ಸುಮ್ ಸುಮ್ನೆ ಸುಸುರ್ಬತ್ತಿ ಅಂಟಿಸುವ 'ವಿಘ್ನ'ಸಂತೋಷಿಗಳೇ.. ಸ್ವಲ್ಪ ಶಿವಣ್ಣ ಮಾತು ಕೇಳಿ...
ಸ್ಯಾಂಡಲ್ ವುಡ್ ನಲ್ಲಿ ಶಿವರಾಜ್ ಕುಮಾರ್ ಕಂಡ್ರೆ ಸುದೀಪ್ ಗೆ ಆಗಲ್ಲ... ಶಿವರಾಜ್ ಕುಮಾರ್ ಗೂ ದರ್ಶನ್ ಗೂ ಆಗ್ಬರಲ್ಲ.... ಅವರನ್ನ ಕಂಡ್ರೆ ಇವರಿಗೆ ಆಗಲ್ಲ... ಒಟ್ನಲ್ಲಿ ಯಾರನ್ನ ಕಂಡ್ರೆ ಯಾರಿಗೂ ಆಗ್ಬರಲ್ಲ ಅಂತ ಅಂತೆ-ಕಂತೆ ಕಟ್ಟಿ ಬತ್ತಿ ಇಡುವವರು ಸುಮಾರು ಜನ ಇರಬಹುದು.
ಯಾರು ಏನೇ ಮಾಡಿದರೂ, ಶಿವರಾಜ್ ಕುಮಾರ್ ಗೆ ಮಾತ್ರ ಯಾರ ಮೇಲೆಯೂ ದ್ವೇಷ ಇಲ್ಲ. ಎಲ್ಲರೊಂದಿಗೆ ತಾವೂ ಒಬ್ಬರಾಗಿ ಇರಬೇಕು ಎಂದು ಬಯಸುವ ಅಜಾತಶತ್ರು ಶಿವರಾಜ್ ಕುಮಾರ್.
''ಇಡೀ ಇಂಡಸ್ಟ್ರಿ ನನ್ನ ಫ್ರೆಂಡ್ಸ್. ದ್ವೇಷ ಅನ್ನೋದು ನನಗೆ ಬರಲ್ಲ. ನಾವೆಲ್ಲ ಒಳ್ಳೆ ಸ್ನೇಹಿತರು'' ಎಂದು ಹೇಳುವ ಮೂಲಕ ಸುಮ್ ಸುಮ್ನೆ ಸುಸುರ್ಬತ್ತಿ ಹಚ್ಚಿ ಮಜಾ ತೆಗೆದುಕೊಳ್ಳುವ 'ವಿಘ್ನ' ಸಂತೋಷಿಗಳಿಗೆ ಶಿವಣ್ಣ ಮಾತಲ್ಲೇ ಪೆಟ್ಟು ಕೊಟ್ಟಿದ್ದಾರೆ. ಮುಂದೆ ಓದಿರಿ...

ಎಲ್ಲವೂ ಸುಳ್ಳು....
''ಸುದೀಪ್ ಹಾಗೂ ನನ್ನ ನಡುವೆ ಏನೋ ಆಗಿದೆ ಅಂತೆಲ್ಲ ಚಿಕ್ಕ ಚಿಕ್ಕ ಮಾತುಗಳು ಕೇಳಿಬರುತ್ತವೆ. ಅದೆಲ್ಲವೂ ಸುಳ್ಳು'' ಎಂದು 'ಪಬ್ಲಿಕ್ ಟಿವಿ'ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಶಿವರಾಜ್ ಕುಮಾರ್ ಹೇಳಿದ್ದಾರೆ.

ಎಲ್ಲವೂ ಕ್ಷಣಿಕ
''ಕೋಪದ ಟೈಮ್ ನಲ್ಲಿ ನಾನು ಮಾತನಾಡಿರಬಹುದು, ಅವರೂ ಮಾತನಾಡಿರಬಹುದು. ಆದರೆ ಅದೆಲ್ಲವೂ ಕ್ಷಣಿಕ. ನಾವೆಲ್ಲ ಚೆನ್ನಾಗಿ ಇದ್ದೇವೆ. ನಾವೆಲ್ಲ ಒಳ್ಳೆ ಸ್ನೇಹಿತರು, ಒಟ್ಟಿಗೆ ಸಿನಿಮಾ ಮಾಡುತ್ತಿದ್ದೇವೆ'' ಎನ್ನುವ ಮೂಲಕ ತಮ್ಮ ಒಗ್ಗಟ್ಟನ್ನ ಶಿವಣ್ಣ ಪ್ರದರ್ಶಿಸಿದ್ದಾರೆ.

ದರ್ಶನ್ ಜೊತೆ ಸಿನಿಮಾ ಮಾಡುವೆ
''ದರ್ಶನ್ ಜೊತೆ ಸಿನಿಮಾ ಮಾಡಬೇಕು ಅಂದರೂ ಮಾಡುತ್ತೇನೆ. ನಾನು ಯಾಕೆ ಇಲ್ಲ ಅಂತ ಹೇಳಲಿ. ನಾನು ಎಲ್ಲರೊಂದಿಗೆ ಇರಲು ಇಷ್ಟ ಪಡುತ್ತೇನೆ'' ಎಂದಿದ್ದಾರೆ ಶಿವಣ್ಣ

ಅಭಿಮಾನಿಗಳೇ... ಈ ಮಾತು ನಿಮಗೆ ನೆನಪಿರಲಿ...
ಸಾಮಾಜಿಕ ಜಾಲತಾಣಗಳಲ್ಲಿ ಸ್ಟಾರ್ ನಟರುಗಳ ಅಭಿಮಾನಿಗಳ ನಡುವೆ ಸಣ್ಣ ಪುಟ್ಟ ವಿಷಯಗಳಿಗೆ ಕಿತ್ತಾಟ-ಜಗಳ ನಡೆಯುತ್ತಲೇ ಇರುತ್ತದೆ. ಹಾಗೆ ಕಿತ್ತಾಡುವ ಅಭಿಮಾನಿಗಳೇ... ಶಿವಣ್ಣ ರವರ ಈ ಮಾತುಗಳನ್ನ ನೆನಪಿನಲ್ಲಿ ಇಟ್ಟುಕೊಳ್ಳಿ.. ಎಲ್ಲಾ ನಟರೂ ಗೆಳೆಯರಾಗಿರುವಾಗ, ಅಭಿಮಾನಿಗಳಾಗಿ ನೀವ್ಯಾಕೆ ಕಿತ್ತಾಡುತ್ತೀರಿ...


Click it and Unblock the Notifications











