ಸುದೀಪ್ 'ವರದನಾಯಕ' ನಿರೀಕ್ಷೆಯಲ್ಲಿ ಫ್ಯಾನ್ಸ್
ತೆಲುಗಿನ 'ಈಗ' ಚಿತ್ರದ ಮೂಲಕ ದೇಶದ ಗಮನಸೆಳೆದ ನಟ ಕಿಚ್ಚ ಸುದೀಪ್ ಇದೀಗ 'ವರದನಾಯಕ' ಚಿತ್ರದ ಮೂಲಕ ಈ ವಾರ (ಜ.25) ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದು ಚಿರಂಜೀವಿ ಸರ್ಜಾಗೆ ಸಾಥ್ ನೀಡಿದ್ದಾರೆ.
ಇನ್ನು ಚಿತ್ರದ ಪ್ರಚಾರ ನೋಡಿದರೆ ಸುದೀಪ್ ಅವರೇ ಚಿತ್ರದ ನಾಯಕ ನಟರೇನೋ ಎಂಬಂತೆ ಬಿಂಬಿಸಲಾಗಿದೆ. ಶಂಕರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶಂಕರ್ ನಿರ್ಮಿಸಿರುವ ಚಿತ್ರಕ್ಕೆ ಅಯ್ಯಪ್ಪ ಪಿ ಶರ್ಮ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ.
ಸುಮಾರು ಎಂಟು ಕೋಟಿ ಬಜೆಟ್ ನಲ್ಲಿ 'ವರದನಾಯಕ' ಚಿತ್ರವನ್ನು ನಿರ್ಮಿಸಲಾಗಿದೆ. ತೆಲುಗಿನ 'ಲಕ್ಷ್ಯಂ' ಚಿತ್ರದ ರೀಮೇಕ್ 'ವರದನಾಯಕ'. ಸಾಮಾನ್ಯವಾಗಿ ಸುದೀಪ್ ರೀಮೇಕ್ ಚಿತ್ರಗಳು ಬಾಕ್ಸ್ ಆಫೀಸಲ್ಲಿ ಸೋತ ಉದಾಹರಣೆಗಳು ವಿರಳ. 'ವರದನಾಯಕ' ಚಿತ್ರದ ಬಗ್ಗೆಯೂ ಬಹಳಷ್ಟು ನಿರೀಕ್ಷೆಗಳಿವೆ.ನಿಖಿತಾ ಪಾಟೀಲ್, ಸಮೀರಾ ರೆಡ್ಡಿ, ಮುಖ್ಯಮಂತ್ರಿ ಚಂದ್ರು, ಜೈಜಗದೀಶ್, ಶೋಭ್ರಾಜ್, ಶರತ್ ಲೋಹಿತಾಶ್ವಾ, ಬುಲೆಟ್ ಪ್ರಕಾಶ್, ಶರಣ್, ಪದ್ಮಜಾರಾವ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಜ.25ರಿಂದ ಸಾಲು ಸಾಲು ರಜೆಗಳಿರುವುದು ಚಿತ್ರಕ್ಕೆ ವರವಾಗಿ ಪರಿಣಮಿಸಲಿದೆ.
ರಾಖೇಶ್ ಛಾಯಾಗ್ರಾಹಕರಾಗಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಈಶ್ವರ್ ಸಂಕಲನ, ಹರ್ಷ ನೃತ್ಯ ನಿರ್ದೇಶನ, ರವಿವರ್ಮ ಸಾಹಸ ನಿರ್ದೇಶನ, ಮೋಹನ್.ಬಿ.ಕೆರೆ ಕಲಾ ನಿರ್ದೇಶನ ಹಾಗೂ ನರಸಿಂಹ ಮತ್ತು ರಾಮಣ್ಣನವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications












