ಮದುವೆಯಲ್ಲಿ ಜನ ಜಾತ್ರೆ : ಶಿವಣ್ಣ ಕುಟುಂಬಕ್ಕೆ ಸಿಗದ ಊಟ.!
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಪುತ್ರಿ ಡಾ.ನಿರುಪಮ-ಡಾ.ದಿಲೀಪ್ ಅವರ ವಿವಾಹ ಮಹೋತ್ಸವ ನಿನ್ನೆ (ಆಗಸ್ಟ್ 31) ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನೆರವೇರಿತು.
ಬೆಳಗ್ಗೆ ಮುಹೂರ್ತ ಮತ್ತು ಸಂಜೆ ಆರತಕ್ಷತೆ ಕಾರ್ಯಕ್ರಮಕ್ಕೆ ಗಣ್ಯಾತಿಗಣ್ಯರ ದಂಡೇ ಆಗಮಿಸಿತ್ತು. ಜೊತೆಗೆ ರಾಜ್ಯದ ವಿವಿಧ ಭಾಗಗಳಿಂದ ಶಿವರಾಜ್ ಕುಮಾರ್ ಅವರ ಅಭಿಮಾನಿಗಳು ಕೂಡ ಆಗಮಿಸಿ ಡಾ.ನಿರುಪಮ-ಡಾ.ದಿಲೀಪ್ ಅವರ ಮದುವೆಗೆ ಸಾಕ್ಷಿಯಾದರು. [ಚಿತ್ರಗಳು: ಶಿವಣ್ಣನ ಮಗಳ ಆರತಕ್ಷತೆಯಲ್ಲಿ ಗಣ್ಯಾತಿಗಣ್ಯರ ದಂಡು]

ಅದು ಬೆರಳೆಣಿಕೆಯ ಸಂಖ್ಯೆಯಲ್ಲಾಗಿದ್ದರೆ ಪರ್ವಾಗಿಲ್ಲ. ಬರೋಬ್ಬರಿ 30 ಸಾವಿರಕ್ಕೂ ಹೆಚ್ಚು ಜನ.! ಮದುವೆಗೆ ಆಗಮಿಸಿದ್ದರು ಅಂದ್ರೆ ನೀವು ನಂಬಲೇಬೇಕು. ಮುಹೂರ್ತ ಸಮಾರಂಭ ನಡೆಯುವಾಗಲೇ, ಭದ್ರತೆಗೆ ಹಾಕಿದ್ದ ಬ್ಯಾರಿಕೇಡ್ ಗಳನ್ನ ಮುರಿದುಕೊಂಡು ಅರಮನೆ ಮೈದಾನದ ಒಳಗೆ ಜನಸಾಮಾನ್ಯರು ನುಗ್ಗಿದ್ದರು. [ಶಿವಣ್ಣನ ಮಗಳ ರಿಸೆಪ್ಷನ್ ನಲ್ಲಿ 'ಬಾಹುಬಲಿ' ರಾಜಮೌಳಿ]
ಇನ್ನೂ ಸಂಜೆ ಆರತಕ್ಷತೆ ನಡೆಯುವಾಗಲೂ ಜನರನ್ನ ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸ ಪಡಬೇಕಾಯ್ತು. ಲಘು ಲಾಠಿ ಪ್ರಹಾರ ಕೂಡ ನಡೆಯಿತು. ನಿರೀಕ್ಷೆಗಿಂತ ಹೆಚ್ಚು ಜನ ಮದುವೆಗೆ ಆಗಮಿಸಿದ್ದರಿಂದ ಆರತಕ್ಷತೆಗೆ ಮಾಡಿಸಲಾಗಿದ್ದ ಬಗೆ ಬಗೆಯ ತಿನಿಸುಗಳು ಬಹು ಬೇಗ ಖಾಲಿ ಆಯ್ತು.

ಆರತಕ್ಷತೆಯ ವೇದಿಕೆಯಲ್ಲಿ ವಧು-ವರರ ಜೊತೆ ಶಿವಣ್ಣ ಕುಟುಂಬ ಇನ್ನೂ ನಿಂತಿರುವಾಗಲೇ ಮಾಡಿದ ಅಡುಗೆಯೆಲ್ಲಾ ಖಾಲಿ ಖಾಲಿ. ಇದರಿಂದ ಶಿವರಾಜ್ ಕುಮಾರ್ ಕುಟುಂಬದ ಅನೇಕರು ಬೆಂಗಳೂರಿನ ಲೀ ಮೆರಿಡಿಯನ್ ಹೊಟೇಲ್ ನಲ್ಲಿ ಊಟ ಮಾಡಬೇಕಾಯ್ತು. [ಚಿತ್ರಗಳು: ದೊಡ್ಮನೆ ಮೊಮ್ಮಗಳ ಮದುವೆಯ ಅದ್ಧೂರಿ ಕ್ಷಣಗಳು]
ವಿನಯ್ ರಾಜ್ ಕುಮಾರ್, ಸಹೋದರ ಗುರು ರಾಜ್ ಕುಮಾರ್ ಸೇರಿದಂತೆ ರಾಜ್ ಕುಟುಂಬದ ಹಲವರು ಲೀ ಮೆರಿಡಿಯನ್ ಹೊಟೇಲ್ ಗೆ ಆಗಮಿಸಿ ಡಿನ್ನರ್ ಮಾಡಿದರು.
ಆದ್ರೆ ಶಿವಣ್ಣ, ಪತ್ನಿ ಗೀತಾ, ಮಗಳು ಡಾ.ನಿರುಪಮ, ಅಳಿಯ ಡಾ.ದಿಲೀಪ್ ಎಲ್ಲಿ ಊಟ ಮಾಡಿದರು ಅನ್ನುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.


Click it and Unblock the Notifications











