ನ.1ರಂದು ದರ್ಶನ್ ನೇತೃತ್ವದಲ್ಲಿ ಭಾರಿ ಮೆರವಣಿಗೆ
ಚಾಲೆಂಜಿಂಗ್ ಸ್ಟಾರ್ ದರ್ಶನ್ ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವ ದಿನ ನವೆಂಬರ್ 1ರಂದು ಭಾರಿ ಮೆರವಣಿಗೆಯನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಕನ್ನಡ ಚಿತ್ರರಂಗದ ಅದ್ದೂರಿ ಚಿತ್ರ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಬಿಡುಗಡೆಯಾಗುತ್ತಿರುವ ಕಾರಣ ಈ ಮೆರವಣಿಗೆ ನಡೆಯಲಿದೆ.
ಗುರುವಾರ (ನ.1) ಬೆಳಗ್ಗೆ 8.30ಕ್ಕೆ ಬೆಂಗಳೂರಿನ ಶ್ರೀ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ (ಆನಂದರಾವ್ ಸರ್ಕಲ್, ರೈಲ್ವೇ ನಿಲ್ದಾಣದ ಮುಂಭಾಗದಲ್ಲಿ) ಚಾಲೆಂಜಿಂಗ್ ಸ್ಟಾರ್ ದರ್ಶನ್, ಬೆಂಗಳೂರಿನ ಮಹಾಪೌರರಾದ ವೆಂಕಟೇಶ ಮೂರ್ತಿ ಮತ್ತು ಸಂಗೊಳ್ಳಿ ರಾಯಣ್ಣ ಚಿತ್ರತಂಡ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಲಿದೆ.
ಬಳಿಕ ಅಲ್ಲಿಂದ ಅದ್ದೂರಿ ಮೆರವಣಿಗೆ ಮೂಲಕ ಅಣ್ಣಮ್ಮ ದೇವಿಯ ದೇವಸ್ಥಾನಕ್ಕೆ ಬಂದು ತಾಯಿಯ ಆಶೀರ್ವಾದ ಪಡೆಯಲಿದೆ. ಅಲ್ಲಿಂದ ದರ್ಶನ್ ಅಭಿಮಾನಿಗಳು ನರ್ತಕಿ ಚಿತ್ರಮಂದಿರಕ್ಕೆ ತೆರಳಲಿದ್ದಾರೆ.
ಅಖಿಲ ಕರ್ನಾಟಕ ದರ್ಶನ್ ಸೇನಾ ಸಮಿತಿ (ಗಾಂಧಿನಗರ) ವತಿಯಿಂದ ದರ್ಶನ್ ಅವರ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ ಮತ್ತು ಅಣ್ಣಮ್ಮ ದೇವಿಗೆ ವಿಶೇಷ ಪೂಜೆ ಏರ್ಪಡಿಸಲಾಗಿದೆ. ಮಧ್ಯಾಹ್ನ 1.30ಕ್ಕೆ ನರ್ತಕಿ ಚಿತ್ರಮಂದಿರದಲ್ಲಿ ಅನ್ನದಾನ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ.
ರಾಜ್ಯದಾದ್ಯಂತ ಸರಿಸುಮಾರು 200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ 'ರಾಯಣ್ಣ' ಅಬ್ಬರಿಸಿ ಬೊಬ್ಬಿರಿಯಲಿದ್ದಾನೆ. ಈ ಚಿತ್ರದ ವಿತರಣೆ ಹಕ್ಕುಗಳನ್ನು ಎಚ್ ಡಿ ಗಂಗರಾಜು ಪಡೆದಿದ್ದಾರೆ. ಮೊದಲ ವಾರದಲ್ಲಿ ಟಿಕೆಟ್ ಬೆಲೆ ಏರಿಸಲಾಗುತ್ತಿದೆ. ಆದರೆ ಅಭಿಮಾನಿಗಳಿಗೆ ಬ್ಲ್ಯಾಕ್ ಟಿಕೆಟ್ ಸಿಗುವುದೂ ಅನುಮಾನ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ಕಿತ್ತೂರು ಚೆನ್ನಮ್ಮನಾಗಿ ಡಾ. ಜಯಪ್ರದಾ, ಮಲ್ಲಮ್ಮನಾಗಿ ತಾರೆ ನಿಖಿತಾ ತುಕ್ರಲ್ ಸೇರಿದಂತೆ ಶ್ರೀನಿವಾಸಮೂರ್ತಿ, ಉಮಾಶ್ರೀ, ಬ್ಯಾಂಕ್ ಜನಾರ್ದನ್, ಶಶಿಕುಮಾರ್ ಒಳಗೊಂಡಂತೆ 25ಕ್ಕೂ ಹೆಚ್ಚು ಕಲಾವಿದರ ಬಳಗವೇ ಚಿತ್ರದಲ್ಲಿದೆ.
ರಾಯಣ್ಣನ ತ್ಯಾಗ, ಬಲಿದಾನ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿಯಾಗಿತ್ತು. ಈಗಾಗಲೆ ರಾಯಣ್ಣನ ಬಗ್ಗೆ ಅನೇಕ ಚಿತ್ರಗಳು ಬಂದಿದ್ದರೂ ಈ ಪ್ರಮಾಣದ ಬಜೆಟ್ ನಲ್ಲಿ ಯಾರೂ ಚಿತ್ರವನ್ನು ನಿರ್ಮಿಸಿರಲಿಲ್ಲ. ಸಾಲು ಸಾಲು ರಜೆಗಳು, ರಾಜ್ಯೋತ್ಸವ ಸಂಭ್ರಮ ಸಡಗರದ ನಡುವೆ 'ರಾಯಣ್ಣ' ಚಿತ್ರ ಬಿಡುಗಡೆಯಾಗುತ್ತಿದೆ.
ನಾಗಣ್ಣ ನಿರ್ದೇಶನದ ಚಿತ್ರಕ್ಕೆ ಯಶೋವರ್ಧನ್ ಅವರ ಸಂಗೀತ ಹಾಗೂ ಕೇಶವಾದಿತ್ಯ ಅವರ ಸಾಹಿತ್ಯ ಚಿತ್ರಕ್ಕಿದೆ. ಸಂಗೊಳ್ಳಿ ರಾಯಣ್ಣನ ಚಿತ್ರ ವಿಮರ್ಶೆಗಾಗಿ ನಿಮ್ಮ ನೆಚ್ಚಿನ ತಾಣ ಒನ್ಇಂಡಿಯಾ ಕನ್ನಡ ಜಾಲತಾಣದಲ್ಲಿ ನಿರೀಕ್ಷಿಸಿ. (ಒನ್ಇಂಡಿಯಾ ಕನ್ನಡ)


Click it and Unblock the Notifications











