ಸೂರಪ್ಪ ಬಾಬುಗೆ ಶಿವಣ್ಣ 20 ಲಕ್ಷ ಬಾಕಿ ಸಂದಾಯ

ಶಿವಣ್ಣನಿಗೆ ಕೊಟ್ಟಿದ್ದ ರು.20 ಲಕ್ಷ ಮುಂಗಡ ಹಣ ಸೂರಪ್ಪ ಬಾಬುಗೆ ಶೀಘ್ರದಲ್ಲೇ ಸಂದಾಯವಾಗಲಿದೆ ಎಂದು ಫಿಲಂ ಚೇಂಬರ್ ಮೂಲಗಳು ಸ್ಪಷ್ಪಪಡಿಸಿವೆ. ಕನ್ನಡ ಚಿತ್ರಗಳ ಮತ್ತೊಬ್ಬ ನಿರ್ಮಾಪಕ ಕೆಪಿ ಶ್ರೀಕಾಂತ್ ಅವರು ಸೂರಪ್ಪ ಬಾಬುಗೆ ಮುಂಗಡ ಹಣವನ್ನು ಸೆಟ್ಲ್ ಮಾಡಲು ಮುಂದೆ ಬಂದಿದ್ದಾರೆ ಎನ್ನುತ್ತವೆ ಮೂಲಗಳು.
ಸೂರಪ್ಪ ಬಾಬು ಅವರು ಫೈನಾನ್ಸ್ ನಲ್ಲಿ ಸಾಲ ತೆಗೆದುಕೊಂಡಿದ್ದರು. ಅವರ ಸಾಲವನ್ನು ತಾವು ತೀರಿಸುವುದಾಗಿ ಕೆಪಿ ಶ್ರೀಕಾಂತ್ ಭರವಸೆ ಕೊಟ್ಟಿದ್ದಾರೆ. ಈಗ ಶಿವಣ್ಣನಿಗೆ ಕೊಟ್ಟಿದ್ದ ಮುಂಗಡ ಹಣ ಕೆಪಿ ಶ್ರೀಕಾಂತ್ ಅವರಿಗೆ ವರ್ಗವಾಗಿದೆ.
ಫ್ಲ್ಯಾಷ್ ಬ್ಯಾಕ್: 'ವರದ' ಎಂಬ ಚಿತ್ರಕ್ಕಾಗಿ ಶಿವಣ್ಣನಿಗೆ ರು.20 ಲಕ್ಷ ಅಡ್ವಾನ್ಸ್ ಕೊಟ್ಟಿದ್ದರಂತೆ ಸೂರಪ್ಪ ಬಾಬು. ಆದರೆ ಆ ಚಿತ್ರದ ಶೂಟಿಂಗ್ ಇನ್ನೂ ಪ್ರಾರಂಭವಾಗಿಲ್ಲ. ಈ ಹಣವನ್ನು ತಮಗೆ ವಾಪಸು ಕೊಡಿಸಬೇಕು ಎಂದು ಲಿಖಿತ ರೂಪದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸೂರಪ್ಪ ಬಾಬು ದೂರು ನೀಡಿದ್ದರು.
ಅಭಿನಯ ಚಕ್ರವರ್ತಿ ಬಿರುದಾಂಕಿತ ಸುದೀಪ್ ಅವರು ಈಗಾಗಲೆ 'ವರದನಾಯಕ' ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ತಮ್ಮ ಚಿತ್ರಕ್ಕೆ ವರದ ಎಂಬ ಶೀರ್ಷಿಕೆ ಸರಿಹೋಗಲ್ಲ. ಹಾಗಾಗಿ ತಾನು ಸಿನಿಮಾ ಕೈಬಿಟ್ಟಿದ್ದೇನೆ. ಶಿವಣ್ಣನಿಗೆ ಕೊಟ್ಟಿರುವ ರು.20 ಲಕ್ಷ ಅಡ್ವಾನ್ಸ್ ಹಣವನ್ನು ವಾಪಸ್ ಕೊಡಿಸಿ ಎಂಬುದು ಬಾಬು ಅವರ ಅಹವಾಲಾಗಿತ್ತು.
ಕಳೆದ 25 ವರ್ಷಗಳಿಂದ ಯಾವುದೇ ವಾದ ವಿವಾದಗಳಿಗೆ ಗುರಿಯಾಗದೆ ತಮ್ಮ ಪಾಡಿಗೆ ತಾವಿದ್ದರು ಶಿವಣ್ಣ. ನಿರ್ಮಾಪಕರ ಪಾಲಿಗೆ ಹಾಟ್ ಕೇಕ್ ಆಗಿದ್ದರು. ಶಿವಣ್ಣ ವಿರುದ್ಧ ಸೂರಪ್ಪ ಬಾಬು ದೂರು ನೀಡುವ ಮೂಲಕ ಶಿವಣ್ಣ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. (ಏಜೆನ್ಸೀಸ್)


Click it and Unblock the Notifications











