ಶಿವಣ್ಣನ ಜತೆ ಮಣಿ ಮಣಿ ಸಾಂಗ್ ಹಾಡಿದ ರಾಗಿಣಿ
ಶಿವಮೊಗ್ಗ ಲೋಕಸಭಾ ಕಣದಲ್ಲಿರುವ ತೆನೆಹೊತ್ತ ಮಹಿಳೆ ಗೀತಾ ಶಿವರಾಜ್ ಕುಮಾರ್ ಪರ ಹಲವು ತಾರೆಗಳು ಪ್ರಚಾರ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ಪಟ್ಟಿಗೆ ಹೊಸ ಸೇರ್ಪಡೆ ಎಂದರೆ ಡೈಮಂಡ್ ಸ್ಟಾರ್ ಕಿಟ್ಟಿ ಹಾಗೂ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ.
ಇವರಿಬ್ಬರೂ ಗೀತಾ ಶಿವರಾಜ್ ಕುಮಾರ್ ಅವರ ಪ್ರಚಾರಕ್ಕೆ ಸಾಥ್ ನೀಡುವ ಮೂಲಕ ಹೊಸ ರಂಗು ತಂದರು. ಶಿವಮೊಗ್ಗದಲ್ಲಿ ರೋಡ್ ಶೋ ವೇಳೆ ಶಿವಣ್ಣನ ಜೊತೆ ರಾಗಿಣಿ ದ್ವಿವೇದಿ ಸಹ ಮತಯಾಚಿಸಿದರು. ತಮ್ಮ ಪತ್ನಿ ಪರ ಪ್ರಚಾರ ಮಾಡುತ್ತಾ ಶಿವಣ್ಣ ತೆರೆದ ವಾಹನದಲ್ಲಿ ಭರ್ಜರಿ ಪ್ರಚಾರ ಆರಂಭಿಸಿದರು. [ಶಿವಮೊಗ್ಗದಲ್ಲಿ ಕೇಳಿಬಂದ ಪಂಚಿಂಗ್ ಡೈಲಾಗ್ ಗಳು]
ಈ ಸಂದರ್ಭದಲ್ಲಿ ಶಿವಣ್ಣ ಅಭಿಮಾನಿಗಳು "ಅಣ್ಣಾ ನೀವು ಒಂದು ಹಾಡು ಹೇಳಲೇಬೇಕು. ಇಲ್ಲಾಂದ್ರೆ ಓಟ್ ಹಾಕಲ್ಲ ಎಂದು ಗಲಾಟೆ ಮಾಡಿದರು. ನೀವೆಲ್ಲಾ ಗಲಾಟೆ ಮಾಡದೆ ಸಮಾಧಾನದಿಂದ ಇದ್ದರೆ ಹಾಡು ಹೇಳ್ತೀನಿ ಎಂದು ತಮ್ಮ ಎವರ್ ಗ್ರೀನ್ ಚಿತ್ರ 'ಜನುಮದ ಜೋಡಿ' ಚಿತ್ರದ "ಮಣಿ ಮಣಿ ಮಣಿ ಮಣಿಗೊಂದು ದಾರ..." ಎಂದು ಹಾಡಿದರು.

ಅವರ ಹಾಡಿಗೆ ನೆರೆದಿದ್ದ ಅಭಿಮಾನಿಗಳು ಪುಳಕಿತರಾದರು. ಈ ಬಾರಿ ನಮ್ಮ ಓಟು ಗೀತಕ್ಕನಿಗೇ ಬಿಡಣ್ಣೋ ಎಂದರು. ಶಿವಣ್ಣ ಹಾಡು ಹೇಳಿದ್ದಕ್ಕೆ ಅಲ್ಲಿಯೇ ಇದ್ದ ರಾಗಿಣಿ ಸಹ ಉತ್ಸುಕರಾಗಿ ತಾನೂ ಒಂದು ಹಾಡು ಹೇಳುತ್ತೇನೆ ಎಂದು ಮೈಕ್ ಕೈಗೆತ್ತಿಕೊಂಡು 'ಶಿವ' ಚಿತ್ರದ "ನೀ ಓಡಿ ಬಂದಾಗ..." ಹಾಡನ್ನು ಹಾಡಿದರು.
ರಾಗಿಣಿ ಹಾಡಿಗೆ ಅಷ್ಟಾಗಿ ಯಾರೂ ಪುಳಕಿತರಾಗಲಿಲ್ಲ ಎಂಬುದು ಬೇರೆ ವಿಚಾರ, ಎಲ್ಲರೂ ತುಪ್ಪ ಬೇಕಾ ತುಪ್ಪ ಹಾಡು ನಿರೀಕ್ಷಿಸಿದ್ದರು. ಆದರೆ ಅವರ ಆಸೆಗೆ ರಾಗಿಣಿ ತಣ್ಣೀರೆರಚಿದರು. ಇನ್ನೊಂದು ಕಡೆ ಡೈಮಂಡ್ ಸ್ಟಾರ್ ಕಿಟ್ಟಿ ಸಹ ಗೀತಾ ಶಿವರಾಜ್ ಕುಮಾರ್ ಪರ ಮತಯಾಚನೆ ಮಾಡಿದರು.
ಇದುವರೆಗೂ ಗೀತಾ ಪರ ಲೂಸ್ ಮಾದ ಯೋಗೀಶ್, ಸಂಜನಾ ಗಲ್ ರಾಣಿ, ರಿಯಲ್ ಸ್ಟಾರ್ ಉಪೇಂದ್ರ, ಲವ್ಲಿ ಸ್ಟಾರ್ ಪ್ರೇಮ್ ಪ್ರಚಾರ ಮಾಡಿದ್ದಾರೆ. ತಾರೆಗಳ ಬಿರುಸಿನ ಪ್ರಚಾರ ಶಿವಮೊಗ್ಗದಲ್ಲಿ ಜೋರಾಗಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











