ಕಿಚ್ಚ ಸುದೀಪ್ Vs ಅಜಯ್ ದೇವಗನ್ ಟ್ವೀಟ್ ವಾರ್ ಬಗ್ಗೆ ಸುಮಲತಾ ಪ್ರತಿಕ್ರಿಯೆ
ಕಳೆದ ಎರಡು ದಿನಗಳಿಂದ ಕಿಚ್ಚ ಸುದೀಪ್ ಹಾಗೂ ಅಜಯ್ ದೇವಗನ್ ನಡುವಿನ ಟ್ವೀಟ್ ವಾರ್ ಬಗ್ಗೆ ಚರ್ಚೆಯಾಗುತ್ತಿದೆ. ಉಪ್ಪಿ ಸಿನಿಮಾದ ಟೈಟಲ್ ಲಾಂಚ್ ವೇಳೆ ಸುದೀಪ್ ಹಿಂದಿ ರಾಷ್ಟ್ರಭಾಷೆಯಾಗಿ ಉಳಿದಿಲ್ಲವೆಂದು ಹೇಳಿದ್ದರು. ಇದಕ್ಕೆ ಅಜಯ್ ದೇವಗನ್ ಕೌಂಟರ್ ಕೊಟ್ಟು ಟ್ವೀಟ್ ಮಾಡಿದ್ದರು. ಇದು ಸುದೀಪ್ ಹಾಗೂ ಅಜಯ್ ದೇವಗನ್ ನಡುವೆ ಟ್ವೀಟ್ ಯುದ್ಧಕ್ಕೆ ಕಾರಣವಾಗಿತ್ತು.
ಈ ವೇಳೆ ಕಿಚ್ಚ ಸುದೀಪ್ ಹೇಳಿಕೆಯನ್ನು ಬೆಂಬಲಿಸಿ ಕನ್ನಡದ ನಟ-ನಟಿಯರು ಹಾಗೂ ರಾಜಕೀಯ ಮುಖಂಡರು ಅಖಾಡಕ್ಕೆ ಇಳಿದಿದ್ದರು. ಮಾಜಿ ಸಿ ಎಂ ಸಿದ್ಧರಾಮಯ್ಯ, ಹೆಚ್ ಡಿ ಕುಮಾರಸ್ವಾಮಿ, ಮೋಹಕತಾರೆ ರಮ್ಯಾ, ನೀನಾಸಂ ಸತೀಶ್, ಶ್ರೀನಗರ ಕಿಟ್ಟಿ ಸೇರಿದಂತೆ ಹಲವು ಗಣ್ಯರು ಕಿಚ್ಚನ ಪರ ಬ್ಯಾಟ್ ಬೀಸಿದ್ದರು. ಈಗ ಮಂಡ್ಯ ಸಂಸದೆ ಸುಮಲತಾ ಕೂಡ ಈ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಅವರೇ ವಿವರಣೆಯನ್ನು ಕೊಟ್ಟಿದ್ದಾರೆ
'ಹಿಂದಿ ರಾಷ್ಟ್ರ ಭಾಷೆಯಾಗಿ ಉಳಿದಿಲ್ಲ' ಎನ್ನುವ ಕಿಚ್ಚ ಸುದೀಪ್ ಹೇಳಿಕೆ ಬಗ್ಗೆ ಸುಮಲತಾ ಪ್ರತಿಕ್ರಿಯಿಸಿದ್ದು, ಈ ಹಿಂದೆನೇ ಪಾರ್ಟಿಮೆಂಟ್ ಹಿಂದಿ ರಾಷ್ಟ್ರ ಭಾಷೆ ಅನ್ನುವ ವಿಚಾರದ ಬಗ್ಗೆ ಪ್ರಸ್ತಾಪ ಮಾಡಿದ್ದೆ. ಈಗ ಇಬ್ಬರ ನಡುವೆ ಟ್ವೀಟ್ಸ್ ನಡೆದಿದ್ದು, ಅದಕ್ಕೆ ಅವರೇ ವಿವರಣೆಯನ್ನು ಕೊಟ್ಟಿಕೊಂಡಿದ್ದಾರೆ ಎಂದಿದ್ದಾರೆ. "ನಮ್ಮ ಅಭಿಪ್ರಾಯವೇನು ಅನ್ನುವುದನ್ನು ನೀವು ನನ್ನ ಪಾರ್ಲಿಮೆಂಟ್ ಭಾಷಣವನ್ನು ನೀವು ಕೇಳಿದ್ದರೆ, ಇದನ್ನು ಪ್ರಶ್ನಿಸುವ ಅಗತ್ಯವೇ ಇರುತ್ತಿರಲಿಲ್ಲ. ಈ ಕುರಿತು ನಾನೇ ಮಾತನಾಡಿದ್ದೇನೆ. ಬಾಲಿವುಡ್ Vs ದಕ್ಷಿಣ ಅನ್ನುವಂತಹದ್ದು ಏನೂ ಆಗಿಲ್ಲ. ಅದನ್ನು ಕೇಳುವಂತಹ ವಿಷಯವೂ ಇದಲ್ಲ ಅಂತ ಅಂದ್ಕೊಂಡಿದ್ದೀನಿ. ಇದರ ಮಧ್ಯೆ ಒಂದು ಟ್ವೀಟ್ಸ್ ಏನೋ ನಡೆದಿದೆ. ಅದಕ್ಕೆ ಅವರೇ ವಿವರಣೆಯನ್ನೂ ಕೊಟ್ಟುಕೊಂಡಿದ್ದಾರೆ." ಎಂದು ಸುಮಲತಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ರಾಷ್ಟ್ರ ಭಾಷೆ ಅನ್ನುವ ಪ್ರಶ್ನೆನೇ ಬರಲ್ಲ
"ಈಗಿನ ಸಮಾಜದಲ್ಲಿ ಈಗಾಗಲೇ ಇಷ್ಟೊಂದು ಗಲಭೆ ಗೊಂದಲದ ಮಧ್ಯದಲ್ಲಿ ಇದೊಂದು ಹೊಸ ವಿವಾದವನ್ನು ಸೃಷ್ಟಿಸುವುದು ಬೇಡ ಅಂದುಕೊಂಡಿದ್ದೇನೆ. ರಾಷ್ಟ್ರ ಭಾಷೆ ಅನ್ನುವ ಪ್ರಶ್ನೆನೇ ಬರಲ್ಲ ನನ್ನ ಪ್ರಕಾರ. ಉತ್ತರ ಭಾರತದಲ್ಲಿ ಹಿಂದಿಗೆ ಪ್ರಾಮುಖ್ಯತೆ ಇರಬಹುದು. ನಮ್ಮ ರಾಜ್ಯದಲ್ಲಿ ನಮ್ಮ ಭಾಷೆಗೆ, ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದರೆ, ಯಾರೂ ಸುಮ್ಮನಿರುವುದಿಲ್ಲ. ಎಲ್ಲರಿಗೂ ಹೆಮ್ಮೆ, ಸ್ವಾಭಿಮಾನ ಅನ್ನುವುದು ಇರೋದಿಲ್ಲ." ಎಂದು ಸುಮಲತಾ ಪ್ರತಿಕ್ರಿಯಿಸಿದ್ದಾರೆ.
Recommended Video


ಭಾಷೆಗೆ ಧಕ್ಕೆ ಆದರೆ ಯಾರೂ ಸುಮ್ಮನಿರಲ್ಲ
"ಕನ್ನಡದಕ್ಕೆ ಧ್ವಜ ಅನ್ನುವುದು ಇದೆ. ಕನ್ನಡಕ್ಕೆ ಕ್ಲಾಸಿಕಲ್ ಲ್ಯಾಂಗ್ವೇಜ್ ಅನ್ನೋ ಸ್ಟೇಟಸ್ ಇದೆ. ಕನ್ನಡಿಗರು ನಾವು ಎಲ್ಲಾ ಭಾಷೆಯನ್ನೂ ಗೌರವಿಸುತ್ತೇವೆ. ನಮ್ಮ ಭಾಷೆಗೆ ಧಕ್ಕೆಯಾದರೆ ಯಾರೂ ಸುಮ್ಮನಿರುವುದಿಲ್ಲ. ಈ ವಿಷಯವನ್ನು ನಾನು ಪಾರ್ಟಿಮೆಂಟ್ನಲ್ಲಿ ಎರಡು ವರ್ಷಗಳ ಹಿಂದೆನೇ ಮಾತಾಡಿದ್ದೇನೆ." ಎಂದು ಸುಮಲತಾ ಪ್ರತಿಕ್ರಿಯಿಸಿದ್ದಾರೆ.

ಮುಂದುವರೆಸಿದರೆ ಪ್ರಯೋಜನವಿಲ್ಲ
ಕಿಚ್ಚ ಸುದೀಪ್ ಹಾಗೂ ಅಜಯ್ ದೇವಗನ್ ಇಬ್ಬರ ನಡುವಿನ ವಿವಾದವನ್ನು ಇಲ್ಲಿಗೆ ಬಿಡಬೇಕು. " ಈ ವಿವಾದಕ್ಕೆ ಅವರೇ ಅಂತ್ಯವನ್ನೂ ಹಾಡಿದ್ದಾರೆ. ಇದನ್ನು ಮುಂದುವರೆಸಿಕೊಂಡು ಹೋದರೆ ಪ್ರಯೋಜನವಿಲ್ಲ." ಎಂದು ಸುಮಲತಾ ಹೇಳಿದ್ದಾರೆ.


Click it and Unblock the Notifications











