ಪುನೀತ್ ಇಲ್ಲ ಅಂತಾ ಬೇಸರಪಟ್ಟಿದ್ದು ಸಾಕು, ಅಪ್ಪುನಾ ಸಂಭ್ರಮಿಸೋಣ ಎಂದು ಹೆಜ್ಜೆ ಹಾಕಿದ ಶಿವಣ್ಣ
ನಟ ಶಿವರಾಜ್ ಕುಮಾರ್ ಮಂಗಳೂರಿನಲ್ಲಿ ಪೊಲೀಸರ ಜೊತೆ ಕಮಾಲ್ ಮಾಡಿದ್ದಾರೆ. ಮಂಗಳೂರು ನಗರ ಪೊಲೀಸ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಹಾಡು ಹೇಳಿ, ಕುಣಿದು ಪೊಲೀಸರಿಗೆ ಹೊಸ ಹುರುಪು ತುಂಬಿದ್ದಾರೆ. ದಂಪತಿ ಸಮೇತವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಪ್ಪುವನ್ನು ನೆನಪು ಮಾಡಿ ದುಃಖ ಮಾಡಿದ್ದು ಸಾಕು, ಅಪ್ಪುವನ್ನು ನಾವೆಲ್ಲಾ ಸಂಭ್ರಮಿಸೋಣ ಅಂತಾ ಶಿವರಾಜ್ ಕುಮಾರ್ ಹೇಳಿದ್ದಾರೆ.
ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಕಡಲನಗರಿ ಮಂಗಳೂರಿನಲ್ಲಿ ನಗರ ಪೊಲೀಸರ ಜೊತೆ ಸಂವಾದ ನಡೆಸಿದ್ದಾರೆ. ಪೊಲೀಸರ ಪ್ರಶ್ನೆಗಳಿಗೆ ಉತ್ಸಾಹ ಭರಿತರಾಗಿ ಉತ್ತರ ನೀಡುವ ಜೊತೆಗೆ ಪೊಲೀಸ್ ಕಮೀಷನರ್ ಹಾಡಿದ ಟಗರು ಸಾಂಗ್ಗೆ ಶಿವಣ್ಣ ಭರ್ಜರಿ ಸ್ಟೆಪ್ ಹಾಕಿದ್ದಾರೆ.
ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಮಂಗಳೂರಿನ ದೇವಸ್ಥಾನವೊಂದರ ದರ್ಶನಕ್ಕೆ ಬಂದು ಮಂಗಳೂರು ನಗರ ಪೊಲೀಸರು ಆಯೋಜಿಸಿದ್ದ ಪುನಿತ್ ರಾಜ್ ಕುಮಾರ್ ಸಂಸ್ಮರಣೆ ಮತ್ತು ಅಧಿಕಾರಿ ಸಿಬ್ಬಂದಿ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾದ್ದರು. ನಗರದ ಎಸ್ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆಯೇ 'ಟಗರು' ಸಿನಿಮಾದ ಹಾಡಿನ ಮೂಲಕ ಶಿವರಾಜ್ ಕುಮಾರ್ರನ್ನು ಮಂಗಳೂರು ಪೊಲೀಸರು ಸ್ವಾಗತಿಸಿದ್ದಾರೆ. ಶಿವರಾಜ್ ಕುಮಾರ್ಗೆ ಪತ್ನಿ ಗೀತಾ ಶಿವರಾಜ್ ಕುಮಾರ್ ಸಾಥ್ ನೀಡಿದ್ದರು. ಸಂವಾದಕ್ಕೂ ಮೊದಲು ಪುನೀತ್ ರಾಜಕುಮಾರ್ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಗಿದೆ. ಈ ಸಂದರ್ಭ ಅಪ್ಪು ನೆನಪು ಮಾಡಿಕೊಂಡ ಶಿವರಾಜ್ ಕುಮಾರ್ ಭಾವುಕರಾಗಿದ್ದಾರೆ. ಬಳಿಕ ಮಾತನಾಡಿದ ಶಿವಣ್ಣ, ಪುನೀತ್ ಬಗ್ಗೆ ನೋವಿನ ನೆನಪು ಮಾಡಿಕೊಳ್ಳುವುದಕ್ಕಿಂತ ಅಪ್ಪುನ ಸಂಭ್ರಮಿಸಬೇಕು ಅಂತ ಕರೆ ನೀಡಿದ್ದಾರೆ.

'ಟಗರು -2' ಬಳಿಕ ಶಿವಣ್ಣ ಸುಳಿವು
ಸಂವಾದದಲ್ಲಿ ಪೊಲೀಸರ ಪ್ರಶ್ನೆಗಳಿಗೆ ಶಿವರಾಜ್ ಕುಮಾರ್ ಉತ್ತರ ನೀಡಿದ್ದಾರೆ. ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದಾಗ ಪೊಲೀಸ್ ಪಾತ್ರದಲ್ಲಿ 'ಟಗರು 2' ಸಿನಿಮಾ ಮೂಲಕ ನಾನು ಕಾಣಿಸಿಕೊಳ್ಳಬಹುದು. ಹೀಗೆಂದು ಹೇಳುವ ಮೂಲಕ 'ಟಗರು-2' ಸಿನಿಮಾ ಬಗ್ಗೆ ಸುಳಿವು ನೀಡಿದ್ದಾರೆ. ಕರಾವಳಿ ಜಿಲ್ಲೆಯಲ್ಲಿ ಶೂಟಿಂಗ್ನಲ್ಲಿ ಭಾಗಿಯಾಗಿದ್ದ ದಿನಗಳನ್ನು ಮೆಲುಕು ಹಾಕಿದ ಶಿವರಾಜ್ಕುಮಾರ್ ಮಂಗಳೂರು ನನ್ನ ಫೇವರೀಟ್ ಸ್ಥಳಗಳಲ್ಲಿ ಒಂದು ಎಂದು ಹೇಳಿದ್ದಾರೆ..

ಅಪ್ಪು ಹಾಡಿಗೆ ಧ್ವನಿಯಾದ ಶಿವಣ್ಣ
ಪುನೀತ್ ರಾಜ್ ಕುಮಾರ್ ಇಲ್ಲದೆ ಆರು ತಿಂಗಳು ಕಳೆದಿದೆ. ಆದರೆ ಅಭಿಮಾನಿಗಳಲ್ಲಿನೋವು ಇನ್ನೂ ಕಡಿಮೆ ಆಗಿಲ್ಲ. ಸಾಮಾನ್ಯ ಜನರೂ ಅಪ್ಪು ಇಲ್ಲದೇ ನೋವು ಪಟ್ಟಿದ್ದಾರೆ. ಅಪ್ಪು ಮಾನವೀಯತೆ ಎಂಬ ಶಬ್ದಕ್ಕೆ ದೊಡ್ಡ ಉದಾಹರಣೆ ಅಂತಾ ಶಿವರಾಜ್ ಕುಮಾರ್ ಹೇಳಿದ್ದಾರೆ. ಅಪ್ಪುವನ್ನು ನೆನೆದು ಶಿವರಾಜ್ ಕುಮಾರ್ 'ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ' ಹಾಡನ್ನು ಹಾಡಿದ್ದಾರೆ. ಈ ನಡುವೆ ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಶಿವಣ್ಣ ಸಮ್ಮುಖದಲ್ಲಿ 'ಟಗರು ಬಂತು ಟಗರು' ಹಾಡನ್ನು ಎನರ್ಜಿಟಿಕ್ ಆಗಿ ಹಾಡಿದ್ದಾರೆ. ಕಮೀಷನರ್ ಹಾಡು ಹಾಡುತ್ತಿದ್ದಂತೆ ಶಿವಣ್ಣ ಅದೇ ಹಾಡಿಗೆ ಸಖತ್ ಸ್ಟೆಪ್ ಸಹ ಹಾಕಿದ್ದಾರೆ. ಸಂವಾದದಲ್ಲಿ ಭಾಗಿಯಾದ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಸಹ ಜೊತೆಯಾಗಿ ಸ್ಟೆಪ್ ಹಾಕಿದ್ದಾರೆ.

ಮಂಗಳೂರಿನಲ್ಲಿ ಅಣ್ಣಾವ್ರು ಮ್ಯೂಸಿಕ್ ನೈಟ್
ಕಡಲನಗರಿ ಮಂಗಳೂರಿನ ಬಗ್ಗೆ ಮಾತನಾಡಿದ ಶಿವಣ್ಣ, "ಮಂಗಳೂರು ನನ್ನ ಮೆಚ್ಚಿನ ಊರುಗಳಲ್ಲಿ ಒಂದಾಗಿದೆ. ಅಪ್ಪಾಜಿ ಹಲವು ಮ್ಯೂಸಿಕಲ್ ನೈಟ್ ಕಾರ್ಯಕ್ರಮಗಳನ್ನು ಮಂಗಳೂರಿನಲ್ಲಿ ನಡೆಸಿಕೊಟ್ಟಿದ್ದಾರೆ. 'ಚಿಗುರಿದ ಕನಸು' ಚಿತ್ರದ ಶೂಟಿಂಗ್ ಸಂಧರ್ಭದಲ್ಲಿ ಸುಮಾರು 45 ದಿನ ಬೆಳ್ತಂಗಡಿ ಆಸುಪಾಸಿನಲ್ಲಿ ದಿನ ಕಳೆದಿದ್ದೆ. ಆ ದಿನಗಳ ನೆನಪೇ ಅದ್ಭುತವಾಗಿದೆ. ನನಗೂ ಪೊಲೀಸ್ ಇಲಾಖೆಗೂ ನಿಕಟ ಸಂಪರ್ಕವಿದ್ದು, ನಾನು ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ ಎಲ್ಲಾ ಚಿತ್ರಗಳು ಸೂಪರ್ ಹಿಟ್ ಆಗಿದೆ." ಅಂತ ಶಿವಣ್ಣ ಹೇಳಿದ್ದಾರೆ.

ಶಿವಣ್ಣನ ಜೊತೆ ಪೊಲೀಸರ ನೃತ್ಯ
ಹಾಡು ಹಾಡಿ ಡ್ಯಾನ್ಸ್ ಮಾಡಿ ಕುಡ್ಲ ಖಾಕಿಯನ್ನು ಶಿವರಾಜ್ ಕುಮಾರ್ ರಂಜಿಸಿದ್ದಾರೆ. ಒಟ್ಟಿನಲ್ಲಿ ಅಲ್ಪಾವಧಿಯಲ್ಲಿ ನಡೆದ ಕಾರ್ಯಕ್ರಮ ಎಲ್ಲರ ಸಂಭ್ರಮ ಹಾಗೂ ಭಾವುಕತೆಗೆ ಸಾಕ್ಷಿಯಾಗಿದೆ. ಶಿವರಾಜ್ ಕುಮಾರ್ ಜೊತೆ ಪತ್ನಿ ಗೀತಾ ಶಿವರಾಜ್ ಕುಮಾರ್, ಟಗರು ಚಿತ್ರದ ನಿರ್ಮಾಪಕ ಕೆ.ಪಿ ಶ್ರೀಕಾಂತ್, ಮೇಘರಾಜ್ ರಾಜೇಂದ್ರ ಕುಮಾರ್, ಡಿಸಿಪಿ ಹರಿರಾಂ ಶಂಕರ್ ಸೇರಿದಂತೆ ಪೊಲೀಸರು ಸಾಥ್ ನೀಡಿದ್ದಾರೆ.


Click it and Unblock the Notifications











