ಸುದೀಪ್ 'ಬಚ್ಚನ್'ಗಿರಿಗೆ ಐವತ್ತರ ಸಂಭ್ರಮ
ಕೂಲಾಗಿದ್ದಾಗ ಮಾತ್ರ ನಾನು ಜಂಟಲ್ ಮೆನ್...ಕೋಪ ಬಂದಾಗ...ನಾನು ಬಾರ್ಸೋ ಬಚ್ಚನ್. ನನ್ ಹೊಡ್ತಾನೆ ನನ್ ವಿಸಿಟಿಂಗ್ ಕಾರ್ಡು. ಗೂಂಡಾಗಿರಿ ಮಾಡೋರ್ ಮುಂದೆ ಗಾಂಧಿಗಿರಿ ನಡೆಯಲ್ಲ...ಬಚ್ಚನ್ ಗಿರಿನೇ ತೋರಿಸ್ಬೇಕು...ಎಂದು ಸುದೀಪ್ ಡೈಲಾಗ್ ಮೇಲೆ ಡೈಲಾಗ್ ಹೊಡೆದ 'ಬಚ್ಚನ್ ಚಿತ್ರ ಅರ್ಧ ಸೆಂಚುರಿ ಪೂರೈಸಿದೆ.
'ಬಚ್ಚನ್' ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಭಾರಿ ಸದ್ದು ಮಾಡುವುದರ ಜೊತೆಗೆ ಐವತ್ತು ದಿನಗಳನ್ನು ಪೂರೈಸಿದೆ. ಉದಯ್ ಕೆ ಮೆಹ್ತಾ ನಿರ್ಮಾಣದ ಚಿತ್ರ ಈ ವರ್ಷದ ಹಿಟ್ ಚಿತ್ರಗಳ ಸಾಲಿಗೆ ಸೇರಿದ್ದು 20 ಚಿತ್ರಮಂದಿರಗಳಲ್ಲಿ ಅರ್ಧ ಸೆಂಚುರಿ ಬಾರಿಸಿದೆ.
ನಿರ್ದೇಶಕ ಶಶಾಂಕ್ ಅವರಿಗೆ ಅಂಟಿದ್ದ 'ಜರಾಸಂಧ' ಸೋಲಿನ ಕಲೆಯನ್ನು 'ಬಚ್ಚನ್' ಚಿತ್ರ ಸಂಪೂರ್ಣವಾಗಿ ಅಳಿಸಿಹಾಕಿದೆ. ಶಶಾಂಕ್ ಅವರಿಗೆ ಹೊಸ ಶಕ್ತಿಯನ್ನೂ ತಂದುಕೊಟ್ಟಿದೆ. ಅವರ ಶಕ್ತಿ ಸಾಮರ್ಥ್ಯಗಳು 'ಬಚ್ಚನ್ 2'ಕ್ಕೆ ಸೋಪಾನ ಹಾಕಿವೆ.
ಸುದೀಪ್ ಅವರ ಎತ್ತರಕ್ಕೆ ತಕ್ಕಂತೆ ಅವರ ಚಿತ್ರಗಳೂ ಎತ್ತರಕ್ಕೆ ಏರುತ್ತಿರುವುದು ವಿಶೇಷ. ಸದ್ಯಕ್ಕೆ ಅವರು ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ. ಇದರ ಜೊತೆಗೆ 'ಆಕ್ಷನ್ 3D' ಎಂಬ ಮತ್ತೊಂದು ತೆಲುಗು ಚಿತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. (ಬಚ್ಚನ್ ಚಿತ್ರ ವಿಮರ್ಶೆ)ಬಚ್ಚನ್ ಚಿತ್ರ ತಾಂತ್ರಿಕವಾಗಿಯೂ ಪ್ರೌಢವಾಗಿದ್ದು ಶೇಖರ್ ಚಂದ್ರು ರವರ ಛಾಯಾಗ್ರಹಣ, ವಿ ಹರಿಕೃಷ್ಣ ಸಂಗೀತ ಮೆಚ್ಚುಗೆಗೆ ಪಾತ್ರವಾಗಿದೆ. ಪಾತ್ರವರ್ಗದಲ್ಲಿ ಪಾರೂಲ್ ಯಾದವ್, ತುಲಿಪ್ ಜೋಷಿ, ಭಾವನಾ, ಆಶಿಶ್ ವಿದ್ಯಾರ್ಥಿ, ರವಿಶಂಕರ್ ಮತ್ತು ತೆಲುಗಿನ ಖ್ಯಾತನಟ ಜಗಪತಿ ಬಾಬು ಮುಂತಾದವರಿದ್ದಾರೆ.
ಬಚ್ಚನ್ ಚಿತ್ರದ ಇನ್ನೊಂದು ವಿಶೇಷ ಎಂದರೆ, ಗಲ್ಫ್ ದೇಶಗಳಲ್ಲೂ ಬಿಡುಗಡೆಯಾಗಿ ಅಲ್ಲೂ ಸದ್ದು ಮಾಡಿದ್ದು. ದುಬೈ, ಅಬುಧಾಬಿ ಹಾಗೂ ಶಾರ್ಜಾದಲ್ಲೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications












