ದುನಿಯಾ ವಿಜಯ್ ಗೆ ಬಿಡುಗಡೆ ಭಾಗ್ಯ: ಜಾಮೀನು ನೀಡಿದ ಸೆಷನ್ಸ್ ಕೋರ್ಟ್
Recommended Video

ಜಿಮ್ ಟ್ರೈನರ್ ಮಾರುತಿ ಗೌಡ ಕಿಡ್ನ್ಯಾಪ್ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ನಟ ದುನಿಯಾ ವಿಜಯ್ ಅವರಿಗೆ ಕೊನೆಗೂ ಜಾಮೀನು ಸಿಕ್ಕಿದೆ.
ದುನಿಯಾ ವಿಜಿ ಮತ್ತು ಸ್ನೇಹಿತರು ಸೆಷನ್ಸ್ ಕೋರ್ಟ್ ನಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನ ಪುರಸ್ಕರಿಸಿದ ಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ. ಇಬ್ಬರು ಶ್ಯೂರಟಿ ನೀಡಿದ್ದು 1 ಲಕ್ಷ ಬಾಂಡ್ ನೀಡಲಾಗಿದೆ.
ಈ ವೇಳೆ ನ್ಯಾಯಾಧೀಶ ರಾಮಲಿಂಗ ಗೌಡ ಅವರು ನಟ ದುನಿಯಾ ವಿಜಯ್ ಅವರಿಗೆ ಕಿವಿಮಾತು ಹೇಳಿದ್ದಾರೆ. 'ನೀವೊಬ್ಬ ಹೀರೋ, ನೀವು ಅವರಿಗೆ ರೋಲ್ ಮಾಡೆಲ್ ಆಗಬೇಕು. ಮತ್ತೆ ಈ ರೀತಿ ಪ್ರಕರಣದಲ್ಲಿ ನೀವು ಕೋರ್ಟ್ ಗೆ ಬರಬಾರದು' ಎಂದು ವಕೀಲ ಮೂಲಕ ಸೂಚಿಸಿದ್ದಾರೆ.
ಈ ಮೂಲಕ ಕಳೆದ 8 ದಿನಗಳಿಂದ ಪರಪ್ಪನ ಅಗ್ರಹಾರದ ಕೇಂದ್ರ ಕಾರಗೃಹದಲ್ಲಿರುವ ದುನಿಯಾ ವಿಜಯ್, ಡ್ರೈವರ್ ಪ್ರಸಾದ್, ಬಾಡಿ ಬಿಲ್ಡರ್ ಪ್ರಸಾದ್ ಮತ್ತು ಮಣಿಗೆ ರಿಲೀಫ್ ಸಿಕ್ಕಿದೆ.

ಈ ಹಿಂದೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 8ನೇ ಎಸಿಎಂಎಂ ಕೋರ್ಟ್ 12 ದಿನಗಳ ಕಾಲ ನ್ಯಾಯಾಂಗ ಬಂಧನದ ಆದೇಶ ನೀಡಿತ್ತು. ನಂತರ ಮ್ಯಾಜಿಸ್ಟ್ರೇಟ್ ಕೋರ್ಟ್ ಕೂಡ ದುನಿಯಾ ವಿಜಯ್ ಅವರ ಜಾಮೀನು ಅರ್ಜಿಯನ್ನ ತಿರಸ್ಕರಿಸಿತ್ತು. ಆಮೇಲೆ ಸೆಷನ್ಸ್ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಸೆಪ್ಟೆಂಬರ್ 29 ರಂದು ವಿಚಾರಣೆ ನಡೆಸಿದ್ದ ಕೋರ್ಟ್ ಇಂದು ತೀರ್ಪು ಪ್ರಕಟಿಸಿ ಜಾಮೀನು ನೀಡಿದೆ.
ಸದ್ಯ, ಜಾಮೀನು ಆದೇಶದ ಪ್ರತಿ ಪಡೆದುಕೊಳ್ಳುವ ವಿಜಯ್ ಪರ ವಕೀಲರು, ಇಂದೇ ಸೆಂಟ್ರೆಲ್ ಜೈಲ್ ಗೆ ಆದೇಶದ ಪ್ರತಿ ತಲುಪಿಸುವಂತಹ ತಯಾರಿ ನಡೆಸಿದ್ದಾರೆ. ಜಾಮೀನು ಪ್ರಕ್ರಿಯೆ ಮುಗಿದರೇ ಇಂದು ಜೈಲಿನಿಂದ ಬಿಡುಗಡೆಯಾಗವ ಸಾಧ್ಯತೆ ಇದೆ.
ಘಟನೆಯ ವಿವರ:
ಸೆಪ್ಟೆಂಬರ್ 22ರ ರಾತ್ರಿ ಬೆಂಗಳೂರಿನ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಮಿಸ್ಟರ್ ಬೆಂಗಳೂರು ಬಾಡಿ ಬಿಲ್ಡಿಂಗ್ ಕಾಂಪಿಟೇಷನ್ ನಡೆಯುತ್ತಿತ್ತು. ಈ ವೇಳೆ ದುನಿಯಾ ವಿಜಿ ಮತ್ತು ತಂಡ ಟ್ರೈನರ್ ಮಾರುತಿ ಗೌಡ ಅವರ ಮೇಲೆ ಹಲ್ಲೆ ಮಾಡಿ, ಕಾರಿನಲ್ಲಿ ಕರೆದೊಯ್ದಿದ್ದು, ಬೆದರಿಕೆ ಹಾಕಿದ್ದಾರೆ ಎಂದು ಪಾನಿಪುರಿ ಕಿಟ್ಟಿ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ವಿಜಿ ಮತ್ತು ಸ್ನೇಹಿತರನ್ನ ಹೈಗ್ರೌಂಡ್ ಪೊಲೀಸರು ಬಂಧಿಸಿದ್ದರು. ವಿಚಾರಣೆ ನಡೆಸಿದ್ದ 8ನೇ ಎಸಿಎಂಎಂ ನ್ಯಾಯಾಲಯ 12 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿತ್ತು.


Click it and Unblock the Notifications











