ಸಂಗೊಳ್ಳಿ ರಾಯಣ್ಣ, ಬ್ಲ್ಯಾಕ್ ಟಿಕೆಟ್ ನವರಿಗೆ ಸುಗ್ಗಿ

ಬಿಡುಗಡೆಯಾದ ರಾಜ್ಯೋತ್ಸವದ ದಿನದಿಂದ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ಸಂಗೊಳ್ಳಿ ರಾಯಣ್ಣ ಚಿತ್ರ ವೀಕ್ಷಿಸಲು ಕುಟಂಬ ಸಮೇತ ಜನರು ಚಿತ್ರಮಂದಿರದ ಕಡೆ ತೆರಳುತ್ತಿರುವುದು ಬ್ಲ್ಯಾಕ್ ಟಿಕೆಟ್ ಮಾರುವವರಿಗೆ ವರವಾಗಿ ಪರಿಣಮಿಸುತ್ತಿದೆ.
ಬೆಂಗಳೂರು ನಗರ ಮತ್ತು ಉತ್ತರ ಕರ್ನಾಟಕದ ಭಾಗದಲ್ಲಿ ಚಿತ್ರಕ್ಕೆ ಊಹಿಸಲೂ ಅಸಾಧ್ಯವಾದ ಕ್ರೇಜ್ ಉಂಟಾಗಿದ್ದು ಟಿಕೇಟಿನ ಬೇಡಿಕೆ ವಿಪರೀತ ಹೆಚ್ಚಾಗಿದೆ.
ಬೆಂಗಳೂರು ನಗರದಲ್ಲಿ ಚಿತ್ರ ಬಿಡುಗಡೆಯಾದ ಪ್ರಮುಖ ಚಿತ್ರಮಂದಿರಗಳಾದ ನರ್ತಕಿ, ಸಿದ್ದೇಶ್ವರ, ನವರಂಗ್, ಭಾರತಿ, ಪ್ರಸನ್ನ, ಮೋಹನ್ ಮುಂತಾದ ಚಿತ್ರಮಂದಿರದಲ್ಲಿ ಕಾಳಸಂತೆಯಲ್ಲಿ ಟಿಕೆಟ್ ಮಾರುವವರು ದಿನವೊಂದಕ್ಕೆ ಐದರಿಂದ ಎಂಟು ಸಾವಿರ ರೂಪಾಯಿವರೆಗೆ ಲಾಭ ಮಾಡಿಕೊಳ್ಳುತ್ತಿದ್ದಾರೆನ್ನಲಾಗಿದೆ.
ಕೇವಲ ಶೇ. 60% ಮಾತ್ರ ಟಿಕೆಟನ್ನು ಕೌಂಟರ್ ನಲ್ಲಿ ವಿತರಿಸುತ್ತಿದ್ದಾರೆ. ಉಳಿದ ಟಿಕೆಟ್ ಬ್ಲ್ಯಾಕ್ ಮಾರುವವರ ಕೈ ಸೇರುತ್ತಿದೆ ಎಂದು ಸಿನಿಪ್ರಿಯರು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ. ಇನ್ನು ಇಂದು (ನ 3) ಮತ್ತು ನಾಳೆ (ನ 4) ವಾರಾಂತ್ಯವಾಗಿರುವುದರಿಂದ ಥಿಯೇಟರ್ ಕಡೆ ಜನಸಾಗರವೇ ಹರಿದು ಬರುವ ಸಾಧ್ಯತೆಗಳಿವೆ.
ಬಿಡುಗಡೆಗೆ ಮುನ್ನ ಇದ್ದ ಕ್ರೇಜ್, ಅಚ್ಚುಕಟ್ಟಾಗಿ ಮೂಡಿ ಬಂದ ಚಿತ್ರ, ಮಾಧ್ಯಮಗಳ ಪ್ರಶಂಶೆಗಳ ನಡುವೆ ದರ್ಶನ್ ಅಭಿನಯದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರ ಜಯದ ನಗೆ ಬೀರಿದ್ದಾನೆ ಅಲ್ಲದೆ ಗಳಿಕೆಯಲ್ಲಿ ಸಾರಥಿ ಚಿತ್ರವನ್ನೂ ಮೀರುವಲ್ಲಿ ದಾಪುಗಾಲು ಹಾಕುತ್ತಿದ್ದಾನೆ.
ಈ ಹಿಂದೆ ಉಪೇಂದ್ರ ಅಭಿನಯದ ರಕ್ತಕಣ್ಣೀರು ಮತ್ತು ಶಿವರಾಜ್ ಕುಮಾರ್ ಅಭಿನಯದ ಜೋಗಿ ಚಿತ್ರ ಬಿಡುಗಡೆಯಾದಾಗಲೂ ಬ್ಲ್ಯಾಕ್ ಟಿಕೆಟ್ ಮಾಡುವವರು ಅದೆಷ್ಟೋ ಅವರ ಸಾಲ ಟಿಕೆಟ್ ಮಾರಿ ತೀರಿಸಿದ್ದರಂತೆ.


Click it and Unblock the Notifications











