ಕನ್ನಡದ ಹಿರಿಯ ನಟ ಗೋವಿಂದ ರಾವ್ ನಿಧನ
ಕನ್ನಡ ಚಿತ್ರರಂಗ, ಕಿರುತೆರೆಯ ಹಿರಿಯ ನಟ ಫ್ರೊ.ಜಿ.ಕೆ ಗೋವಿಂದ ರಾವ್ ಇಂದು ಮುಂಜಾನೆ ನಿಧನ ಹೊಂದಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.
ಚಿಂತಕರು, ಲೇಖಕರೂ, ಪ್ರಾಧ್ಯಾಪಕರೂ ಆಗಿದ್ದ ಗೋವಿಂದ ರಾವ್ ರಂಗಭೂಮಿ, ಸಿನಿಮಾ, ಧಾರಾವಾಹಿಗಳಲ್ಲಿ ಸಕ್ರಿಯರಾಗಿದ್ದರು. ಇಂದು ಬೆಳಗಿನ ಜಾವ ಗೋವಿಂದ ರಾವ್ ನಿಧನ ಹೊಂದಿದ್ದು, ಅವರ ಮೊಮ್ಮಗಳು ಡಾ.ಅಪೂರ್ವ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಟಿ.ಎನ್.ಸೀತಾರಾಮ್ ನಿರ್ದೇಶನದ ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದ ಗೋವಿಂದ ರಾವ್, ಶಂಕರ್ ನಾಗ್ ನಿರ್ದೇಶಿಸಿದ್ದ 'ಮಾಲ್ಗುಡಿ ಡೇಸ್' ನಲ್ಲಿಯೂ ನಟಿಸಿದ್ದರು. ಜೊತೆಗೆ ಹಲವು ಕನ್ನಡ ಸಿನಿಮಾಗಳಲ್ಲಿಯೂ ನಟಿಸಿದ್ದರು.

ಗೋವಿಂದ ರಾವ್ ನಿಧನದ ಬಗ್ಗೆ ಶೋಕ ವ್ಯಕ್ತಪಡಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ''ಹಿರಿಯ ಲೇಖಕ, ಚಿಂತಕ, ನಟ ಪ್ರೊ.ಜಿ.ಕೆ.ಗೋವಿಂದರಾವ್ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ನನ್ನ ಹಿತೈಷಿ, ಮಾರ್ಗದರ್ಶಕ ಮತ್ತು ಆತ್ಮೀಯ ಸ್ನೇಹಿತರಾಗಿದ್ದ ಪ್ರೊ.ಜಿಕೆಜಿ ಅವರಿಗೆ ಗೌರವದ ನಮನಗಳು.ಅವರನ್ನು ಕಳೆದುಕೊಂಡ ಕುಟುಂಬದ ಸದಸ್ಯರು, ಶಿಷ್ಯರು, ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ'' ಎಂದು ಟ್ವೀಟ್ ಮಾಡಿದ್ದಾರೆ.
ಗೋವಿಂದ ರಾವ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ನಿರ್ದೇಶಕ ಟಿ.ಎನ್.ಸೀತಾರಾಮ್ ''ನಮ್ಮ ತಂಡದ ಅನೇಕ ಧಾರಾವಾಹಿ ಗಳಲ್ಲಿ ಮುಖ್ಯ ಪಾತ್ರಗಳನ್ನು ಮಾಡುತ್ತಾ, ಮಾಡುತ್ತಾ ನಮ್ಮೆಲ್ಲರಿಗೂ ತುಂಬಾ ಹತ್ತಿರವಾದವರು ನೀವು. ನಿಮ್ಮ, ಜ್ಞಾನ ಪಾಂಡಿತ್ಯ ಕ್ಕಿಂತ ಹೆಚ್ಚಾಗಿ ಹೃದಯದ ಮೂಲಕ ಗೆಳೆಯರ ಜತೆ ಬಾಂಧವ್ಯ ವಿಟ್ಟುಕೊಂಡವರು ನೀವು. ನಿಮ್ಮ ಜತೆ ಜಗಳಗಳು ಗಂಟು ಮುಖದಿಂದ ಕೂಡಿರುತ್ತಿರಲಿಲ್ಲ..ನಗು ಉಲ್ಲಾಸ ಗಳಿಂದ ತುಂಬಿರುತ್ತಿತ್ತು. ಮುಂದಿನ ಧಾರಾವಾಹಿ ಯಲ್ಲಿ ಕೋಪದ ವ್ಯಕ್ತಿ ತ್ವದ, ಆದರೆ ಅಂತಃಕರಣ ತುಂಬಿದ ಮುಖ್ಯಮಂತ್ರಿ ಪಾತ್ರ ಮಾಡಿಸಬೇಕೆಂದು ನಿನ್ನೆ ತಾನೇ ನನ್ನ ತಂಡದವರ ಜತೆ ಮಾತನಾಡುತ್ತಿದ್ದೆ. ಇಷ್ಟು ಬೇಗ ವಿದಾಯ ಹೇಳುತ್ತೀರೆಂದು ಭಾವಿಸಿರಲಿಲ್ಲ'' ಎಂದು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ.


Click it and Unblock the Notifications











