ರಾಜ್ ಸ್ಮಾರಕ ಉದ್ಘಾಟನೆಗೆ ಶಾರುಖ್ ಖಾನ್, ಹೃತಿಕ್?
ಕನ್ನಡ ಚಿತ್ರರಂಗವೇ ಎರೆಡೆರೆಡು ದಿನ ರಜೆ ಹಾಕಿ ಕಾದು ಕುಳಿತಿರೋ ನವೆಂಬರ್ ಸಂಭ್ರಮ ಅಂದ್ರೆ ಅದು ರಾಜ್ ಸ್ಮಾರಕದ ಉದ್ಘಾಟನೆ. ಕಂಠೀರವ ಸ್ಟುಡಿಯೋ ಬಳಿ ಇರೋ ರಾಜ್ ಸ್ಮಾರಕದ ಉದ್ಘಾಟನೆ ಇದೇ ನವೆಂಬರ್ 29ರಂದು ನಡೆಯಲಿದ್ದು ಇದಕ್ಕೆ ಬಾಲಿವುಡ್ ತಾರೆಯರ ಸಂಗಮವಾಗಲಿದೆ.
ಇಲ್ಲಿಯವರೆಗೂ ತಮಿಳು ಸೂಪರ್ ಸ್ಟಾರ್ ರಜನಿಕಾಂತ್, ತೆಲುಗಿನ ಮೆಗಾಸ್ಟಾರ್ ಚಿರಂಜೀವಿ, ಬಾಲಿವುಡ್ ನಟ ಅಮಿತಾಬ್ ರಂತಹ ಮೇರು ತಾರೆಯರು ರಾಜ್ ಸ್ಮಾರಕದ ಲೋಕಾರ್ಪಣೆಗೆ ಬರ್ತಿರೋ ಸುದ್ದಿ ಬಂದಿತ್ತು. [ರಾಜ್ ಸ್ಮಾರಕ ಲೋಕಾರ್ಪಣೆಗೆ ಬಿಗ್ ಬಿ, ರಜನಿ, ಚಿರು]
ಈಗ ಬಾಲಿವುಡ್ ಬಾದ್ ಶಾ ಶಾರುಖ್ ಕೂಡ ಅಮಿತಾಬ್ ಜೊತೆ ಬರುವ ಸಾಧ್ಯತೆಯಿದೆ. ಮತ್ತೊಬ್ಬ ಸೂಪರ್ ಸ್ಟಾರ್ ಹೃತಿಕ್ ರೋಷನ್ ಗೆ ಕೂಡ ಆಹ್ವಾನ ಹೋಗಿದ್ದು ಹೃತಿಕ್ ಕೂಡ ಬರುವ ಸಾಧ್ಯತೆ ಇದೆ ಅಂತಿದೆ ರಾಜ್ ಸ್ಮಾರಕ ಸಮಿತಿಯ ಮೂಲಗಳು.

ಒಟ್ಟಾರೆ ಕನ್ನಡದ ಕಣ್ಮಣಿಯ ಸಾಧನೆ ಸ್ಮರಿಸೋಕೆ ಭಾರತೀಯ ಚಿತ್ರರಂಗವೇ ಬೆಂಗಳೂರಿಗೆ ಬಂದಿಳಿಯಲಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಖ್ಯಾತ ನಟರಾದ ಅಮಿತಾಬ್ ಬಚ್ಚನ್, ರಜನೀಕಾಂತ್, ಕಮಲಹಾಸನ್, ಚಿರಂಜೀವಿ, ಮುಮ್ಮುಟ್ಟಿ, ವಸತಿ ಸಚಿವರೂ ಆಗಿರುವ ಅಂಬರೀಶ್ ಹಾಗೂ ಬಿ. ಸರೋಜಾದೇವಿ ಅವರನ್ನು ಆಹ್ವಾನಿಸಲು ಸಮಿತಿಯು ತೀರ್ಮಾನಿಸಿದೆ.
ಸ್ಮಾರಕ ಉದ್ಘಾಟನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ನೆರವೇರಿಸುವ ಸಂಬಂಧ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಆರ್. ರೋಷನ್ ಬೇಗ್ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಗಂಗರಾಜು ಅವರ ಅಧ್ಯಕ್ಷತೆಯಲ್ಲಿ ಸಾಂಸ್ಕೃತಿಕ ಸಮಿತಿಗಳನ್ನು ರಚಿಸಲಾಗಿದೆ.


Click it and Unblock the Notifications











