ಅಂಬಿ ಸಮಾಧಿ ಬಗ್ಗೆ ಮಾತನಾಡಿದ ಮುನಿರತ್ನಗೆ ಸುಮಲತಾ ತಿರುಗೇಟು
Recommended Video

''ಅಂಬರೀಶ್ ನಿಧನರಾದಾಗ ಅಂತ್ಯ ಸಂಸ್ಕಾರ ಮಾಡಲು ನಿಖಿಲ್ ಕುಮಾರ್ ಜಾಗ ಗುರುತು ಮಾಡಿದ್ದರು'' ಎಂದು ಹೇಳಿಕೆ ನೀಡಿದ್ದ ನಿರ್ಮಾಪಕ ಮುನಿರತ್ನ ಈಗ ಅಂಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇದೀಗ ಈ ವಿಷ್ಯದ ಬಗ್ಗೆ ಅಂಬರೀಶ್ ಪತ್ನಿ ಸುಮಲತಾ ಕೂಡ ಪ್ರತಿಕ್ರಿಯಿಸಿದ್ದು, ಮುನಿರತ್ನ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. 'ಸಾವಿನಲ್ಲೂ ರಾಜಕೀಯ ಮಾಡುವ ಇಂತಹ ಬೆಳವಣಿಗೆ ಚೆನ್ನಾಗಿಲ್ಲ' ಎಂದು ಆಕ್ರೋಶಗೊಂಡಿದ್ದಾರೆ.
'ಅಂಬರೀಶ್ ಅವರಿಂದ ಮುನಿರತ್ನ ಯಾವ ರೀತಿ ಲಾಭ ಪಡೆದುಕೊಂಡಿದ್ದಾರೆ ಎಂಬುದನ್ನ ನೆನಪಿಸಿಕೊಳ್ಳಲಿ' ಎಂದು ಹೇಳುವ ಮೂಲಕ ಕಾಂಗ್ರೆಸ್ ಶಾಸಕ, ನಿರ್ಮಾಪಕ ಮುನಿರತ್ನಗೆ ತಿರುಗೇಟು ನೀಡಿದ್ದಾರೆ. ಅಷ್ಟಕ್ಕೂ, ಕುರುಕ್ಷೇತ್ರ ನಿರ್ಮಾಪಕನ ಬಗ್ಗೆ ಸುಮಲತಾ ಹೇಳಿದ್ದೇನು? ಮುಂದೆ ಓದಿ....

ಮುನಿರತ್ನಗೆ ನೈತಿಕ ಹಕ್ಕಿಲ್ಲ
ಅಂಬರೀಶ್ ಅಂತ್ಯ ಸಂಸ್ಕಾರ ಬಗ್ಗೆ ಹೇಳಿಕೆ ನೀಡಿದ್ದ ಮುನಿರತ್ನಗೆ ಇಲ್ಲಿ ಬಂದು ಮಾತನಾಡುವ ನೈತಿಕ ಹಕ್ಕಿಲ್ಲ. ಸುಳ್ಳು ರಾಜಕಾರಣ ಮಾಡ್ತೀರಾ, ಸ್ವಾರ್ಥದ ರಾಜಕಾರಣ ಮಾಡ್ತೀರಾ, ಹಣ-ಭ್ರಷ್ಟಾಚಾರದ ರಾಜಕಾರಣ ಮಾಡ್ತೀರಾ, ಈಗ ಸಾವಿನಲ್ಲೂ ರಾಜಕಾರಣ ಮಾಡ್ತಿದ್ದೀರಾ ಇದು ಹೇಸಿಗೆ. ಇಂತಹ ಮಾತುಗಳನ್ನ ಯಾರೇ ಮಾತನಾಡಿದರೂ ಅದನ್ನ ತುಂಬಾ ತೀವ್ರವಾಗಿ ಖಂಡಿಸುತ್ತೇನೆ. ಜನರು ಇದನ್ನ ಒಪ್ಪುವುದಿಲ್ಲ'' ಎಂದು ಕಿಡಿಕಾರಿದ್ದಾರೆ.

ಯಾರೇ ಮಾತಾಡಿದ್ರು ಖಂಡಿಸುತ್ತೇನೆ
ಮಂಡ್ಯ ಪ್ರಚಾರದಲ್ಲಿ ಪದೇ ಪದೇ ಅಂಬರೀಶ್ ಅವರ ಹೆಸರು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸುಮಲತಾ ''ನಿಮ್ಮ ಸಾಧನೆ, ಮಂಡ್ಯದಲ್ಲಿ ನೀವು ಮಾಡಿದ ಅಭಿವೃದ್ದಿ ವಿಷ್ಯಗಳನ್ನ ಜನರ ಮುಂದೆ ತಂದು ಪ್ರಚಾರ ಮಾಡಿ, ನೀವ್ಯಾಕೆ ಅಂಬರೀಶ್ ಹೆಸರು ದುರ್ಬಳಕೆ ಮಾಡಿಕೊಳ್ತೀರಾ'' ಎಂದು ಪ್ರಶ್ನಿಸಿದ್ದಾರೆ.

ಅಂದು ರಾಜಕೀಯ ಲಾಭಕ್ಕಾಗಿ ಮಾಡಿದ್ರಾ?
''ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳುವುದಕ್ಕೆ ಅಥವಾ ರಾಜಕೀಯ ಲಾಭ ಮಾಡಿಕೊಳ್ಳುವುದಕ್ಕೆ ಅಂದು ನೀವು ಅಂತ್ಯಕ್ರಿಯೆ ಮಾಡಿದ್ರಾ ಎಂದು ನಾನು ತಿಳಿದುಕೊಳ್ಳಬೇಕಾ? ಅದಕ್ಕೆ ನಾನು ಕೃತಜ್ಞಗಳನ್ನ ತಿಳಿಸಿದ್ದೇನೆ. ಸಾರ್ವಜನಿಕವಾಗಿ ಎಲ್ಲರ ಮುಂದೆಯೇ ಧನ್ಯವಾದ ತಿಳಿಸಿದ್ದೇನೆ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅಂಬರೀಶ್ ಅವರಿಂದ ಮುನಿರತ್ನಗೆ ಲಾಭ.?
ಅಂಬರೀಶ್ ಅವರನ್ನ ಮುನಿರತ್ನ ಅವರು ನೆನಪಿಸಿಕೊಳ್ಳಬೇಕು. ಅವರಿಂದ ಯಾವ ರೀತಿ ಲಾಭಗಳನ್ನ ಪಡೆದುಕೊಂಡಿದ್ದಾರೆ ಎಂದು ಯೋಚಿಸಲಿ. ಮುನಿರತ್ನಗೆ ಅಂಬರೀಶ್ ಏನಾಗಿದ್ರು, ಯಾವ ರೀತಿ ಸಹಾಯ ಮಾಡಿದ್ರು'' ಎಂದು ಸುಮಲತಾ ತಿರುಗೇಟು ನೀಡಿದ್ದಾರೆ.


Click it and Unblock the Notifications











