ಕೋಟಿ ರಾಮು ನಿರ್ಮಿಸಿದ ಚಿತ್ರಗಳಲ್ಲಿ ಗೆದ್ದದೆಷ್ಟು
ಕನ್ನಡ ಚಿತ್ರಗಳಿಗೆ ಅದ್ದೂರಿತನದ ಟಚ್ ನೀಡಿದವರಲ್ಲಿ ನಿರ್ಮಾಪಕ ರಾಮು ಕೂಡ ಒಬ್ಬರು. ಅದ್ದೂರಿ ಬಜೆಟಿನ ಚಿತ್ರಗಳಲ್ಲಿ ಲೆಕ್ಕವಿಲ್ಲದಷ್ಟು ಟಾಟಾ ಸುಮೋಗಳು ಉಡೀಸ್ ಆಗುತ್ತಿದ್ದದ್ದು ರಾಮು ಚಿತ್ರಗಳಲ್ಲಿ. ಅದಕ್ಕಾಗಿಯೇ ಕನ್ನಡ ಚಿತ್ರರಂಗದ ಪಾಲಿಗೆ ರಾಮು ಯಾವಾಗಲೂ 'ಕೋಟಿ ರಾಮು' ನಿರ್ಮಾಪಕರು.
ಡಿಸ್ಟ್ರಿಬ್ಯೂಟರ್ ಆಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ರಾಮು ಇದುವರೆಗೆ ಸುಮಾರು 30ಕ್ಕೂ ಹೆಚ್ಚು ಚಿತ್ರಗಳನ್ನು ತನ್ನ ರಾಮು ಎಂಟರ್ಪ್ರೈಸಸ್ ಬ್ಯಾನರಡಿಯಲಿ ನಿರ್ಮಿಸಿದ್ದಾರೆ. ಸಾಹಸ ಪ್ರಧಾನ ಚಿತ್ರಗಳಿಗೆ ಹೆಚ್ಚಿನ ಒತ್ತು ನೀಡುವ ರಾಮು ಬಹಳಷ್ಟು ಸೂಪರ್ ಹಿಟ್ ಚಿತ್ರಗಳನ್ನು ತನ್ನ ಬ್ಯಾನರಡಿಯಲಿ ನೀಡಿದ್ದಾರೆ.
ಇದುವರೆಗೆ ವಿವಿಧ ಭಾಷೆಯ 150ಕ್ಕೂ ಹೆಚ್ಚು ಚಿತ್ರಗಳಿಗೆ ರಾಮು ಹಂಚಿಕೆದಾರರಾಗಿದ್ದರು. ಅದ್ದೂರಿ ಬಜೆಟಿನ ಓಂ ಪ್ರಕಾಶ್ ರಾವ್ ನಿರ್ದೇಶನದ, ರಾಮು ಪತ್ನಿ ಮಾಲಾಶ್ರೀ ಮುಖ್ಯ ಭೂಮಿಕೆಯಲ್ಲಿರುವ ಎಲೆಕ್ಷನ್ ಚಿತ್ರ ಹೋದವಾರ ತೆರೆಕಾಣ ಬೇಕಿತ್ತು. ಆದರೆ ಕಾರಣಾಂತರದಿಂದ ತೆರೆ ಕಾಣಲಿಲ್ಲ.
ಅವರು ನಿರ್ಮಿಸಿದ್ದ ಮುತ್ತಿನಂಥ ಹೆಂಡತಿ, ಹಲೋ ಸಿಸ್ಟರ್, ಲಾ ಎಂಡ್ ಆರ್ಡರ್, ಹಾಲಿವುಡ್, ನಂಜುಂಡಿ, ಪ್ರೀತಿಗಾಗಿ, ಮಸ್ತಿ, ಗಂಡೆದೆ, ಗುಲಾಮ, ರಜನಿ, ಕಂಠೀರವ ಮುಂತಾದ ಚಿತ್ರಗಳು ನಿರೀಕ್ಷೀತ ಮಟ್ಟದಲ್ಲಿ ಯಶಸ್ಸನ್ನು ಗಳಿಸಲಿಲ್ಲ.
ರಾಮು ಎಂಟರ್ಪ್ರೈಸಸ್ ಬ್ಯಾನರಡಿಯಲಿ ಬಂದ ಆಯ್ದ ಕೆಲವು ಸೂಪರ್ ಹಿಟ್ ಚಿತ್ರಗಳ ಪಟ್ಟಿ

ಗೋಲಿಬಾರ್
ಶಿವಮಣಿ ನಿರ್ದೇಶನದ ಈ ಚಿತ್ರ 1993ರಲ್ಲಿ ಬಿಡುಗಡೆಯಾಗಿತ್ತು. ದೇವರಾಜ್, ಆರುಂದತಿ ನಾಗ್, ದೊಡ್ಡಣ್ಣ ಪ್ರಮುಖ ಭೂಮಿಕೆಯಲ್ಲಿದ್ದ ಈ ಚಿತ್ರ ಭಾರೀ ಯಶಸ್ಸು ಕಂಡಿತ್ತು. ಚಿತ್ರಕ್ಕೆ ಹಂಸಲೇಖ ಅವರ ಸಂಗೀತವಿತ್ತು.

ಲಾಕಪ್ ಡೆತ್
1994ರಲ್ಲಿ ರಾಮು ಬ್ಯಾನರಿನಲ್ಲಿ ಮೂಡಿ ಬಂದ ಮತ್ತೊಂದು ಸೂಪರ್ ಹಿಟ್ ಚಿತ್ರ. ದೇವರಾಜ್, ನಿರೋಶ, ಸಾಯಿಕುಮಾರ್, ಜಯಚಿತ್ರ ಪ್ರಮುಖ ತಾರಾಗಣದಲ್ಲಿದ್ದ ಚಿತ್ರವನ್ನು ಓಂ ಪ್ರಕಾಶ್ ರಾವ್ ನಿರ್ದೇಶಿಸಿದ್ದರು.

ಸರ್ಕಲ್ ಇನ್ ಸ್ಪೆಕ್ಟರ್
1996ರಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ಮೋಹನ್ ಗಾಂಧಿ ನಿರ್ದೇಶಿಸಿದ್ದರು. ದೇವರಾಜ್, ಮಾಲಾಶ್ರೀ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದರು. ಚಿತ್ರದ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರಿಗೆ ಈ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಲಭಿಸಿತ್ತು.

ಸಿಂಹದಮರಿ
1997ರಲ್ಲಿ ಬಿಡುಗಡೆಯಾದ ಮತ್ತೊಂದು ಬ್ಲಾಕ್ ಬಸ್ಟರ್ ಚಿತ್ರ. ಶಿವರಾಜ್ ಕುಮಾರ್, ಸಿಮ್ರನ್ ಪ್ರಮುಖ ಭೂಮಿಕೆಯಲ್ಲಿದ್ದ ಚಿತ್ರವನ್ನು ಓಂ ಪ್ರಕಾಶ್ ರಾವ್ ನಿರ್ದೇಶಿಸಿದ್ದರು. ಹಂಸಲೇಖ ಸಂಗೀತ ಚಿತ್ರಕ್ಕಿತ್ತು.

ಎಕೆ 47
ರಾಮು ಅವರ ಫೆವರೇಟ್ ನಿರ್ದೇಶಕ ಓಂ ಪ್ರಕಾಶ್ ರಾವ್ ನಿರ್ದೇಶನದ ಮತ್ತೊಂದು ಸೂಪರ್ ಹಿಟ್ ಚಿತ್ರ. ಶಿವರಾಜ್ ಕುಮಾರ್, ಓಂ ಪುರಿ, ಚಾಂದಿನಿ, ಆಶಿಸ್ ವಿದ್ಯಾರ್ಥಿ ಮುಖ್ಯ ತಾರಾಗಣದಲ್ಲಿರುವ ಈ ಚಿತ್ರಕ್ಕೆ ಹಂಸಲೇಖ ಸಂಗೀತ ನೀಡಿದ್ದರು.

ಭಾವ ಬಾಮೈದ
2001ರಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ಕಿಶೋರ್ ಸರ್ಜಾ ನಿರ್ದೇಶಿಸಿದ್ದರು. ಶಿವರಾಜ್ ಕುಮಾರ್, ರಂಭಾ ಪ್ರಮುಖ ತಾರಾಗಣದಲ್ಲಿರುವ ಚಿತ್ರಕ್ಕೆ ಹಂಸಲೇಖ ಸಂಗೀತ ನೀಡಿದ್ದರು.

ಕಿಚ್ಚ
ಅರುಣ್ ಪ್ರಸಾದ್ ನಿರ್ದೇಶನದ ಈ ಚಿತ್ರದಲ್ಲಿ ಸುದೀಪ್, ಶ್ವೇತಾ ಮುಖ್ಯ ತಾರಾಗಣದಲ್ಲಿದ್ದರು.

ಮಲ್ಲ
ರವಿಚಂದ್ರನ್, ಪ್ರಿಯಾಂಕ, ಮೋಹನ್, ವಿಜಯಲಕ್ಷ್ಮಿ, ಉಮಾಶ್ರೀ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ. ರವಿಚಂದ್ರನ್ ಖುದ್ದು ನಿರ್ದೇಶಿಸಿದ್ದ ಈ ಚಿತ್ರಕ್ಕೆ ಸಂಗೀತ ಕೂಡಾ ಅವರೇ ನೀಡಿದ್ದರು. ಚಿತ್ರ 2004ರಲ್ಲಿ ಬಿಡುಗಡೆಯಾಗಿತ್ತು.

ಕಲಾಸಿಪಾಳ್ಯ
ಓಂ ಪ್ರಕಾಶ್ ರಾವ್ ನಿರ್ದೇಶನದ ಮತ್ತೊಂದು ಸೂಪರ್ ಹಿಟ್ ಚಿತ್ರ. ದರ್ಶನ್, ರಕ್ಷಿತಾ, ಅವಿನಾಶ್, ಸಾಧು ಕೋಕಿಲ, ಚಿತ್ರಾ ಶೆಣೈ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರಕ್ಕೆ ವೆಂಕಟ್ ನಾರಾಯಣ್, ಸಾಧು ಕೋಕಿಲ ಸಂಗೀತ ನೀಡಿದ್ದರು. ಚಿತ್ರ 2004ರಲ್ಲಿ ಬಿಡುಗಡೆಯಾಗಿತ್ತು.

ಆಟೋ ಶಂಕರ್
ಉಪೇಂದ್ರ, ಶಿಲ್ಪಾ ಶೆಟ್ಟಿ, ರಾಧಿಕಾ, ರಂಗಾಯಣ ರಘು, ಸುಧಾರಾಣಿ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರವನ್ನು ಡಿ ರಾಜೇಂದ್ರ ಬಾಬು ನಿರ್ದೇಶಿಸಿದ್ದರು. ಗುರುಕಿರಣ್ ಸಂಗೀತವಿರುವ ಈ ಚಿತ್ರ 2005ರಲ್ಲಿ ಬಿಡುಗಡೆಯಾಗಿತ್ತು.

ಗೂಳಿ
ಪಿ ಎನ್ ಸತ್ಯ ನಿರ್ದೇಶನದ ಈ ಚಿತ್ರ 2008ರಲ್ಲಿ ತೆರೆಗೆ ಬಂದಿತ್ತು. ಸುದೀಪ್, ಮಮತ ಮೋಹನದಾಸ್, ಲಕ್ಷಣ್, ಕಿಶೋರ್ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರಕ್ಕೆ ಅನೂಪ್ ಸೀಳನ್ ಸಂಗೀತ ನೀಡಿದ್ದರು.

ಕನ್ನಡದ ಕಿರಣ್ ಬೇಡಿ
ಓಂ ಪ್ರಕಾಶ್ ರಾವ್ ನಿರ್ದೇಶನದ ಈ ಚಿತ್ರದಲ್ಲಿ ಮಾಲಶ್ರೀ, ಶ್ರೀನಿವಾಸ ಮೂರ್ತಿ, ಆಶಿಸ್ ವಿದ್ಯಾರ್ಥಿ, ರಂಗಾಯಣ ರಘು, ಬುಲೆಟ್ ಪ್ರಕಾಶ್ ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಹಂಸಲೇಖ ಅವರ ಸಂಗೀತವಿದೆ.


Click it and Unblock the Notifications











