ಕುಂಬಳಕಾಯಿ ಒಡೆಸಿಕೊಂಡ ಶರಣ್ 'ವಿ' ಚಿತ್ರ
ಕನ್ನಡ ಹಾಸ್ಯನಟರ ಸಾಲಿನಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿರುವ ನಟ ಶರಣ್. Rambo ಚಿತ್ರದ ಮೂಲಕ ಅವರು ಪೂರ್ಣ ಪ್ರಮಾಣದ ನಾಯಕ ನಟರಾಗಿ ಗೆದ್ದಿದ್ದಾರೆ. ಈಗ 'ವಿ' ಸಿಂಬಲ್ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
ಇದೇ ಮೊದಲ ಬಾರಿಗೆ ನಂದಕಿಶೋರ್ ಆಕ್ಷನ್ ಕಟ್ ನಲ್ಲಿ ಮೂಡಿಬರುತ್ತಿರುವ ಚಿತ್ರ. ಇತ್ತೀಚೆಗೆ ಮಂಜಲಿ ಸ್ಟುಡಿಯೋದಲ್ಲಿ ರೀ ರೆಕಾರ್ಡಿಂಗ್ ಮುಗಿಸಿಕೊಂಡ 'ವಿ' ಚಿತ್ರ ಜುಲೈನಲ್ಲಿ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ.
ಈಗಾಗಲೆ ಚಿತ್ರದ ಆಡಿಯೋಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆನಂದ್ ಆಡಿಯೋ ಮೂಲಕ ಹೊರಬಂದಿರುವ ಚಿತ್ರದ ಧ್ವನಿಸುರುಳಿ ಬಿಸಿಬಿಸಿ ಸಮೋಸದಂತೆ ಬಿಕರಿಯಾಗುತ್ತಿದೆ. ಅರ್ಜುನ್ ಜನ್ಯಾ ಅವರ ಸಂಗೀತ ಸಂಯೋಜನೆಯ ಹಾಡುಗಳು ಇಂಟರ್ ನೆಟ್ ನಲ್ಲೂ ಸದ್ದು ಮಾಡುತ್ತಿವೆ.ಕೆ.ಎಸ್.ಚಂದ್ರಶೇಖರ್ ಅವರ ಛಾಯಾಗ್ರಹಣ ಇರುವ ಚಿತ್ರದ ನಾಯಕಿ ಅಸ್ಮಿತಾ ಸೂದ್. ಪಾತ್ರವರ್ಗದಲ್ಲಿ ತಬಲಾ ನಾಣಿ, ಅವಿನಾಶ್, ರಮೇಶ್ ಭಟ್, ಸಾಧು ಕೋಕಿಲ ಮುಂತಾದವರಿದ್ದಾರೆ.
ಚಿತ್ರದ ಸಿಂಬಲ್ ವಿಭಿನ್ನ, ವಿನೋದ, ವಿಸ್ಮಯ ಎಂದು ಅಂದುಕೊಳ್ಳಬಹುದು. ಎರಡು ಎಂದಾದರೂ ಭಾವಿಸಕೊಳ್ಳಬಹುದು ಎನ್ನುತ್ತಾರೆ ಶರಣ್. ಸಂಪೂರ್ಣ ಹಾಸ್ಯಮಯ ಈ ಚಿತ್ರವನ್ನು ನಂದಕಿಶೋರ್ ನಿರ್ದೇಶಿಸುತ್ತಿದ್ದಾರೆ. ಎಸ್.ಆರ್.ಎಸ್ ಮೀಡಿಯಾ ವಿಷನ್ ಎಂಬ ಲಾಂಛನದಲ್ಲಿ ಆನಂದ್ ಆಡಿಯೋ ಮೋಹನ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಶ್ರೀನಾಥ್ ಕಥೆ, ಚಿತ್ರಕಥೆ ಹೆಣೆದಿದ್ದಾರೆ. ಪ್ರಶಾಂತ್ ಸಂಭಾಷಣೆ ಬರೆದಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತವಿರುವ ಈ ಚಿತ್ರಕ್ಕೆ ಚಂದ್ರಶೇಖರ್ ಅವರ ಛಾಯಾಗ್ರಹಣವಿದೆ. ಈಗಾಗಲೆ ಕುಂಬಳಕಾಯಿ ಒಡೆಸಿಕೊಂಡಿರುವ ಈ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications












