ಖಳನಟ ರವಿಶಂಕರ್ ಬಿಜೆಪಿ ಸೇರೋದು ನಿಜನಾ?
ಸ್ಯಾಂಡಲ್ ವುಡ್ ತಾರೆಗಳಿಗೂ ರಾಜಕೀಯಕ್ಕೂ ಕುಚಿಕು ಕುಚಿಕು ಸಂಬಂಧ. ಸಾಕಷ್ಟು ತಾರೆಗಳು ರಾಜಕೀಯ ಕ್ಷೇತ್ರಕ್ಕೆ ಬಂದು ಅಲ್ಲೂ ತಮ್ಮದೇ ಆದಂತಹ ಛಾಪು ಮೂಡಿಸಿದ್ದಾರೆ, ಮೂಡಿಸುತ್ತಿದ್ದಾರೆ.
ಅದರಲ್ಲೂ ಮುಖ್ಯವಾಗಿ ಖಳನಟರಿಗೂ ರಾಜಕೀಯಕ್ಕೂ ಬಿಡಿಸಲಾರದ ಬಂಧ. ಅದೇಕೋ ಏನೋ ಖಳನಟರನ್ನು ರಾಜಕೀಯ ಪಕ್ಷಗಳು ಗಕ್ಕನೆ ಸೆಳೆದುಕೊಂಡು ಬಿಡುತ್ತವೆ. ಇದೀಗ ಸ್ಯಾಂಡಲ್ ವುಡ್ ನಲ್ಲಿ ಪ್ರವರ್ಧಮಾನಕ್ಕೆ ಬಂದಂತಹ ಖಳನಟ ರವಿಶಂಕರ್ ರಾಜಕೀಯಕ್ಕೆ ಅಡಿಯಿಡಲು ನಿರ್ಧರಿಸಿದ್ದಾರೆ.

ಇತ್ತೀಚೆಗೆ ಅವರು ಬಿಜೆಪಿಯ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿದ್ದು ಬಹಳಷ್ಟು ಚರ್ಚೆಗೆ ನಾಂದಿಹಾಡಿದೆ. ಇಷ್ಟಕ್ಕೂ ರವಿಶಂಕರ್ ರಾಜಕೀಯಕ್ಕೆ ಬರ್ತಾರಾ ಎಂದರೆ ಅದಕ್ಕೆ ಉತ್ತರ ಕಾಲವೇ ಹೇಳಬೇಕು. ಏಕೆಂದರೆ ಯಾವುದೂ ಇನ್ನೂ ಅಂತಿಮವಾಗಿಲ್ಲ. [ಅಭಿನೇತ್ರಿ ಚಿತ್ರ ವಿಮರ್ಶೆ]
ತಾನು ಮೊದಲಿಂದಲೂ ಬಿಜೆಪಿ ಪಕ್ಷವನ್ನು ಬೆಂಬಲಿಸುತ್ತಿದ್ದೇನೆ. ಈ ಪಕ್ಷ ಸೇರಬೇಕೆಂದಿದ್ದೇನೆ ಎಂದಿದ್ದಾರೆ ರವಿಶಂಕರ್. ಈ ನಟನಿಗೆ ಅವರದೇ ಆದಂತಹ ಅಭಿಮಾನಿ ಬಳಗವಿದೆ. ನಾಯಕನಟನಷ್ಟೇ ತೂಕವುಳ್ಳ ಪಾತ್ರಗಳಲ್ಲಿ ರವಿಶಂಕರ್ ಮಿಂಚುತ್ತಿದ್ದಾರೆ.
ತೆಲುಗು, ತಮಿಳು ಚಿತ್ರಗಳಲ್ಲೂ ಬಿಜಿಯಾಗಿದ್ದು ಸಾಕಷ್ಟು ಕಲಾವಿದರಿಗೆ ಡಬ್ಬಿಂಗ್ ಆರ್ಟಿಸ್ಟ್ ಆಗಿ ರವಿಶಂಕರ್ ಗುರುತಿಸಿಕೊಂಡವರು. ಇವರ ಸಹೋದರ ಸಾಯಿಕುಮಾರ್ ಅವರು ಈಗಾಗಲೆ ಬಿಜೆಪಿಯಲ್ಲಿದ್ದು, ಅಣ್ಣನ ಸಹಕಾರವೂ ರವಿಶಂಕರ್ ಅವರಿಗೆ ಇದ್ದೇ ಇದೆ. (ಏಜೆನ್ಸೀಸ್)


Click it and Unblock the Notifications











