''ಮಹದಾಯಿ ಹೋರಾಟಕ್ಕೆ ನಮ್ಮನ್ನು ಮಾತ್ರ ಯಾಕೆ ಕರೆಯುತ್ತೀರಾ'' ಎಂದ ಶಿವಣ್ಣ.!
Recommended Video

ಬೆಂಗಳೂರಿನಲ್ಲಿ ಮಹದಾಯಿ ಹೋರಾಟ ನಡೆಯುತ್ತಿದೆ. ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಛೇರಿ ಮುಂದೆ ನಡೆಯುತ್ತಿರುವ ಈ ಪ್ರತಿಭಟನೆಯಲ್ಲಿ ಅನೇಕ ರೈತರು ಭಾಗಿಯಾಗಿದ್ದಾರೆ. ಇನ್ನು ಸಿನಿಮಾ ನಟರು ಕೂಡ ಈ ಹೋರಾಟಕ್ಕೆ ಸಾಥ್ ನೀಡಬೇಕು ಎಂಬುದು ಹೋರಾಟಗಾರ ಮಾತಾಗಿತ್ತು.
ಅದೇ ರೀತಿ ಇಂದು ನಟ ಹಾಗೂ ಕೆ.ಪಿ.ಜೆ.ಪಿ ಪಕ್ಷದ ಮುಖ್ಯಸ್ಥ ಉಪೇಂದ್ರ ''ನಾನು ಹೋರಾಟದಲ್ಲಿ ಭಾಗಿಯಾಗುತ್ತೇನೆ. ಅದೇ ಕೆಲಸವನ್ನು ಈಗ ನಾನು ಮಾಡುತ್ತಿದ್ದೇನೆ. ಅನೇಕರ ಜೊತೆ ನೀರಿನ ಸಮಸ್ಯೆ ಬಗ್ಗೆ ಮಾತನಾಡಿದ್ದೇನೆ'' ಎಂದಿದ್ದಾರೆ. ಜೊತೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾರಾ ಗೋವಿಂದು ಕೂಡ ಪ್ರತಿಭಟನೆ ಸ್ಥಳಕ್ಕೆ ಬಂದಿದ್ದರು.
ಆದರೆ ಈಗ ಈ ಹೋರಾಟದ ಬಗ್ಗೆ ನಟ ಶಿವರಾಜ್ ಕುಮಾರ್ ಸಹ ಮಾತನಾಡಿದ್ದಾರೆ. ''ಹೋರಾಟಕ್ಕೆ ನಮ್ಮ ಬೆಂಬಲ ಯಾವಾಗಲೂ ಇದೆ. ಆದರೆ ನೀವು ಯಾವಾಗಲೂ ನಮ್ಮನ್ನು ಯಾಕೆ ಪ್ರಶ್ನೆ ಮಾಡುತ್ತೀರಾ. ಹೋಗಿ ನೀವೇ ಆರಿಸಿ ಕಳುಹಿಸಿರುವ ಜನಪ್ರತಿನಿಧಿಗಳನ್ನು ಕೇಳಿ'' ಎಂದಿದ್ದಾರೆ. ಅಂದಹಾಗೆ, ಮಹದಾಯಿ ಹೋರಾಟಕ್ಕೆ ಭಾಗಿಯಾಗದೇ ಇರುವ ವಿಚಾರ ಬಗ್ಗೆ ಶಿವಣ್ಣ ಸಂಪೂರ್ಣವಾಗಿ ಮಾತನಾಡಿದ್ದಾರೆ. ಮುಂದೆ ಓದಿ...

ಇದು ನಮ್ಮ ಕೈ ನಲ್ಲಿ ಇಲ್ಲ
''ನಾನು ಬೆಂಬಲ ಕೊಡಲ್ಲ ಅಂತ ಎಂದೂ ಹೇಳುವುದಿಲ್ಲ. ನಾವು ಬೆಂಬಲ ನೀಡುವುದಕ್ಕಿಂತ ಯಾರು ಇದಕ್ಕೆ ಬೆಂಬಲ ನೀಡಿದರೆ ವರ್ಕ್ ಔಟ್ ಆಗುತ್ತದೆ ಎನ್ನುವುದನ್ನು ಯೋಚನೆ ಮಾಡಬೇಕು. ಇದು ನಮ್ಮ ಕೈ ನಲ್ಲಿ ಇಲ್ಲ'' ಎಂದು ಶಿವಣ್ಣ ಹೋರಾಟದ ಬಗ್ಗೆ ವಿವರಿಸಿದ್ದಾರೆ.

ಯಾಕೆ ಸಿನಿಮಾ ನಟರು ಮಾತ್ರ
''ಸರಿ, ನಾವು ಬೆಂಬಲ ನೀಡುತ್ತೇವೆ. ಆದರೆ ಅದರ ನಂತರ ಏನು..? ಎಂಬುದನ್ನು ಯೋಚನೆ ಮಾಡಿ. ನಿಮ್ಮ ಊರಿಗೆ ನಾವು ಬಂದಿದ್ದು ನಿಜ. ಆದರೆ, ಈಗ ನೀವು ನಮ್ಮ ಜೊತೆ ಎಲ್ಲರನ್ನೂ ಕರೆಯಬೇಕು. ಬಿಜಿಪಿ, ಕಾಂಗ್ರೆಸ್, ಜೆಡಿಎಸ್ ಎಲ್ಲ ರಾಜಕೀಯ ಪಕ್ಷದವರನ್ನು ಕರೆಯಿರಿ. ಯಾಕೆ ಸಿನಿಮಾ ನಟರು ಮಾತ್ರ'' - ಶಿವರಾಜ್ ಕುಮಾರ್, ನಟ

ಮಾಧ್ಯಮಕ್ಕೆ ಪ್ರಶ್ನೆ
''ನಾನು ಮಾಧ್ಯಮಗಳಿಗೆ ಕೇಳುತ್ತೇನೆ ಯಾಕೆ ಈ ವಿಷಯದಲ್ಲಿ ಸಿನಿಮಾ ನಟರನ್ನೇ ಯಾವಾಗಲು ಪ್ರಶ್ನೆ ಮಾಡುತ್ತೀರಾ. ಸಿದ್ಧರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ಎಲ್ಲ ರಾಜಕೀಯ ಜನ ಪ್ರತಿನಿಧಿಗಳ ಮನೆಗೆ ಹೋಗಿ ಕೇಳಿ.'' - ಶಿವರಾಜ್ ಕುಮಾರ್, ನಟ

ಸಂಬಂಧಪಟ್ಟ ವ್ಯಕ್ತಿಗಳನ್ನು ಕೇಳಿ
''ನಾನು ಕೋಪದಿಂದ ಹೇಳುತ್ತಿಲ್ಲ. ನಾನು ಜನರ ಕಾಳಜಿಯಿಂದ ಹೇಳುತ್ತಿದ್ದೇನೆ. ನಾವು ಹೋಗಿ ಅಲ್ಲಿ ಎರಡು ನಿಮಿಷ ಕುಳಿತುಕೊಂಡರೆ ಇಡೀ ಸಮಸ್ಯೆ ಬಗೆ ಹರಿಯುವುದಿಲ್ಲ. ದಯವಿಟ್ಟು ಅರ್ಥ ಮಾಡಿಕೊಳ್ಳಿ. ಇದನ್ನು ಸಂಬಂಧಪಟ್ಟ ವ್ಯಕ್ತಿಗಳನ್ನು ಕೇಳಿ.'' - ಶಿವರಾಜ್ ಕುಮಾರ್, ನಟ

ಇಲ್ಲಿ ರಾಜಕೀಯ ಆಗಬಾರದು
''ನೀರಿನ ಸಮಸ್ಯೆಯ ವಿಷಯದ ಬಗ್ಗೆ ರಾಜಕೀಯ ಆಗಬಾರದು. ಯಾರು ಹೆಸರಿಗಾಗಿ ಇದನ್ನು ಮಾಡಬೇಡಿ. ಪಕ್ಷಕ್ಕಾಗಿ ಇದನ್ನು ಬಗೆ ಹರಿಸಬೇಡಿ. ಜನರಿಗಾಗಿ ಇದನ್ನು ಮಾಡಿ. ನಮಗೆ ಕೂಡ ಇದರ ಬಗ್ಗೆ ನೋವು ಇದೆ.'' - ಶಿವರಾಜ್ ಕುಮಾರ್, ನಟ

ಯಾಕೆ ಬಿಜೆಪಿ ಪಕ್ಷದ ಕಛೇರಿ ಮುಂದೆ?
''ಎಲ್ಲರೂ ಬರಲು ಸಾಧ್ಯವಾಗುವ ಜಾಗದಲ್ಲಿ ನೀವು ಹೋರಾಟ ಮಾಡಿ. ಯಾಕೆ ಬಿಜೆಪಿ ಪಕ್ಷದ ಕಛೇರಿ ಮುಂದೆ, ಅದಕ್ಕೆ ವಿರೋಧ ಎಂಬಂತೆ ಪ್ರತಿಭಟನೆ ಮಾಡುತ್ತಿದ್ದಿರಾ. ಅಲ್ಲಿಗೆ ನಾವು ಹೇಗೆ ಬರುವುದಕ್ಕೆ ಸಾಧ್ಯ. ಆ ಪಕ್ಷದಲ್ಲಿಯೂ ನಮ್ಮ ಅಭಿಮಾನಿಗಳು ಇರುತ್ತಾರೆ. ಸ್ವಲ್ಪ ಯೋಚನೆ ಮಾಡಿ. ನಾವು ಎಲ್ಲ ವರ್ಗಕ್ಕಾಗಿ ಬದುಕಬೇಕಾಗುತ್ತದೆ.'' - ಶಿವರಾಜ್ ಕುಮಾರ್, ನಟ

ಅಂಬರೀಶ್ ಮಾಮ ಬರಬೇಕು
''ನಾನು ಒಬ್ಬ ಕಾಮನ್ ಮ್ಯಾನ್. ನನಗೂ ನೀರಿನ ಸಮಸ್ಯೆ ಬಗ್ಗೆ ಗೊತ್ತು. ಇಂದು ಅಲ್ಲಿ ಆಗಿರುವ ಸಮಸ್ಯೆ ನಾಳೆ ಇಲ್ಲಿಯೂ ಆಗುತ್ತದೆ. ಕಲಾವಿದರ ಸಂಘದ ಅಧ್ಯಕ್ಷರಾಗಿರುವ ಅಂಬರೀಶ್ ಮಾಮ ಅವರು ಬರಬೇಕು. ಅವರ ನೇತೃತ್ವದಲ್ಲಿ ನಾವು ಬರುತ್ತೇವೆ.'' - ಶಿವರಾಜ್ ಕುಮಾರ್, ನಟ


Click it and Unblock the Notifications











