'ಲವ್ ಯೂ ರಚ್ಚು' ಅವಘಡ: ದುರಂತಕ್ಕೆ ಕಾರಣ ಬಹಿರಂಗಪಡಿಸಿದ ಗಾಯಾಳು ರಂಜಿತ್
ಅಜಯ್ ರಾವ್ ಮತ್ತು ರಚಿತಾ ರಾಮ್ ನಟನೆಯ 'ಲವ್ ಯೂ ರಚ್ಚು' ಚಿತ್ರೀಕರಣ ವೇಳೆ ಹೈಟೆನ್ಷನ್ ಕರೆಂಟ್ ತಂತಿ ತಗುಲಿ ಸಾಹಸ ಕಲಾವಿದ ವಿವೇಕ್ ಸಾವನ್ನಪ್ಪಿದ್ದಾರೆ. ಈ ಅವಘಡದಲ್ಲಿ ಮತ್ತೊಬ್ಬ ವ್ಯಕ್ತಿಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಐಸಿಯುಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Recommended Video
ಘಟನೆಗೆ ಸಂಬಂಧಿಸಿದಂತೆ ಮಾಸ್ಟರ್ ವಿನೋದ್ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹೈಟೆನ್ಷನ್ ವೈರ್ ತಗುಲಿ ಗಾಯಗೊಂಡ ಸಹಾಯಕ ರಂಜಿತ್ ಆಸ್ಪತ್ರೆಯಲ್ಲಿ ಅವಘಡದ ಬಗ್ಗೆ ವಿವರಿಸಿದ್ದು, ಘಟನೆಗೆ ಏನು ಕಾರಣ, ಈ ಅವಘಡ ಹೇಗೆ ಸಂಭವಿಸಿತು ಎಂದು ಬಹಿರಂಗಪಡಿಸಿದ್ದಾರೆ.
ಗಾಯಾಳು ರಂಜಿತ್ ಹೇಳುವಂತೆ, ''ಇದು ಕ್ರೇನ್ ಆಪರೇಟರ್ ಅಜಾಗರೂಕತೆಯಿಂದ ಆಗಿರುವ ಘಟನೆ. ಇದರಲ್ಲಿ ಫೈಟ್ ಮಾಸ್ಟರ್ ಆಗಲಿ ಅಥವಾ ಬೇರೆ ಯಾರದ್ದೇ ಅಗಲಿ ತಪ್ಪಿಲ್ಲ. ಕ್ರೇನ್ ಆಪರೇಟರ್ ಅಚಾನಕ್ ಆಗಿ ವೈರ್ ತಗುಲಿಸಿದ ಕಾರಣ ದುರಂತ ನಡೆಯಿತು'' ಎಂದು ಹೇಳಿದ್ದಾರೆ. ಮುಂದೆ ಓದಿ...

ಮಾಸ್ಟರ್ ಆರೋಪಿ ಅಲ್ಲ
''ನಾನು ಏಳು ವರ್ಷದಿಂದ ಮಾಸ್ಟರ್ ಬಳಿ ಕೆಲಸ ಮಾಡ್ತಿದ್ದೇನೆ. ಅವರು ಈ ರೀತಿ ನಿರ್ಲಕ್ಷ್ಯ ಮಾಡುವ ವ್ಯಕ್ತಿಯಿಲ್ಲ. ಶೂಟಿಂಗ್ನಲ್ಲಿ ಎಲ್ಲ ಸ್ಟಂಟ್ ಚೆನ್ನಾಗಿ ಆಗ್ತಿತ್ತು. ಟೇಕ್ ಮಾಡೋದಕ್ಕೆ ರಿಹಾರ್ಸಲ್ ಮಾಡ್ತಿದ್ವಿ. ಪಕ್ಕದಲ್ಲೇ ಮಾಸ್ಟರ್ ಹೀರೋ ಅವರದ್ದು ಶೂಟ್ ಮಾಡ್ತಿದ್ರು. ಮೊದಲೇ ಆ ತೋಟದೊಳಗೆ ಕ್ರೇನ್ ಬರಲ್ಲ ಅಂತ ಹೇಳಿದ. ಆಮೇಲೆ ಹೇಗೋ ಒಳಗೆ ಬಂದ. ಮೊದಲು ಒಂದು ಸಲ ಮರ ಟಚ್ ಮಾಡಿದ. ಆಗಲೇ ನಾವು ಎಚ್ಚರಿಸಿದ್ವಿ. ಆದರೆ ಇನ್ನೊಂದು ಅಚಾನಕ್ ಆಗಿ ಹೈಟೆನ್ಷನ್ ವೈರ್ ಟಚ್ ಮಾಡಿದಾಗ ಹೀಗೆ ಆಯಿತು. ಇಲ್ಲಿ ಮಾಸ್ಟರ್ನ ಆರೋಪಿ ಮಾಡುವುದು ಸರಿಯಿಲ್ಲ'' ಎಂದು ಹೇಳಿದ್ದಾರೆ.

ಅಜಯ್ ರಾವ್ ಅಲ್ಲೇ ಇದ್ದರು ಬರಲಿಲ್ಲ
''ಇನ್ನು ಘಟನೆ ನಡೆದಾಗ ನಟ ಅಜಯ್ ರಾವ್ ದೂರದಲ್ಲಿದ್ದರು. ಸ್ವಲ್ಪ ಸಮಯದ ನಂತರ ಈ ವಿಷಯ ತಿಳಿಯಿತು ಎಂದು ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದಾರೆ. ಅವರು ಹೇಳಿದಂತೆ ದೂರದಲ್ಲಿ ಎಲ್ಲೋ ಇರಲಿಲ್ಲ. ನಾವು ವೈರ್ ಟಚ್ ಆಗಿ ಕೆಳಗೆ ಬಿದ್ದೆವು. ಕೂಡಲೇ ನಮ್ಮ ಫೈಟರ್ಸ್ ಓಡಿ ಬಂದು ಏನಾಯ್ತು ಎಂದು ನೋಡಿದರು. ಆಗ ನಮ್ಮ ಕಣ್ಣೆದುರಲ್ಲೇ ಅಜಯ್ ರಾವ್ ಟೆಂಟ್ನಲ್ಲಿ ಕುಳಿತಿದ್ದರು. ನಮ್ಮ ಹತ್ತಿರ ಸಹ ಅವರು ಬರಲಿಲ್ಲ'' ಎಂದು ರಂಜಿತ್ ತಿಳಿಸಿದ್ದಾರೆ.

ನಾನು ಸ್ಥಳದಲ್ಲಿ ಇರಲಿಲ್ಲ
ಘಟನೆ ಬಗ್ಗೆ ಪ್ರತಿಕ್ರಿಯಿಸಿದ ನಟ ಅಜಯ್ ರಾವ್ ''ದೃಶ್ಯದ ಚಿತ್ರೀಕರಣದಲ್ಲಿ ನಾನು ಇರಲಿಲ್ಲ. ಆದರೆ ಘಟನೆ ನಡೆದ ಸ್ಥಳದಿಂದ ಸುಮಾರು 200 ಮೀಟರ್ ದೂರದಲ್ಲಿ ಇದ್ದೆ. ಜೋರಾಗಿ ಸದ್ದು ಬಂತು ಕೂಡಲೇ ಓಡಿ ಬಂದೆವು ನೋಡಿದರೆ ಅವಘಡ ಸಂಭವಿಸಿ ಆಗಿತ್ತು. ನಾನು ಸದಾ ಸುರಕ್ಷತೆಗೆ ಮಹತ್ವ ನೀಡುತ್ತೇನೆ. ಇತ್ತೀಚೆಗಷ್ಟೆ ಮೆಟಲ್ ರೋಪ್ ಬಗ್ಗೆ ಪ್ರಶ್ನೆ ಮಾಡಿದ್ದೆ. ಆದರೆ ಹಾಗೆ ಪ್ರಶ್ನೆ ಮಾಡಿದ್ದರಿಂದ ನಾನು ಕೆಟ್ಟವನಾಗಿದ್ದೆ. ಹೀಗೆ ಪ್ರಶ್ನೆಗಳನ್ನು ಮಾಡಿದರೆ ಕೆಲಸದಲ್ಲಿ ಮೂಗು ತೂರಿಸುತ್ತಾರೆ ಎಂಬ ನಿಂದನೆ ಅನುಭವಿಸಬೇಕಾಗುತ್ತದೆ'' ಎಂದಿದ್ದಾರೆ.

ವಿವೇಕ್ಗೆ ನ್ಯಾಯ ಸಿಗಬೇಕು
''ಸಾಹಸ ನಿರ್ದೇಶಕ ವಿನೋದ್ ಜೊತೆ ಮಾತನಾಡುವ ಅವಕಾಶವೇ ನನಗೆ ಸಿಕ್ಕಿಲ್ಲ. ನಾನು ಬಹಳ ಮುಂಜಾಗೃತೆ ಇರುವ ವ್ಯಕ್ತಿ. ಸುರಕ್ಷತೆ ಸಂಬಂಧ ಸಾಕಷ್ಟು ಪ್ರಶ್ನೆಗಳನ್ನು ಚಿತ್ರೀಕರಣ ಸೆಟ್ನಲ್ಲಿ ಕೇಳುತ್ತಲೇ ಇದ್ದೆ. ಆದರೆ ನಾನು ನಟಿಸುತ್ತಿರುವ ಸಿನಿಮಾದಲ್ಲಿಯೇ ಅವಘಡ ನಡೆದಿದೆ. ವಿವೇಕ್ಗೆ ನ್ಯಾಯ ಸಿಗುವ ವರೆಗೆ ನಾನು ಚಿತ್ರೀಕರಣಕ್ಕೆ ಹೋಗುವುದಿಲ್ಲ'' ಎಂದು ನಟ ಅಜಯ್ ರಾವ್ ನಿರ್ಧರಿಸಿದ್ದಾರೆ.

ಸ್ವಯಂಪ್ರೇರಿತ ದೂರು
ಘಟನೆ ಸಂಬಂಧ ವಿವೇಕ್ ಕುಟುಂಬದವರಾಗಲಿ ಅಥವಾ ರಂಜಿತ್ ಕಡೆಯವರಾಗಲಿ ಇದುವರೆಗೂ ದೂರು ಕೊಟ್ಟಿಲ್ಲ. ಆದರೆ, ಸ್ವಯಂಪ್ರೇರಿತವಾಗಿ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದು, ಫೈಟ್ ಮಾಸ್ಟರ್ ವಿನೋದ್ ಸೇರಿ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡ್ತಿದ್ದಾರೆ. ಮತ್ತೊಂದು ಜಮೀನು ಮಾಲೀಕ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಇದೆ. ಅನುಮತಿ ಇಲ್ಲದೇ ಚಿತ್ರೀಕರಣಕ್ಕೆ ಅವಕಾಶ ಕೊಟ್ಟ ಆರೋಪ ಈಗ ಜಮೀನು ಮಾಲೀಕನ ಮೇಲೆ ಬಂದಿದೆ.


Click it and Unblock the Notifications











