆ. ಇವತ್ತೂ ಕೂಡ ಅದನ್ನೇ ಮುಂದುವರೆಸಿದೆ.
ಕಾವೇರಿ ವಿವಾದಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ (ಬೆಂಗಳೂರಿನ ಶಿವಾನಂದ ಸರ್ಕಲ್) ಇಂದು ಕನ್ನಡ ಚಿತ್ರೋದ್ಯಮ ಬೃಹತ್ ಪ್ರತಿಭಟನೆ ನಡೆಸುತ್ತಿದೆ. ಅದರಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಪುನೀತ್ ರಾಜ್ ಕುಮಾರ್, ಶರಣ್, ಅಶೋಕ್, ಶ್ರುತಿ, ಜಗ್ಗೇಶ್, ತಾರಾ, ರಾಗಿಣಿ, ಹರಿಪ್ರಿಯಾ, ಸಾರಾ ಗೋವಿಂದು ಸೇರಿದಂತೆ ಚಿತ್ರರಂಗದ ಗಣ್ಯರು ಕಪ್ಪು ಪಟ್ಟಿ ಧರಿಸಿ ಪಾಲ್ಗೊಂಡಿದ್ದಾರೆ.[ಶಾಶ್ವತ ನೀರಾವರಿಗಾಗಿ ಹೋರಾಟ: ಕೋಲಾರದಲ್ಲಿ ತಾರೆಯರು ಹೇಳಿದ್ದೇನು.?]
ಕಾವೇರಿ ಪರವಾಗಿ, ನಮ್ಮ ರೈತರ ಪರವಾಗಿ ನಮ್ಮ ಸ್ಯಾಂಡಲ್ ವುಡ್ ಸ್ಟಾರ್ ಗಳು ಏನೇನೆಲ್ಲಾ ಹೇಳಿದರು ಅಂತ ಅವರ ಮಾತುಗಳಲ್ಲೇ ಓದಿರಿ.....

ಶಿವರಾಜ್ ಕುಮಾರ್
''ಇವತ್ತು ನಿಜವಾಗ್ಲೂ ಬಹಳ ಹೆಮ್ಮೆ ಅನಿಸುತ್ತಿದೆ. ಬೆಂಗಳೂರಿನಲ್ಲಿ ಇಷ್ಟು ದೊಡ್ಡ ಮಟ್ಟದ ಪ್ರತಿಭಟನೆ ಆಗುತ್ತಿರುವುದು ಬಹಳ ಹೆಮ್ಮೆ ಅನಿಸುತ್ತದೆ. ಸರ್ಕಾರ ಮನಸ್ಸು ಮಾಡಿ ಬೋಲ್ಡ್ ಸ್ಟೇಟ್ಮೆಂಟ್ ತೆಗೆದುಕೊಳ್ಳಬೇಕು. ಇದು ನಮ್ಮ ಊರು, ನಮ್ಮ ಜನ ಎಂಬ ಭಾವನೆ ಬರಬೇಕು. ಅವಾಗ್ಲೇ ಉದ್ಧಾರ ಆಗೋದು, ಇಲ್ಲಾಂದ್ರೆ ಕಷ್ಟ'' - ಶಿವರಾಜ್ ಕುಮಾರ್ [ಕಳಸಾ-ಬಂಡೂರಿಗೆ ಸ್ಯಾಂಡಲ್ ವುಡ್ ಕಿಚ್ಚು ; ಯಾರು ಏನು ಹೇಳಿದರು?]

ಕಾವೇರಿಗೆ ಜೈ ಅನ್ನಿ
''ಕರ್ನಾಟಕಕ್ಕೆ ಜೈ ಅನ್ನಿ, ಕಾವೇರಿಗೆ ಜೈ ಅನ್ನಿ. ನಮಗೆ ಅಲ್ಲ. ಇನ್ಮೇಲೆ ಯಾರಿಗೆ ತಾಕತ್ ಇದೆಯೋ, ಅವರಿಗೆ ವೋಟ್ ಮಾಡಿ. ಇಲ್ಲಾಂದ್ರೆ ವೋಟ್ ಮಾಡ್ಬೇಡಿ. ಅವರಿಗೇನು? ಬಿಸ್ಲೆರಿ ವಾಟರ್ ಕುಡಿಯುತ್ತಾರೆ'' - ಶಿವರಾಜ್ ಕುಮಾರ್

ಅವರು ಗಂಡಸು ಆಗ್ತಿದ್ರು!
''ಇದೇ ತರಹ 1992ನಲ್ಲಿ ಆಗ್ಬೇಕಾದರೆ, ಬಂಗಾರಪ್ಪನವರು ಬೇರೆ ಸ್ಟೆಪ್ ತೆಗೆದುಕೊಂಡರು. ಅದೇ ತರಹ ಸಿದ್ಧರಾಮಯ್ಯ ತಗೊಬಹುದು. ತಗೊಂಡಿದ್ರೆ, ಇವತ್ತು ಅವರು ಗಂಡಸು ಆಗುತ್ತಿದ್ದರು'' - ಶಿವರಾಜ್ ಕುಮಾರ್

ಅವರೂ ಕನ್ನಡದ ನೀರು ಕುಡಿಯುತ್ತಿದ್ದಾರೆ.!
''ಕಾವೇರಿ ಬರೀ ಬೆಂಗಳೂರು, ಮಂಡ್ಯ, ಮೈಸೂರಿಗೆ ಸೇರಿದ್ದು ಮಾತ್ರ ಅಲ್ಲ. ಇಡೀ ಕರ್ನಾಟಕಕ್ಕೆ ಸೇರಿದ್ದು. ನಾವು ಯಾವ ಜನರನ್ನೂ ಬೈಯ್ಯಬಾರದು. ಕರ್ನಾಟಕದಲ್ಲಿ ತಮಿಳಿನವರು, ತೆಲುಗಿನವರೂ ಇದ್ದಾರೆ. ಅವರೆಲ್ಲರೂ ಹೊರಗಡೆ ಬರಬೇಕು. ಅವರೂ ಕನ್ನಡ ನೀರು ಕುಡಿಯುತ್ತಾರೆ. ಕನ್ನಡ ಅನ್ನ ತಿನ್ನುತ್ತಾರೆ. ಅದನ್ನ ಮರೆಯಬಾರದು. ನಾವು ಯಾವ ಊರಲ್ಲಿ ಇರ್ತೀವೋ, ಊರಿನ ಪರವಾಗಿ ನಿಂತುಕೊಳ್ಳಬೇಕಾದ ಜವಾಬ್ದಾರಿ ನಮ್ಮದು'' - ಶಿವರಾಜ್ ಕುಮಾರ್

ದರ್ಶನ್
''ನಾವು ಅಣ್ತಮ್ಮಂದಿರು ಇಲ್ಲಿ ಎಲ್ಲರೂ ಇದ್ದೀವಿ. ತಮಿಳುನಾಡಲ್ಲಿ ಇರುವ ಅಷ್ಟೂ ಕನ್ನಡಿಗರು ಇಲ್ಲಿದೆ ಬಂದ್ರೆ ಜಾಗ ಇದೆ. ಇಲ್ಲಿರುವ ತಮಿಳರು ಅಲ್ಲಿಗೆ ಹೋದರೆ, ಜಾಗ ಇದ್ಯಾ ಅಂತ ಕೇಳ್ಕೋಬೇಕು ಮೊದಲು. ಈ ಸಲ ಮಾತ್ರ ಖಂಡಿತ ಬಿಡಬಾರದು. ನ್ಯಾಯ ಸಿಗುವವರೆಗೂ ಖಂಡಿತ ಹೋರಾಡೋಣ'' - ದರ್ಶನ್

ಪುನೀತ್ ರಾಜ್ ಕುಮಾರ್
''ನಾನು ಕೈ ಜೋಡಿಸಿ ಕೇಳಿಕೊಳ್ತಾಯಿದ್ದೀನಿ..ಯಾರಿಗೂ ತೊಂದರೆ ಆಗುವುದು ಬೇಡ. ಕನ್ನಡಿಗರಾಗಿ ನಾವೆಲ್ಲರೂ ಒಂದಾಗಿರೋಣ'' - ಪುನೀತ್ ರಾಜ್ ಕುಮಾರ್

ಗಣೇಶ್
''ಕನ್ನಡಿಗರು ನಾವು ಸಹೃದಯಿಗಳು, ಉದಾರ ಮನಸ್ಸು ಇರುವವರು...ನಿಜ. ಆದ್ರೆ, ನಮ್ಮ ಹತ್ರ ಇದ್ರೆ ಕೊಡಬಹುದು. ನಮ್ಮ ಹತ್ರ ಇಲ್ಲ ಅಂದ್ರೆ ಎಲ್ಲಿಂದ ಕೊಡೋದು.? ರೈತ ಈ ದೇಶದ ಬೆನ್ನೆಲುಬು. ಆತನಿಗೆ ತೊಂದರೆ ಆದರೆ, ಎಲ್ಲರಿಗೂ ತೊಂದರೆ ಆಗುತ್ತೆ'' - ಗಣೇಶ್

ಶ್ರುತಿ
''ಈ ರಾಜ್ಯದ ನೆಲ, ಜಲಕ್ಕೆ ಯಾವುದೇ ಕುತ್ತು ಬಂದರೂ ಅದಕ್ಕೆ ಕನ್ನಡ ಜನರ ಪರವಾಗಿ ಕನ್ನಡ ಚಿತ್ರರಂಗ ಇದ್ದೇ ಇರುತ್ತದೆ. ಇಲ್ಲಿ ಹುಟ್ಟುವ ಕಾವೇರಿ ತಮಿಳುನಾಡಿಗೆ ಹರಿದು ಹೋಗುತ್ತಿರುವುದು ಮಾತ್ರ ಅಲ್ಲ, ಕನ್ನಡಿಗರ ಜೀವನ ಕೂಡ ಕೊಚ್ಚಿಕೊಂಡು ಹೋಗ್ತಾಯಿದೆ. ಪ್ರತಿ ಬಾರಿ ಕಾವೇರಿ ವಿಚಾರದಲ್ಲಿ ತಮಿಳುನಾಡು ಗೆಲ್ಲುತ್ತೆ, ಕರ್ನಾಟಕ ಸೋಲುತ್ತೆ ಯಾಕೆ? ಅದನ್ನ ನಾವು ಯೋಚನೆ ಮಾಡ್ಬೇಕು. ಕಾವೇರಿ ಇಲ್ಲಿ ಹುಟ್ಟುತ್ತಾಳೆ, ಆದರೆ ಮೂರು ರಾಜ್ಯದವರೂ ಹಂಚಿಕೊಳ್ಳುತ್ತಾರೆ. ನಮ್ಮಲ್ಲಿ ಹುಟ್ಟುವ ಕಾವೇರಿಗೆ ನಾವೇ ಬೇಡುವ ಪರಿಸ್ಥಿತಿ ಬಂದಿದೆ. ನಮ್ಮನ್ನ ಸ್ವಾಭಿಮಾನಿಗಳಾಗಿ ಬದುಕಲು ರಾಜ್ಯ ಸರ್ಕಾರ ಅವಕಾಶ ಮಾಡಿಕೊಡಬೇಕು ಅಂತ ನಾನು ಕೇಳಿಕೊಳ್ಳುತ್ತೇನೆ'' - ಶ್ರುತಿ

ರಾಗಿಣಿ
''ಕಾವೇರಿ ನಮ್ಮದು, ನಾವು ಬಿಡಲ್ಲ. ನಮ್ಮ ಹತ್ರ ಕುಡಿಯೋಕೆ ನೀರಿಲ್ಲ ಅಂದ್ರೆ, ಬೇರೆಯವರಿಗೆ ಹೇಗೆ ಬಿಡುವುದು. ರೈತರಿಗೆ ನಮ್ಮ ಸಪೋರ್ಟ್ ಬೇಕಾಗಿದೆ. ಅವರಿಂದಲೇ ನಮ್ಮೆಲ್ಲರಿಗೂ ಊಟ ಸಿಗುತ್ತಿರುವುದು'' - ರಾಗಿಣಿ ದ್ವಿವೇದಿ

ಅಶೋಕ್
''ನಮ್ಮದು ಒಂದು ಕನ್ನಡ ಪಕ್ಷ ಇರಬೇಕು. ಆಗ ಮಾತ್ರ ನಮ್ಮ ಹಕ್ಕುಗಳನ್ನ ರಕ್ಷಣೆ ಮಾಡಲು ಸಾಧ್ಯ. ಇದೇ ಸಿದ್ಧರಾಮಯ್ಯ, ಯಡಿಯೂರಪ್ಪ, ಈಶ್ವರಪ್ಪನವರನ್ನು ನಂಬಿಕೊಂಡಿದ್ದರೆ, ನಮಗೆ ನ್ಯಾಯ ಸಿಗುವುದಿಲ್ಲ. ರಾಜ್ಯದ ಆಡಳಿತ ಚುಕ್ಕಾಣಿ ನಮ್ಮ ಕೈಯಲ್ಲಿ ತೆಗೆದುಕೊಳ್ಳಬೇಕು. ಒಂದು ಪ್ರಾದೇಶಿಕ ಪಕ್ಷವನ್ನ ಮಾಡದೆ ಹೋದರೆ ನಮಗೆ ಉಳಿಗಾಲವಿಲ್ಲ. ಈ ಮಾತು ನೆನಪಿನಲ್ಲಿ ಇಟ್ಟುಕೊಳ್ಳಿ. ನಮ್ಮ ಹೋರಾಟಕ್ಕೆ ಜಯವಾಗಲಿ'' - ಅಶೋಕ್

ವಿಜಯ್ ರಾಘವೇಂದ್ರ
''ರೈತರ ಜೀವನ ನಿಂತು ಹೋದ್ರೆ, ಅದರಲ್ಲಿ ಉತ್ಪ್ರೇಕ್ಷೆ ಇಲ್ಲ. ನಮ್ಮ ಜೀವನ ಕೂಡ ನಿಂತು ಹೋಗುತ್ತೆ. ಇದು ಒಂದು ರಾಜ್ಯದ ಕಥೆ ಅಲ್ಲ. ಸುತ್ತಮುತ್ತಲಿನ ರಾಜ್ಯದ ಕಥೆ ಕೂಡ ಅದೇ. ಬೇಡಿ ಆಯ್ತು, ಕೇಳಿ ಆಯ್ತು. ಬರೀ ಗಲಾಟೆ ಮಾಡ್ಬೇಕು, ಕಿರುಚಾಟ ನಡೆಯಬೇಕು ಅನ್ನೋದಾದರೆ, ಅದನ್ನ ಯಾರ ಕೈಯಲ್ಲೂ ತಪ್ಪಿಸಲು ಸಾಧ್ಯವಿಲ್ಲ'' - ವಿಜಯ್ ರಾಘವೇಂದ್ರ


Click it and Unblock the Notifications











