ಹುಬ್ಬಳ್ಳಿಯಲ್ಲಿ 'ಕಾಂತಾರ' ಮರುಸೃಷ್ಟಿ, ಶಾಲಾ ವಿದ್ಯಾರ್ಥಿಗಳಿಂದ ಪ್ರಯೋಗ
ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ 'ಕಾಂತಾರ' ಭಾರಿ ದೊಡ್ಡ ಹಿಟ್ ಆಗಿದ್ದು, ದೈವದ ಆಚರಣೆ, ಕೋಲ, ಕಂಬಳದ ವಿಷಯಗಳನ್ನು ಒಳಗೊಂಡಿರುವ ಈ ಸಿನಿಮಾ ಹಲವು ದಾಖಲೆಗಳನ್ನು ನಿರ್ಮಿಸಿದೆ.
'ಕಾಂತಾರ' ಸಿನಿಮಾ ಹಿಟ್ ಆದ ಬಳಿಕ ಹಲವರು 'ಕಾಂತಾರ'ದಲ್ಲಿ ಬರುವ ಪಂಜುರ್ಲಿ ದೈವದಂತೆ ವೇಷತೊಟ್ಟು ಅನುಕರಣೆ ಮಾಡುವ ಯತ್ನ ಮಾಡುತ್ತಲೇ ಬಂದಿದ್ದಾರೆ. ಪಂಜುರ್ಲಿಯ ಅನುಕರಣೆ ಮಾಡುವುದು ಬೇಡವೆಂದು ಚಿತ್ರತಂಡ ಮನವಿ ಮಾಡಿದ್ದರೂ ಸಹ ಅದು ನಿಂತಿಲ್ಲ. ಕೆಲವರು ಕ್ಷುಲ್ಲಕವಾಗಿ ರೀಲ್ಸ್ಗಳಿಗೆಲ್ಲ ಹೀಗೆ ಅನುಕರಣೆ ಮಾಡಿ ವಿವಾದ ಎಬ್ಬಿಸಿದ್ದೂ ಇದೆ.
ಹೌದು, ನಗರದ ಬೈರಿದೇವರಕೊಪ್ಪದಲ್ಲಿರುವ ಶ್ರೀ ಗುರು ಮಹಾವಿದ್ಯಾಪೀಠ ಶಾಲೆಯಲ್ಲಿ ಹಮ್ಮಿಕೊಳ್ಳಲಾದ ವಾರ್ಷಿಕೋತ್ಸವದಲ್ಲಿ, ಸಾಯಿಕಿಶನ ಸುನಿಲ ರೇವಣಕರ ಎಂಬ ಬಾಲಕ 'ಕಾಂತಾರ' ಚಿತ್ರದ ಪಂಜುರ್ಲಿ ದೈವದ ಪಾತ್ರವನ್ನು ಮರು ಸೃಷ್ಟಿ ಮಾಡಿದ್ದಾನೆ.

ವಾರ್ಷಿಕೋತ್ಸವದಲ್ಲಿ 'ಪಂರ್ಜುಲಿ'ಯ ವೇಷ ಧರಿಸಿ, 'ಕಾಂತಾರ'ದ ಕೆಲ ದೃಶ್ಯಗಳನ್ನು ವೇದಿಕೆ ಮೇಲೆ ಮರುಸೃಷ್ಟಿ ಮಾಡಿದ್ದಾನೆ ಈ ಬಾಲಕ. ಪಂಜುರ್ಲಿಯ ಪಾತ್ರ ಮಾಡುವ ಮುನ್ನ ಅದಕ್ಕೆ ಬೇಕಾದ ನಿಯಮ ಪಾಲಿಸಿದ್ದಾನೆ. ಈ ಪಾತ್ರ ಮಾಡಲು ಸಾಯಿ ಕಿಶನ್ 9 ದಿನಗಳ ವೃತ ಮಾಡಿ, ಈ ಪಾತ್ರವನ್ನು ಅಭ್ಯಾಸ ಮಾಡಿ ಬಹಳ ಸುಂದರ ಮತ್ತು ಅಚ್ಚುಕಟ್ಟಾಗಿ ನಿಭಾಯಿಸಿದ್ದಾನೆ.
ಬಾಲಕ ಸಾಯಿಕಿಶನ್, 'ಕಾಂತಾರ' ದೃಶ್ಯದ ಅನುಕರಣೆ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಸಿನಿಮಾದಲ್ಲಿ ಊರ ಜನರು, ಅರಣ್ಯಾಧಿಕಾರಿಯ ಕೈ ಹಿಡಿದುಕೊಳ್ಳುವ ದೈವ, ಎಲ್ಲರನ್ನೂ ಕಾಪಾಡುವಂತೆ ಹೇಳಿದಂತೆ, ಸಾಯಿಕಿಶನ್, ತಮ್ಮ ಶಾಲಾ ಮುಖ್ಯೋಪಾಧ್ಯಾಯರ ಕೈಹಿಡಿದು ಮಕ್ಕಳನ್ನು ಕಾಪಾಡುವಂತೆ ಹೇಳುತ್ತಾನೆ.
'ಕಾಂತಾರ' ಸಿನಿಮಾದಲ್ಲಿ ಬರುವ ದೈವದ ಅನುಕರಣೆ ಮಾಡಬೇಡಿ ಎಂದು ನಿರ್ದೇಶಕ ರಿಷಬ್ ಶೆಟ್ಟಿ ಮನವಿ ಮಾಡಿದ್ದರು. ತಾವು ಬಹಳ ನೇಮ ನಿಷ್ಠೆ ಪಾಲಿಸಿ ಅನುಕರಣೆ ಮಾಡಿದ್ದೇವೆ, ಎಲ್ಲರೂ ಹಾಗೆ ಮಾಡಲಾಗುವುದಿಲ್ಲ. ಸಾಮಾಜಿಕ ಜಾಲತಾಣಕ್ಕಾಗಿ ದೈವದ ಅನುಕರಣೆ ಮಾಡಿದರೆ ಅಪಮಾನ ಮಾಡಿದಂತಾಗುತ್ತದೆ ಎಂದು ಮನವಿ ಮಾಡಿದ್ದರು.


Click it and Unblock the Notifications











