ಅಂಬರೀಶ್ ಮತ್ತು ಗಣೇಶ್ ಮೇಲೆ 'ಈಗ' ದಾಳಿ
ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ ಪರಭಾಷಾ ಚಿತ್ರ 'ಈಗ' ಕರ್ನಾಟಕದಲ್ಲಿ ಹೊಸ ದಾಖಲೆ ನಿರ್ಮಿಸಲು ಅಣಿಯಾಗಿದೆ. ಅನಿಮೇಷನ್ ಪ್ರಧಾನವಾದ ಈ ಚಿತ್ರದ ತೆಲುಗು ಹಾಗೂ ತಮಿಳು ಅವತರಣಿಕೆಗಳು ಜುಲೈ 6, 2012ರಂದು ರಾಜ್ಯದಲ್ಲಿ ತೆರೆಕಾಣುತ್ತಿದೆ.
ಸಕ್ಸಸ್ ಫುಲ್ ನಿರ್ದೇಶಕರೆಂದೇ ಗುರುತಿಸಿಕೊಂಡಿರುವ ಎಸ್ ಎಸ್ ರಾಜಮೌಳಿ ನಿರ್ದೇಶನದ ಈ ಚಿತ್ರ ದೇಶದಾದ್ಯಂತ ಒಟ್ಟು 1200 ಪ್ರಿಂಟ್ ಗಳೊಂದಿಗೆ ಬಿಡುಗಡೆಯಾಗುತ್ತಿದೆ. ಮೂಲಗಳ ಪ್ರಕಾರ ಈಗ ಚಿತ್ರ ಕರ್ನಾಟಕದಲ್ಲಿ 228 ಚಿತ್ರಮಂದಿರಗಳಿಗೆ ಅಪ್ಪಳಿಸುತ್ತಿದೆ.
ಇಲ್ಲಿಯವರೆಗೂ ಪರಭಾಷಾ ಚಿತ್ರವೊಂದು ಈ ಮಟ್ಟದ ಪ್ರಿಂಟ್ ಗಳೊಂದಿಗೆ ರಾಜ್ಯದಲ್ಲಿ ತೆರೆಕಾಣಿದ ನಿದರ್ಶನವಿಲ್ಲ. ಕನ್ನಡಿಗನೊಬ್ಬನ ಪರಭಾಷಾ ಚಿತ್ರವೊಂದು ಈ ರೀತಿ ದಾಖಲೆ ಮಾಡುತ್ತಿರುವುದು ಇದೇ ಮೊದಲು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪ್ರಕಾರ ಪರಭಾಷಾ ಚಿತ್ರಗಳು 150ಕ್ಕಿಂತಲೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆ ಕಾಣುವಂತಿಲ್ಲ. ಆದರೆ ಸುದೀಪ್ ಅಭಿನಯದ ಪರಭಾಷಾ ಚಿತ್ರವೊಂದು ಈ ನೀತಿ ನಿಯಮಗಳನ್ನು ಗಾಳಿಗೆ ತೂರಿ ಬಿಡುಗಡೆಯಾಗುತ್ತಿರುವ ಬಗ್ಗೆ ಚಿತ್ರೋದ್ಯಮದಲ್ಲಿ ಭಾರಿ ಚರ್ಚೆಗೆ ಆಸ್ಪದ ನೀಡಿದೆ.
ಸರಿಸುಮಾರು ರು.26 ಕೋಟಿ ಬಜೆಟ್ ನಲ್ಲಿ ನಿರ್ಮಿಸಿರುವ ಈ ಚಿತ್ರದ ವಿತರಣೆ ಹಕ್ಕುಗಳಿಗಾಗಿ ವಿತರಕರು 'ಈಗ' ಚಿತ್ರದ ಮೇಲೆ ನೊಣಗಳಂತೆ ಮುಗಿಬಿದ್ದಿರುವುದೇ ಈ ಮಟ್ಟದ ಪ್ರಿಂಟ್ ಗಳೊಂದಿಗೆ ಬಿಡುಗಡೆ ಕಾಣಲು ಕಾರಣವಾಗಿದೆ ಎನ್ನುತ್ತವೆ ಗಾಂಧಿನಗರದ ಮೂಲಗಳು.
ಇದೆಲ್ಲದರ ಪರಿಣಾಮ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ರೋಮಿಯೋ' ಚಿತ್ರದ ಮೇಲೆ ಬೀಳಲಿದೆ. ಈಗಾಗಲೆ ಸತತ ಸೋಲುಗಳಿಂದ ಕಂಗೆಟ್ಟಿರುವ ಗಣೇಶ್ ಈ ಚಿತ್ರದ ಮೇಲೆ ಅಷ್ಟೋ ಇಷ್ಟೋ ಭರವಸೆಗಳನ್ನಿಟ್ಟಿದ್ದಾರೆ. ಆದರೆ 'ಈಗ' ಭಾರಿ ಆಘಾತವನ್ನೇ ನೀಡಲಿದೆ ಎಂಬ ಮಾತುಗಳು ಚಿತ್ರೋದ್ಯಮದಲ್ಲಿ ಕೇಳಿಬರುತ್ತಿವೆ.
ಜುಲೈ 6ರಂದು ತೆರೆಕಾಣುತ್ತಿರುವ ಮತ್ತೊಂದು ಚಿತ್ರ 'ಶ್ರೀಕ್ಷೇತ್ರ ಆದಿಚುಂಚನಗಿರಿ'. ರೆಬೆಲ್ ಸ್ಟಾರ್ ಅಂಬರೀಶ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರಕ್ಕೂ 'ಈಗ' ಬಿಸಿಮುಟ್ಟಿಸಲಿದೆ. ಶ್ರೀಕ್ಷೇತ್ರ ಮಹಿಮೆ ಮತ್ತು ಪ್ರಾಮುಖ್ಯತೆಯನ್ನು ಸಾರುವ ಈ ಚಿತ್ರಕ್ಕೆ ಗೋಟೂರಿ ಅವರ ಕಥೆ ರಚಿಸಿದ್ದಾರೆ. ಖ್ಯಾತ ನಿರ್ದೇಶಕ ಸಾಯಿಪ್ರಕಾಶ್ ನಿರ್ದೇಶನದ ಚಿತ್ರಕ್ಕೆ ಗುರುಕಿರಣ್ ಸಂಗೀತ ಸಂಗೀತ ನೀಡಿದ್ದಾರೆ.
ರಾಜ್ಯದ ಗಣ್ಯಾತಿಗಣ್ಯ ಸಚಿವರು, ಸಂಸದರು ಮತ್ತು ಶಾಸಕರು ವಿಶೇಷ ಪಾತ್ರಗಳಲ್ಲಿ ನಟಿಸಿದ್ದಾರೆ. ಶ್ರುತಿ, ಜಯಂತಿ, ಅನು ಪ್ರಭಾಕರ್, ಶ್ರೀಮುರಳಿ, ರಾಮ್ ಕುಮಾರ್, ಶಿವಕುಮಾರ್ ಸೇರಿದಂತೆ ಅನೇಕ ಹಿರಿಯ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಆದಿ ಚುಂಚನಗಿರಿ ಕ್ಷೇತ್ರ ಹೇಗೆ ಸ್ಥಾಪನೆಗೊಂಡಿತು, ಯಾರು ಸ್ಥಾಪಿಸಿದರು, ಅಲ್ಲಿ ನಡೆದ ಪವಾಡಗಳೇನು ಎಂಬ ಸತ್ಯ ಕಥೆಗಳನ್ನು ಆಧಾರವಾಗಿಟ್ಟುಕೊಂಡು ಪೌರಾಣಿಕ ಮತ್ತು ಐತಿಹಾಸಿಕ ಚಿತ್ರವನ್ನು ನಿರ್ದೇಶಕ ಸಾಯಿಪ್ರಕಾಶ್ ರೂಪಿಸಿದ್ದಾರೆ. ರೆಬೆಲ್ ಸ್ಟಾರ್ ಕೈಯಾರೆ ಅಭಿನಯ ಚಕ್ರವರ್ತಿ ಬಿರುದು ಸ್ವೀಕರಿಸಿದ ಸುದೀಪ್ ಈಗ ಚಿತ್ರ ಅಂಬಿಗೆ ಸಡ್ಡುಹೊಡೆದಿರುವುದು ವಿಧಿವಿಚಿತ್ರ ಎನ್ನದೆ ವಿಧಿಯಿಲ್ಲ. (ಒನ್ ಇಂಡಿಯಾ ಕನ್ನಡ)


Click it and Unblock the Notifications











