'ಮದಗಜ' ಚಿತ್ರೀಕರಣ ವೇಳೆ ನಟ ಶ್ರೀಮುರಳಿ ಕಾಲಿಗೆ ಪೆಟ್ಟು: 15 ದಿನಗಳು ಸಂಪೂರ್ಣ ವಿಶ್ರಾಂತಿ
ಮದಗಜ ಚಿತ್ರೀಕರಣ ವೇಳೆ ನಟ ಶ್ರೀಮುರಳಿ ಕಾಲಿಗೆ ಪೆಟ್ಟು ಬಿದ್ದಿದೆ. ಚಿತ್ರದ ಆಕ್ಷನ್ ದೃಶ್ಯ ಚಿತ್ರೀಕರಣ ವೇಳೆ ಈ ಘಟನೆ ನಡೆದಿದೆ. ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಣ ಮಾಡಲಾಗುತ್ತಿತ್ತು. ಆಯೋಗ್ಯ ಖ್ಯಾತಿಯ ಮಹೇಶ್ ಸಾರಥ್ಯದಲ್ಲಿ ಮದಗಜ ಸಿನಿಮಾ ಮೂಡಿಬರುತ್ತಿದೆ.
5 ದಿನಗಳ ಕಾಲ ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಣ ಮಾಡಲು ಸಿನಿಮಾತಂಡ ಯೋಜನೆ ಹಾಕಿಕೊಂಡಿತ್ತು. ಆಕ್ಷನ್ ದೃಶ್ಯ ಸೆರೆಹಿಡಿಯಲು ಅದ್ದೂರಿ ಸೆಟ್ ಕೂಡ ನಿರ್ಮಾಣಮಾಡಲಾಗಿದೆ. ಚಿತ್ರದ ಅತೀ ದೊಡ್ಡ ಫೈಟ್ ದೃಶ್ಯ ಇದಾಗಿದ್ದು, ಸುಮಾರು 300ಕ್ಕೂ ಅಧಿಕ ಜೂನಿಯರ್ ಕಲಾವಿದರು ಆಕ್ಷನ್ ದೃಶ್ಯ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.
ಈ ವೇಳೆ ಶ್ರೀಮುರಳಿ ಕಾಲಿಗೆ ಏಟಾಗಿದೆ. ಕಾಲಿಗೆ ಪೆಟ್ಟು ಬೀಳುತ್ತಿದ್ದಂತೆ ಶ್ರೀಮುರಳಿ ಸ್ಥಳದಲ್ಲೇ ಕುಸಿದಿದ್ದಾರೆ. ತಕ್ಷಣ ಅವರಿಗೆ ಚಿಕಿತ್ಸೆ ನೀಡಲಾಗಿದೆ. ಸದ್ಯ ಚೇತರಿಸಿಕೊಳ್ಳುತ್ತಿರುವ ಶ್ರೀಮುರಳಿಗೆ 15 ದಿನಗಳು ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ.

ಮದಗಜ ಸಿನಿಮಾ ಸೆಟ್ಟೇರಿ ಎರಡು ವರ್ಷದ ಮೇಲಾಗಿದೆ. ಕೊರೊನಾ ಕಾರಣದಿಂದ ತಡವಾಗಿದ್ದ ಸಿನಿಮಾಗೆ ಲಾಕ್ ಡೌನ್ ಬಳಿಕ ಮತ್ತೆ ಕಿಕ್ ಸ್ಟಾರ್ಟ್ ನೀಡಲಾಗಿತ್ತು. ಆದರೀಗ ಶ್ರೀಮುರಳಿ ಕಾಲಿಗೆ ಪೆಟ್ಟಾದ ಕಾರಣ ಮತ್ತೆ ಚಿತ್ರೀಕರಣ ತಡವಾಗುತ್ತಿದೆ.
ಮದಗಜ ಚಿತ್ರದಲ್ಲಿ ಶ್ರೀಮುರಳಿಗೆ ನಾಯಕಿಯಾಗಿ ಆಶಿಕಾ ರಂಗನಾಥ್ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ವಿಲನ್ ಆಗಿ ಖ್ಯಾತ ನಟ ಜಗಪತಿ ಬಾಬು ನಟಿಸಿದ್ದಾರೆ. ಟೀಸರ್ ಮೂಲಕ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿರುವ ಮದಗಜ ಯಾವಾಗ ತೆರೆಗೆ ಬರಲಿದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.


Click it and Unblock the Notifications











