ಕನ್ನಡ ರಾಜ್ಯೋತ್ಸವಕ್ಕೆ ಶಿವಣ್ಣ 'ಭಜರಂಗಿ' ತೆರೆಗೆ
ಇತ್ತೀಚೆಗಷ್ಟೇ ಅಭಿಮಾನಿಗಳಿಂದ ರಾಜ ಭೂಷಣ ಬಿರುದು ಪಡೆದಿರುವ ಶಿವರಾಜ್ ಕುಮಾರ್ ನಾಯಕರಾಗಿ ನಟಿಸುತ್ತಿರುವ 'ಭಜರಂಗಿ' ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದೆ. ಚಿತ್ರ ನವಂಬರ್ (ಕನ್ನಡ ರಾಜ್ಯೋತ್ಸವ)ನಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಬೆಂಗಳೂರು, ಹೈದರಾಬಾದ್ ಮುಂತಾದ ಕಡೆ 'ಭಜರಂಗಿ' ಚಿತ್ರದ ಚಿತ್ರೀಕರಣ ನಡೆದಿದೆ. ಹೆಸರುಘಟ್ಟ, ಅಭಿಮಾನ್ ಸ್ಟುಡಿಯೋ ಹಾಗೂ ಸಪೋಟ ಗಾರ್ಡನ್ ನಲ್ಲಿ ಈ ಚಿತ್ರಕ್ಕಾಗಿ ವಿಶೇಷ ಸೆಟ್ ಹಾಕಲಾಗಿತ್ತು. ಈವರೆಗೂ ಮೂರು ಹಾಡುಗಳ ಚಿತ್ರೀಕರಣ ಸೇರಿದಂತೆ 100ದಿನ ಚಿತ್ರೀಕರಣ ನಡೆದಿದೆ.
ಬಾಕಿಯಿರುವ ಎರಡು ಹಾಡುಗಳ ಚಿತ್ರೀಕರಣ ಸೆಪ್ಟಂಬರ್ ನಲ್ಲಿ ನಡೆಯಲಿದೆ. ಎ.ಹರ್ಷ ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ನಂದ, ಶಕ್ತಿ ಅವರೊಡನೆ ಚಿತ್ರಕಥೆ ಬರೆದಿರುವ ಹರ್ಷ ಈ ಚಿತ್ರದ ನೃತ್ಯ ನಿರ್ದೇಶಕರೂ ಹೌದು. ಫಿಲಂ ಎಂಟರ್ ಟೈನರ್ ಲಾಂಛನದಲ್ಲಿ ನಟರಾಜ್ ಗೌಡ ಹಾಗೂ ಮಂಜು(ಜಾಕ್) ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.ಜೈಆನಂದ್ ಛಾಯಾಗ್ರಾಹಕರಾಗಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಯೋಗಾನಂದ್ ಮುದ್ದಾನ್ ಸಂಭಾಷಣೆ ಬರೆದಿದ್ದಾರೆ. ದೀಪು.ಎಸ್.ಕುಮಾರ್ ಅವರ ಸಂಕಲನ, ರವಿವರ್ಮ ಸಾಹಸ ನಿರ್ದೇಶನ, ರಮೇಶ್ ಅವರ ನಿರ್ಮಾಣ ನಿರ್ವಹಣೆಯಿರುದೆ.
ಈ ಚಿತ್ರದ ತಾರಾಬಳಗದಲ್ಲಿ ಶಿವರಾಜಕುಮಾರ್, ಐಂದ್ರಿತಾ ರೇ, ಊರ್ವಶಿ, ಬುಲೆಟ್ ಪ್ರಕಾಶ್, ಸಾಧುಕೋಕಿಲಾ, ತಬಲನಾಣಿ, ಹೊನ್ನವಳ್ಳಿ ಕೃಷ್ಣ, ಶಿವರಾಂ, ಎಂ.ಎಸ್.ಉಮೇಶ್, ಬಿರಾದಾರ್, ಚಿಕ್ಕಣ್ಣ, ಎಂ.ಎನ್.ಲಕ್ಷ್ಮೀದೇವಿ, ಶೃತಿ, ಸಿಲ್ಲಿಲಲ್ಲಿ ಆನಂದ್ ಹಾಗೂ ರಂಗಭೂಮಿ ಕಲಾವಿದರಾದ ಲೋಕಿ, ರಾಜಕುಮಾರ್, ಮಧು, ಚೇತನ್ ಮುಂತಾದವರಿದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications












