'ಆಟೋ ರಾಜ' ಸಿನಿಮಾ ಖ್ಯಾತಿಯ ಹಿರಿಯ ನಿರ್ಮಾಪಕ ಸಿ. ಜಯರಾಮ್ ನಿಧನ
ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ, ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಸಿ. ಜಯರಾಮ್ ನಿಧನಹೊಂದಿದ್ದಾರೆ. ಸೆಪ್ಟಂಬರ್ 8ರಂದು ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಗುರುವಾರ (ಸೆಪ್ಟಂಬರ್ 9) ಮಧ್ಯಾಹ್ನ 12 ಗಂಟೆಗೆ ಸುಮ್ಮನಹಳ್ಳಿ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಸ್ಯಾಂಡಲ್ವುಡ್ನಲ್ಲಿ ಖ್ಯಾತ ನಿರ್ಮಾಪಕರಾಗಿ ಸಿ. ಜಯರಾಮ್ ಗುರುತಿಸಿಕೊಂಡಿದ್ದರು. ಅನೇಕ ಸ್ಟಾರ್ ನಟರ ಸಿನಿಮಾಗಳನ್ನು ಜಯರಾಜ್ ನಿರ್ಮಾಣ ಮಾಡಿದ್ದಾರೆ.
ಶಂಕರ್ ನಾಗ್ ನಟನೆಯ 'ಆಟೋ ರಾಜ', ಅನಂತ್ ನಾಗ್ ಅಭಿನಯದ 'ನಾ ನಿನ್ನ ಬಿಡಲಾರೆ', ವಿಷ್ಣುವರ್ಧನ್ ಹಾಗೂ ರಜನಿಕಾಂತ್ ನಟಿಸಿದ್ದ 'ಗಲಾಟೆ ಸಂಸಾರ' ಶ್ರೀನಾಥ್-ಆರತಿ ಜೋಡಿಯ 'ಪಾವನ ಗಂಗಾ' ಮುಂತಾದ ಸಿನಿಮಾಗಳನ್ನು ನಿರ್ಮಾಣ ಮಾಡಿದ ಖ್ಯಾತಿ ಸಿ. ಜಯರಾಮ್ ಅವರದ್ದು.
ಸಿ. ಜಯರಾಮ್ ನಿಧನಕ್ಕೆ ಕನ್ನಡ ಚಿತ್ರರಂಗದ ಅನೇಕರು ಕಂಬನಿ ಮಿಡಿಯುತ್ತಿದ್ದಾರೆ. ಗೌರಿ-ಗಣೇಶ್ ಹಬ್ಬದ ಸಂದರ್ಭದಲ್ಲಿಯೇ ಈ ಕಹಿ ಸುದ್ದಿ ಕೇಳಿಬಂದಿರುವುದು ಚಿತ್ರರಂಗಕ್ಕೆ ನೋವಿನ ಸಂಗತಿಯಾಗಿದೆ. ಅಂದಹಾಗೆ ಸಿ. ಜಯರಾಮ್ ಅವರ ಪುತ್ರ ಕೂಡ ಸಿನಿಮಾರಂಗದಲ್ಲಿ ನಿರ್ದೇಶಕರಾಗಿ ಖ್ಯಾತಿಗಳಿಸಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಮಿಲನ ಪ್ರಕಾಶ್ ಎಂದೇ ಖ್ಯಾತಿಗಳಿಸಿದ್ದಾರೆ. ಇವರು ಕೂಡ ಚಂದನವನದಲ್ಲಿ ಯಶಸ್ವಿ ನಿರ್ದೇಶಕ ಎನಿಸಿಕೊಂಡಿದ್ದಾರೆ. ಪುನೀತ್ ನಟನೆಯ 'ಮಿಲನ' ಸಿನಿಮಾ ನಿರ್ದೇಶನದ ಬಳಿಕ ಮಿಲನ ಪ್ರಕಾಶ್ ಎಂದೇ ಖ್ಯಾತಿಗಳಿಸಿದ್ದಾರೆ. ಬಳಿಕ ದರ್ಶನ್ ಅಭಿನಯದ 'ತಾರಕ್' ಸೇರಿದಂತೆ ಮುಂತಾದ ಸಿನಿಮಾಗಳಿಗೆ ಪ್ರಕಾಶ್ ಆಕ್ಷನ್ ಕಟ್ ಹೇಳಿದ್ದಾರೆ.

ಇದೀಗ ಮತ್ತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಆಕ್ಷನ್ ಕಟ್ ಹೇಳುವ ತಯಾರಿಯಲ್ಲಿದ್ದಾರೆ. ತಾರಕ್ ಸಿನಿಮಾ ಬಳಿಕ ಮಿಲನಾ ಪ್ರಕಾಶ್ ಮತ್ತೆ ದರ್ಶನ್ ಜೊತೆ ಸಿನಿಮಾ ಮಾಡುವುದಾಗಿ ಬಹಿರಂಗ ಪಡಿಸಿದ್ದಾರೆ. ಆದರೆ ಯಾವಾಗ, ಯಾವ ರೀತಿಯ ಸಿನಿಮಾ ಎನ್ನುವುದು ಇನ್ನು ಬಹಿರಂಗವಾಗಿಲ್ಲ. ಅಷ್ಟರಲ್ಲೇ ತಂದೆಯ ಅಗಲಿಗೆ ಪ್ರಕಾಶ್ ಅವರಿಗೆ ನೋವು ತಂದಿದೆ.


Click it and Unblock the Notifications











