ಹಣೆಬರಹ ರೀರೈಟ್ ಮಾಡಲು ಬರುತ್ತಿದ್ದಾನೆ 'ಬೆಳ್ಳಿ'
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಬೆಳ್ಳಿ' ಚಿತ್ರೀಕರಣ ಹಂತದಿಂದಲೂ ಸದ್ದು ಮಾಡುತ್ತಿದ್ದು ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ಇತ್ತೀಚೆಗೆ ಸೆನ್ಸಾರ್ ಆಗಿದ್ದು ಯು/ಎ ಸರ್ಟಿಫಿಕೇಟ್ ನೀಡಲಾಗಿದೆ. ಇದೇ ಅಕ್ಟೋಬರ್ 31ಕ್ಕೆ ಚಿತ್ರ ರಾಜ್ಯದಾದ್ಯಂತ ಅಬ್ಬರಿಸಲಿದೆ.
ಚಿತ್ರದ ಪೋಸ್ಟರ್ ಗಳಲ್ಲಿ ತೋರಿಸಿರುವ ಲಾಂಗು, ಮಚ್ಚುಗಳನ್ನು ನೋಡಿದರೆ ಬಹುಶಃ 'ಎ' ಸರ್ಟಿಫಿಕೇಟ್ ಗ್ಯಾರಂಟಿ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿರುವುದು ಕೇವಲ ಮಾಸ್ ಆಡಿಯನ್ಸ್ ಗಷ್ಟೇ ಅಲ್ಲ ಫ್ಯಾಮಿಲಿ ಆಡಿಯನ್ಸ್ ಗೂ ಎಂಬುದು ಗೊತ್ತಾಗುತ್ತದೆ. [ಬೆಳ್ಳಿ ಚಿತ್ರದ ವಿಶೇಷಗಳು]
ಬೆಂಗಳೂರಿನ ಕಪಾಲಿ ಮುಖ್ಯ ಚಿತ್ರಮಂದಿರ ಸೇರಿದಂತೆ ರಾಜ್ಯದಾದ್ಯಂತ ಚಿತ್ರ ಅ.31ರಂದು ತೆರೆಕಾಣುತ್ತಿದೆ. ಸ್ವಲ್ಪ ಗ್ಯಾಪ್ ನ ಬಳಿಕ ಶಿವಣ್ಣ ಈ ಚಿತ್ರದಲ್ಲಿ ಮತ್ತೆ ಲಾಂಗ್ ಕೈಗೆತ್ತಿಕೊಂಡು ಡಿಫರೆಂಟ್ ಗೆಟಪ್ ನಲ್ಲಿ ಗಮನಸೆಳೆದಿದ್ದು, ಅವರ ಅಭಿಮಾನಿಗಳು ಚಿತ್ರವನ್ನು ನಿರೀಕ್ಷಿಸುವಂತಾಗಿದೆ.ಚಿತ್ರದಲ್ಲಿ ಶಿವಣ್ಣ ಬೆಳ್ಳಿಯಾದರೆ ಕೃತಿ ಕರಬಂಧ ಬಳುಕುವ ಬಳ್ಳಿ. ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವವರು ಮುಸ್ಸಂಜೆ ಮಹೇಶ್. ಇದೇ ಮೊದಲ ಬಾರಿಗೆ ಮಹೇಶ್ ಮತ್ತು ಶಿವಣ್ಣ ಕಾಂಬಿನೇಷನಲ್ಲಿ ಮೂಡಿಬರುತ್ತಿರುವ ಚಿತ್ರ ಇದಾಗಿದೆ.
ಈಗಾಗಲೆ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್ ನಲ್ಲಿ ಶಿವಣ್ಣ ಡೈಲಾಗ್ ಗಳು ಪ್ರಮುಖ ಆಕರ್ಷಣೆಯಾಗಿವೆ. ಹಣೆಬರಹವನ್ನು ರೀರೈಟ್ ಮಾಡೋ ಕಾಂಟ್ರಾಕ್ಟ್ ಈ ಬೆಳ್ಳಿ ಹತ್ರ ಮಾತ್ರ ಇದೆ ಎಂದು ಶಿವಣ್ಣ ಡೈಲಾಗ್ ಹೊಡೀತಿದ್ರೆ ಅಭಿಮಾನಿಗಳ ಆನಂದಕ್ಕೆ ಪಾರವೇ ಇರಲ್ಲ.
ಮಹೇಶ್ (ಮುಸ್ಸಂಜೆ ಮಾತು) ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವಿ.ಶ್ರೀಧರ್ ಸಂಗೀತ ನೀಡಿದ್ದಾರೆ. ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣ, ದೀಪು.ಎಸ್.ಕುಮಾರ್ ಸಂಕಲನ, ಗಣೇಶ್ ಸಾಹಸ ನಿರ್ದೇಶನ, ಎ.ಹರ್ಷ, ಆದಿಲ್ ಶೇಖ್, ಮುರಳಿ ನೃತ್ಯ ನಿರ್ದೇಶನ ಹಾಗೂ ಸೀನು ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
ಸೆಂಚುರಿ ಸ್ಟಾರ್ ಶಿವರಾಜಕುಮಾರ್, ಕೃತಿ ಖರಬಂದ, ವಿನೋದ್ ಪ್ರಭಾಕರ್, ದೀಪಕ್, ಒರಟ ಪ್ರಶಾಂತ್, ವೆಂಕಟೇಶ್ ಪ್ರಸಾದ್, ಆದಿಲೋಕೇಶ್, ಪದ್ಮಾವಾಸಂತಿ, ಬಿ.ವಿ.ರಾಧಾ, ಶ್ರೀನಿವಾಸಮೂರ್ತಿ, ರಮೇಶ್ ಭಟ್, ಸುಧಾರಾಣಿ, ನಾಗರಾಜ್, ಹರೀಶ್ ರೈ, ಲೋಕಿ, ನೀನಾಸಂ ಮಂಜು, ಭಾಸ್ಕರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications












