ಅಂಬರೀಶ್ ಪುಣ್ಯಸ್ಮರಣೆ; ಸಮಾಧಿಗೆ ಪೂಜೆ ಸಲ್ಲಿಸಿದ ಸುಮಲತಾ, ಅಭಿಷೇಕ್, ದರ್ಶನ್ ಮತ್ತು ಗಣ್ಯರು
ಸ್ಯಾಂಡಲ್ ವುಡ್ ನ ರೆಬಲ್ ಸ್ಟಾರ್, ಮಂಡ್ಯದ ಗಂಡು ಅಂಬರೀಶ್ ನಿಧನ ಹೊಂದಿ ಇಂದಿಗೆ (ನವೆಂಬರ್ 24) ಎರಡು ವರ್ಷಗಳು ಕಳೆದಿವೆ. ಇವತ್ತು ಅಂಬರೀಶ್ ಅವರ 2ನೇ ವರ್ಷದ ಪುಣ್ಯಸ್ಮರಣೆ. ಇಂದಿಗೆ ಸರಿಯಾಗಿ ಎರಡು ವರ್ಷಗಳ ಹಿಂದೆ ಅಂದರೆ ನವೆಂಬರ್ 24, 2018ರಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಬಿಟ್ಟು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದರು.
Recommended Video
ಇಂದು ಅವರ ಪುಣ್ಯಸ್ಮರಣೆ ಅಂಗವಾಗಿ ಕುಟುಂಬಸ್ಥರು, ಸ್ನೇಹಿತರು ಹಾಗೂ ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್ ಸಮಾಧಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಟಿ ಮತ್ತು ಸಂಸದೆ ಸುಮಲತಾ ಅಂಬರೀಶ್, ಪುತ್ರ ಅಭಿಷೇಕ್, ನಟ ದರ್ಶನ್ ಮತ್ತು ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಅನೇಕ ಗಣ್ಯರು ಸಮಾಧಿಗೆ ಪೂಜೆ ಮಾಡಿ, ಅಂಬರೀಶ್ ಗೆ ಗೌರವ ಸಲ್ಲಿಸಿದರು. ಮುಂದೆ ಓದಿ..

ಸುಮಲತಾ ಅಂಬರೀಶ್ ಪ್ರತಿಕ್ರಿಯೆ
ಈ ಸಮಯದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ನಟಿ ಮತ್ತು ಸಂಸದೆ ಸುಮಲತಾ, ಅಂಬರೀಶ್ ಎಲ್ಲರನ್ನೂ ಕುಟುಂಬ ಸದಸ್ಯರಂತೆ ನೋಡಿಕೊಳ್ಳುತ್ತಿದ್ದರು, ಎಲ್ಲರ ಪ್ರೀತಿ ಗಳಿಸಿ, ಆ ಪ್ರೀತಿಯನ್ನು ಹಾಗೆ ಉಳಿಸಿಕೊಂಡಿದ್ದಾರೆ. ಇದಕ್ಕಿಂತ ಹೆಮ್ಮೆ ಯಾವುದು ಇಲ್ಲ. ಮಂಡ್ಯದಲ್ಲಿ ಅಂಬರೀಶ್ ಗುಡಿ ಕಟ್ಟಿರುವುದು ಅದ್ಭುತ, ಆ ಊರಿನವರು ನನ್ನಿಂದ ಯಾವದೇ ಸಹಾಯ ತೆಗೆದುಕೊಂಡಿಲ್ಲ.

ತಂದೆಯ ಬಗ್ಗೆ ಅಭಿಷೇಕ್ ಮಾತು
ಮಂಡ್ಯ ಜನರು ಅವರನ್ನು ದೇವರಂತೆ ಪೂಜೆ ಮಾಡುತ್ತಾರೆ. ಪ್ರೀತಿ ಒಂದೇ ಅವರು ಸಂಪಾದಿಸಿರುವ ಆಸ್ತಿ ಎಂದು ಹೇಳಿದ್ದಾರೆ. ಇನ್ನೂ ಅಭಿಷೇಕ್ ಮಾತನಾಡಿ, 'ಹಲವಾರು ಕಾರ್ಯಕ್ರಮ ನಡೆಯುತ್ತಿದೆ. ಅಪ್ಪ ಪ್ರತಿ ದಿನ ನೆನಪಾಗುತ್ತಾರೆ. ಅವರ ಸಾಧನೆ ಬಗ್ಗೆ ಮಾತನಾಡೋಗೆ ಚಿಕ್ಕವನು, ಅವರ ಮಗನಾಗಿ ಹುಟ್ಟಿದ್ದು ನನ್ನ ಪುಣ್ಯ' ಎಂದು ಹೇಳಿದ್ದಾರೆ.

ಅಂಬರೀಶ್ ಬಗ್ಗೆ ದರ್ಶನ್ ಹೇಳಿದ್ದೇನು?
ಇದೆ ನಟ ದರ್ಶನ್ ಸಹ ಪ್ರೀತಿಯ ಅಂಬಿ ಅಪ್ಪಾಜಿ ಬಗ್ಗೆ ಮಾತನಾಡಿದ್ದಾರೆ. 'ಅವರು ದಿನದ 24 ಗಂಟೆ ನಮ್ಮ ಜೊತೆ ಇರುತ್ತಾರೆ. ಈ ಸಮಾಧಿ ದೇವಸ್ಥಾನ ಇದ್ದ ಹಾಗೆ. ನಾನು ಈ ಕಡೆ ಬಂದಾಗಲೆಲ್ಲಾ ಸಮಾಧಿಗೆ ಬಂದು ಹೋಗುತ್ತೇನೆ. ನಾನು ದೇವರಂತೆ ಪೂಜೆ ಮಾಡುತ್ತೀನಿ. ಅವರು ಬೈಯುವುದನ್ನು ನಾನು ಯಾವಾಗಲು ಮಿಸ್ ಮಾಡಿಕೊಳ್ಳುತ್ತೀನಿ' ಎಂದು ಹೇಳಿದ್ದಾರೆ.

ಸೀನಿಯರ್ ಅಂಬಿ ಬಗ್ಗೆ ದರ್ಶನ್ ಟ್ವೀಟ್
ಇನ್ನೂ ಅಂಬರೀಶ್ ಬಗ್ಗೆ ಟ್ವೀಟ್ ಮಾಡಿರುವ ದರ್ಶನ್, 'ನನ್ನ ಪ್ರೀತಿಯ ಸೀನಿಯರ್ ಅಂಬಿ ಅಪ್ಪಾಜಿ ಇಂದಿಗೆ ದೈಹಿಕವಾಗಿ ಅಗಲಿ 2 ಸಂವತ್ಸರಗಳು ಕಳೆದಿವೆ. ಆದರೆ ನಮ್ಮೆಲ್ಲರ ಮನಗಳಲ್ಲಿ ಸದಾ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಅವರ ನೇರನುಡಿಯ ವ್ಯಕ್ತಿತ್ವ, ಮಾಡಿರುವ ಸಹೃದಯಿ ಕಾರ್ಯಗಳು ಸದಾ ಕನ್ನಡಿಗರ ಮನಸ್ಸಲ್ಲಿ ಜೀವಂತವಾಗಿರುತ್ತವೆ.' ಎಂದು ಬರೆದುಕೊಂಡಿದ್ದಾರೆ.


Click it and Unblock the Notifications











