ಸಂಕಷ್ಟದಲ್ಲಿ ಸಿನಿಮಾ: ನಿರ್ಮಾಪಕರಿಂದ ವಾಣಿಜ್ಯ ಮಂಡಳಿಗೆ ಪತ್ರ
ಕೊರೊನಾ ಭೀತಿಯಿಂದಾಗಿ ರಾಜ್ಯದಲ್ಲಿ ಚಿತ್ರಮಂದಿರಗಳು ಬಂದ್ ಆಗಿವೆ. ಹಲವು ಸಿನಿಮಾಗಳ ಬಿಡುಗಡೆ ಮುಂದೂಡಲ್ಪಟ್ಟಿದೆ ಹಲವು ನಿರ್ಮಾಪಕರು ಇದರಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
Recommended Video
ಚಿರಂಜೀವಿ ಸರ್ಜಾ ನಟಿಸಿದ್ದ 'ಶಿವಾರ್ಜುನ' ಸಿನಿಮಾ ಹನ್ನೆರಡನೇ ತಾರೀಖು ಬಿಡುಗಡೆ ಆಗಿತ್ತು. ಹದಿಮೂರನೇ ತಾರೀಖಿನಿಂದ ಚಿತ್ರಮಂದಿರಗಳು ಬಂದ್ ಆದವು. ಸಿನಿಮಾಕ್ಕೆ ಒಳ್ಳೆಯ ಓಪನಿಂಗ್ ಸಿಕ್ಕಿತ್ತು ಆದರೆ ರಾಜ್ಯ ಸರ್ಕಾರದ ನಿರ್ಧಾರದಿಂದ ಪ್ರೇಕ್ಷಕರು ಸಿನಿಮಾ ನೋಡದಂತಾಯಿತು.
ಶಿವಾರ್ಜುನ ಸಿನಿಮಾ ತೆರೆ ಕಂಡ ಒಂದೇ ದಿನಕ್ಕೆ ಚಿತ್ರಮಂದಿರಗಳು ರಾಜ್ಯ ಸರ್ಕಾರದ ಆದೇಶದಂತೆ ಬಂದ್ ಆದುವು. ವೀಕೆಂಡ್ ಕಲೆಕ್ಷನ್ ಮೇಲೆ ಕಣ್ಣಿಟ್ಟಿದ್ದ ಚಿತ್ರತಂಡಕ್ಕೆ ಭಾರಿ ನಿರಾಸೆಯಾಯಿತು. ಚಿತ್ರಕ್ಕೆ ಕೋಟ್ಯಂತರ ಖರ್ಚು ಮಾಡಿರುವ ನಿರ್ಮಾಪಕರು ಈಗ ತಲೆ ಮೇಲೆ ಕೈಹೊತ್ತುಕೊಂಡಿದ್ದಾರೆ.

ಶಿವಾರ್ಜುನ ನಿರ್ಮಾಪಕರಿಂದ ಪತ್ರ
ಇದೀಗ 'ಶಿವಾರ್ಜುನ' ಸಿನಿಮಾ ನಿರ್ಮಾಪಕರಾಗಿರುವ ಶಿವಾರ್ಜುನ್ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದು, ತಮ್ಮ ಸಿನಿಮಾಕ್ಕೆ ನ್ಯಾಯ ಒದಗಿಸಬೇಕಾಗಿ ವಿನಂತಿ ಮಾಡಿದ್ದಾರೆ.

ಅದೇ ಚಿತ್ರಮಂದಿರಗಳಲ್ಲಿ ಸಿನಿಮಾ ಮುಂದುವರೆಸಿ
ರಾಜ್ಯ ಸರ್ಕಾರದ ಆದೇಶದಿಂದ ಚಿತ್ರಮಂದಿರಗಳು ಬಂದ್ ಆಗಿದ್ದು, ಚಿತ್ರಮಂದಿರಗಳು ಪುನಃ ತೆರೆದಾಗ ಈಗ ಶಿವಾರ್ಜುನ ಚಿತ್ರ ಬಿಡುಗಡೆ ಆಗಿರುವ ಚಿತ್ರಮಂದಿರಗಳಲ್ಲೇ ಪ್ರದರ್ಶನ ಮುಂದುವರೆಸುವಂತೆ ಚಿತ್ರಮಂದಿರಗಳಿಗೆ ಸೂಚಿಸಿ ಎಂದು ನಿರ್ಮಾಪಕರು ಮನವಿ ಮಾಡಿದ್ದಾರೆ. ಈ ವಿಷಯದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಧ್ಯ ಪ್ರವೇಶ ಮಾಡಬೇಕು ಎಂದು ಅವರು ಕೇಳಿಕೊಂಡಿದ್ದಾರೆ.

ಪತ್ರಿಕೆ, ಮಾಧ್ಯಮಗಳಿಗೂ ಸೂಚಿಸಲು ಮನವಿ
ಅಷ್ಟೆ ಅಲ್ಲದೆ, ತಮ್ಮ ಶಿವಾರ್ಜುನ ಚಿತ್ರದ ಬಗ್ಗೆ ಒಳ್ಳೆಯ ವಿಮರ್ಶೆ ಬರೆಯಬೇಕು, ಒಳ್ಳೆಯ ವರದಿ ಪ್ರಕಟಿಸುವಂತೆ ವಾಣಿಜ್ಯ ಮಂಡಿಗಳು ದಿನಪತ್ರಿಕೆಗಳು, ಟಿವಿ ಚಾನೆಲ್ಗಳು ಸೂಚಿಸಬೇಕು ಎಂದು ಸಹ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

'ನರಗುಂದ ಬಂಡಾಯ' ಚಿತ್ರಕ್ಕೂ ಸಂಕಷ್ಟ
'ಶಿವಾರ್ಜುನ' ಮಾತ್ರವಲ್ಲದೆ ಮಾರ್ಚ್ 12 ರಂದೇ ಬಿಡುಗಡೆ ಆಗಿದ್ದ 'ನರಗುಂದ ಬಂಡಾಯ' ಸಿನಿಮಾ ಸಹ ನಾಲ್ಕು ಪ್ರದರ್ಶನವನಷ್ಟೆ ಕಂಡಿದೆ. ಎರಡೂ ಸಿನಿಮಾಗಳು ಭಾರಿ ನಷ್ಟವನ್ನೇ ಅನುಭವಿಸಿವೆ.

ಶಿವರಾಜ್ ಕುಮಾರ್ ಅವರ ದ್ರೋಣ ಸಹ ಸಂಕಷ್ಟದಲ್ಲಿದೆ
ಶಿವರಾಜ್ ಕುಮಾರ್ ಅವರ ದ್ರೋಣ ಸಿನಿಮಾ ಮಾರ್ಚ್ 6 ರಂದು ತೆರೆಕಂಡು ಯಶಸ್ವಿ ಎರಡನೇ ವಾರದತ್ತ ದಾಪುಗಾಲಿಟ್ಟಿತ್ತು. ಇನ್ನೇನು ಬಂಡವಾಳ ವಾಪಸ್ ಬರುವ ನಿರೀಕ್ಷೆಯಲ್ಲಿದ್ದ ನಿರ್ಮಾಪಕರಿಗೆ ಕೊರೊನಾ ಹೊಡೆತದಿಂದ ಕೈ-ಕಯ ಹಿಸುಕಿಕೊಳ್ಳುವಂತಾಗಿದೆ. ಇನ್ನುಳಿದಂತೆ ಚೆನ್ನಾಗಿ ಪ್ರದರ್ಶನ ಕಾಣುತ್ತಿದ್ದ 'ಲವ್ ಮೋಕ್ಟೇಲ್', 'ದಿಯಾ', ಪಾಪ್ಕಾರ್ನ್ ಮಂಕಿ ಟೈಗರ್' ಚಿತ್ರಗಳಿಗೂ ಸಂಕಷ್ಟ ಎದುರಾಗಿದೆ.


Click it and Unblock the Notifications











