ನಿಖಿಲ್ ಕುಮಾರ್ ಮದುವೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮುಗಿದಿಲ್ಲ ಚರ್ಚೆ!
ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಅವರ ವಿವಾಹ ರೇವತಿ ಅವರೊಟ್ಟಿಗೆ ಕೆಲವು ದಿನಗಳ ಹಿಂದಷ್ಟೆ ಮುಗಿದಿದೆ. ಭಾರಿ ಅದ್ಧೂರಿಯಾಗಿ ಆಚರಿಸಲು ಮಾಡಿದ್ದ ಯೋಜನೆಗೆ ಕೊರೊನಾ ತಣ್ಣೀರು ಸುರಿದು ಸರಳ ವಿವಾಹವಾಗುವಂತೆ ಪ್ರೇರೇಪಿಸಿದೆ.
Recommended Video
ನಿಖಿಲ್ ಕುಮಾರಸ್ವಾಮಿ ವಿವಾಹವನ್ನು ಭಾರಿ ಅದ್ಧೂರಿಯಾಗಿ ನೆರವೇರಿಸಲು ಮಾಜಿ ಸಿಎಂ ಕುಮಾರಸ್ವಾಮಿ ಸಜ್ಜಾಗಿದ್ದರು. ಕೇತಿಗಾನಹಳ್ಳಿ ಬಳಿಯ ಫಾರಂ ನಲ್ಲಿ ದೊಡ್ಡ ಸೆಟ್ ಹಾಕಿ, ಭಾರಿ ಸಂಖ್ಯೆಯ ಜನರ ಉಪಸ್ಥಿತಿಯಲ್ಲಿ ಮಗನ ಮದುವೆ ಮಾಡುವ ಇಚ್ಛೆ ಅವರದ್ದಾಗಿತ್ತು.
ಯೋಜನೆ ಇನ್ನೇನು ಕಾರ್ಯಗತವಾಗಬೇಕು, ಮದುವೆ ತಯಾರಿಗಳು ಆರಂಭವಾಗುವ ಹೊತ್ತಿಗೆ ಸರಿಯಾಗಿ ಕೊರೊನಾ ಬಂದು ವಕ್ಕರಿಸಿಕೊಂಡು ಸರಳವಾಗಿ ಮದುವೆ ಸಮಾರಂಭ ನಡೆಯುವಂತಾಯಿತು. ಮದುವೆ ಮುಗಿದ ಬೆನ್ನಲ್ಲೆ ನಿಖಿಲ್ ಕುಮಾರಸ್ವಾಮಿ ಅವರಿಗೆ ಒದಗಿ ಬಂದ ಸಾಲು-ಸಾಲು ದುರಾದೃಷ್ಟಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ತಮಾಷೆಯ ಚರ್ಚೆ ಪ್ರಾರಂಭವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ತಮಾಷೆ
ನಿಖಿಲ್ ಕುಮಾರಸ್ವಾಮಿ ಮೊದಲಿಗೆ ಸಿನಿಮಾ ಮಾಡಿದರು, ಅದು ಸೂಕ್ತ ಗೆಲುವು ಕಾಣಲಿಲ್ಲ, ಆ ನಂತರ ರಾಜಕೀಯಕ್ಕೆ ಹೋದರು, ಭಾರಿ ಗೆಲುವಿನ ನಿರೀಕ್ಷೆ ಇಟ್ಟುಕೊಂಡಿದ್ದ ಅವರು ಸೋಲಬೇಕಾಯಿತು, ನಂತರ ಮದುವೆ ಆದರು, ಮದುವೆಗೆ ಜನರೇ ಬರದಂತಾಯಿತು ಎಂಬುದು ಸಾಮಾಜಿಕ ಜಾಲತಾಣದಲ್ಲಿ ತಮಾಷೆಯಾಗಿ ಚರ್ಚೆಯಾಗುತ್ತಿದೆ.

ಟ್ರೋಲ್ ಮಾಡುತ್ತಿರುವ ನೆಟ್ಟಿಗರು
ಕೆಲವು ಟ್ರೋಲಿಗರು, ನಿಖಿಲ್ ಕುಮಾರಸ್ವಾಮಿ ಅವರ ಚಿತ್ರವನ್ನು ಹಾಕಿ, 'ಸಿನಿಮಾ ಮಾಡಿದರೆ ಜನ ಬರಲಿಲ್ಲ, ಚುನಾವಣೆಗೆ ನಿಂತರೆ ಮತ ಬರಲಿಲ್ಲ, ಮದುವೆಗೂ ಜನ ಬರಲಿಲ್ಲ, ಎಂಥಹಾ ದುರಾದೃಷ್ಟ' ಎಂದು ವ್ಯಂಗ್ಯವಾಗಿ ಕಾಲೆಳೆದಿದ್ದಾರೆ.

ಟ್ರೋಲಿಗರಿಗೆ ಮೊದಲಿನಿಂದ ಆಪ್ತರು ನಿಖಿಲ್
ನಿಖಿಲ್ ಕುಮಾರಸ್ವಾಮಿ ಅವರು ಟ್ರೋಲಿಗರಿಗೆ ಮೊದಲಿನಿಂದಲೂ ಆಪ್ತರು. ಹಿಂದೊಮ್ಮೆ 'ನಿಖಿಲ್ ಎಲ್ಲಿದ್ದೀಯಪ್ಪಾ?' ಎಂಬುದು ಬಹಳವಾಗಿ ಖ್ಯಾತವಾಗಿತ್ತು. ಆದರೆ ಇದಾವುದರ ಬಗ್ಗೆ ತಲೆಕೆಡಿಸಿಕೊಳ್ಳದ ನಿಖಿಲ್ ಕುಮಾರಸ್ವಾಮಿ, ಟ್ರೋಲ್ಗಳನ್ನು ಕ್ರೀಡಾಸ್ಪೂರ್ತಿಯಿಂದಲೇ ಪರಿಗಣಿಸಿದ್ದರು. ಎಲ್ಲಿಯೂ ಟ್ರೋಲ್ಗಳ ವಿರುದ್ಧ ನಕಾರಾತ್ಮಕವಾಗಿ ಮಾತನಾಡಲಿಲ್ಲ.

ಏಪ್ರಿಲ್ 17 ಕ್ಕೆ ನಿಖಿಲ್ ವಿವಾಹ ನೆರವೇರಿತು
ನಿಖಿಲ್ ಕುಮಾರಸ್ವಾಮಿ ವಿವಾಹವು ಏಪ್ರಿಲ್ 17 ರಂದು ಸರಳವಾಗಿ ನೆರವೇರಿತು. ಕುಟುಂಬ ಸದಸ್ಯರು ಮಾತ್ರವೇ ಹಾಜರಿದ್ದ ಸಮಾರಂಭದಲ್ಲಿ ಶಾಸ್ತ್ರೋಕ್ತವಾಗಿ ನಿಖಿಲ್ ಅವರು ರೇವತಿ ಅವರ ಕೈ ಹಿಡಿದರು. ಮದುವೆಯ ಕುರಿತು ಕೆಲವರು ಅಸಮಾಧಾನ ವ್ಯಕ್ತಪಡಿಸಿದರಾದರೂ, ಕುಮಾರಸ್ವಾಮಿ ಸರಣಿ ಟ್ವೀಟ್ ಮೂಲಕ ಮದುವೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದೇವೆ ಎಂದು ಸಮಜಾಯಿಷಿ ನೀಡಿದರು.


Click it and Unblock the Notifications











