ಸೈಬರ್ ಯುಗದೊಳ್ ಚಿತ್ರದ ವಿರುದ್ಧ ಪ್ರತಿಭಟನೆ

ಚಿತ್ರದಲ್ಲಿ ಹಿಂದು ವಿರೋಧಿ ದೃಶ್ಯಗಳಿವೆ ಎಂಬ ಬಗ್ಗೆ ಶ್ರೀರಾಮ ಯುವ ಸೇನೆ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ. ಈ ಸಂಬಂಧ ಅವರು ಗುರುವಾರ (ಸೆ.27) ಬೆಂಗಳೂರು ಕೆ.ಜಿ. ರಸ್ತೆಯ ಅನುಪಮ ಚಿತ್ರಮಂದಿರದ ಮುಂದೆ ಪ್ರತಿಭಟನೆ ನಡೆಸಿದರು. ಹಾಗಾಗಿ ಸೆ.27ರ ಬೆಳಗಿನ ಚಿತ್ರ ಪ್ರದರ್ಶನ ರದ್ದಾಗಿದೆ.
'ಸೈಬರ್ ಯುಗದೊಳ್' ಚಿತ್ರದಲ್ಲಿನ ಆಕ್ಷೇಪಾರ್ಹ ಸನ್ನಿವೇಶಗಳನ್ನು ತೆಗೆಯಬೇಕು ಎಂದು ಸಂಘಟನೆಯ ಕಾರ್ಯಕರ್ತರು ಆಗ್ರಹಿಸಿದರು. ಚಿತ್ರದ ವಿರುದ್ಧವೂ ಘೋಷಣೆಗಳನ್ನು ಕೂಗಿದರು. ಶ್ರೀರಾಮ ಯುವ ಸೇನೆ ಒಕ್ಕೂಟದ ಪ್ರತಿಭಟನೆಗೆ ಸಿದ್ದರಾಮಚೈತನ್ಯ ಸ್ವಾಮಿ ಸಾಥ್ ನೀಡಿದರು.
ಪ್ರತಿಭಟನಾ ಸ್ಥಳಕ್ಕೆ ಚಿತ್ರದ ನಿರ್ದೇಶಕ ಮಧುಚಂದ್ರ ಹಾಗೂ ನಟ ಗುರುನಂದನ್ ಅವರೂ ಆಗಮಿಸಿದ ಪ್ರತಿಭಟನಾ ನಿರತ ಕಾರ್ಯಕರ್ತರನ್ನು ಸಮಾಧಾನಪಡಿಸಿದರು. ಬಳಿಕ ಸಿದ್ದರಾಮಚೈತನ್ಯ ಸ್ವಾಮಿಗಳ ನೇತೃತ್ವದಲ್ಲಿ ಶ್ರೀರಾಮ ಯುವ ಸೇನೆ ಒಕ್ಕೂಟದ ಕಾರ್ಯಕರ್ತರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದರು. ಚಿತ್ರ ವಿಮರ್ಶೆ ಓದಿ: ಸೈಬರ್ ಯುಗದೊಳ್.
'ಸೈಬರ್ ಯುಗದೊಳ್' ಚಿತ್ರ ಲಿವ್ ಇನ್ ರಿಲೇಷನ್ (ಸಹ ಜೀವನ) ಬಗ್ಗೆ ಬೆಳಕು ಚೆಲ್ಲುತ್ತದೆ. ಚಿತ್ರದ ಕಥಾವಸ್ತುವೇ ಲಿವ್ ಇನ್ ರಿಲೇಷನ್ ಶಿಪ್ ಆಗಿದ್ದು, ಚಿತ್ರದಲ್ಲಿನ ಈ ಅಂಶಗಳೇ ಶ್ರೀರಾಮ ಯುವ ಸೇನೆ ಒಕ್ಕೂಟದ ವಿರೋಧಕ್ಕೆ ಕಾರಣವಾಗಿವೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











