'ತಾಜ್ ಮಹಲ್-2' ಟ್ರೈಲರ್: ಸೆಪ್ಟೆಂಬರ್ 17ಕ್ಕೆ 'ಚಡ್ಡಿದೋಸ್ತ್' ರಿಲೀಸ್
ಶ್ರೀ ಗಂಗಾಂಬಿಕೆ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ದೇವರಾಜ್ ಕುಮಾರ್ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ "ತಾಜ್ ಮಹಲ್ 2" ಚಿತ್ರದ ಟ್ರೇಲರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ.
ದೇವರಾಜ್ ಕುಮಾರ್ ಈ ಹಿಂದೆ 'ಡೇಂಜರ್ ಜೋನ್', 'ನಿಶ್ಯಬ್ದ-2' ಹಾಗೂ 'ಅನುಷ್ಕಾ' ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ವಿಭಿನ್ನ ಕಥಾಹಂದರದ ಈ ಚಿತ್ರಕ್ಕೆ ಬೆಂಗಳೂರು, ಸಕಲೇಶಪುರ, ಗಗನಚುಕ್ಕಿ, ಬರಚುಕ್ಕಿ ಮುಂತಾದ ಕಡೆ 65 ದಿನಗಳ ಚಿತ್ರೀಕರಣ ನಡೆದಿದೆ. ದೇವರಾಜ್ ಕುಮಾರ್ ಅವರಿಗೆ ನಾಯಕಿಯಾಗಿ ಸಮೃದ್ಧಿ ಶುಕ್ಲ ಅಭಿನಯಿಸಿದ್ದಾರೆ. ಕಥೆ, ಚಿತ್ರಕಥೆಯನ್ನು ನಿರ್ದೇಶಕರೇ ಬರೆದಿದ್ದಾರೆ.

ಮನವರ್ಷಿ ನವಲಗುಂದ ಹಾಡುಗಳನ್ನು ಬರೆದಿದ್ದು, ವಿಕ್ರಂ ಸೆಲ್ವ ಸಂಗೀತ ನೀಡಿದ್ದಾರೆ. ವೀನಸ್ ಮೂರ್ತಿ ಛಾಯಾಗ್ರಹಣ, ವಿಜಯ್ ಸಂಕಲನ ಹಾಗೂ ಬಿ.ಧನಂಜಯ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ಸೆಪ್ಟೆಂಬರ್ 17 ರಂದು 'ಚಡ್ಡಿದೋಸ್ತ್' ಬಿಡುಗಡೆ
'ರೆಡ್ ಅಂಡ್ ವೈಟ್' ಖ್ಯಾತಿಯ ಸೆವೆನ್ ರಾಜ್ ನಿರ್ಮಾಣದಲ್ಲಿ ಆಸ್ಕರ್ ಕೃಷ್ಣ ನಿರ್ದೇಶಿಸಿ ಮೊದಲ ಬಾರಿಗೆ ನಾಯಕ ನಟರಾಗಿ ಅಭಿನಯಿಸಿರುವ 'ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ' ಚಿತ್ರವು ಇದೇ ಸೆಪ್ಟೆಂಬರ್17 ರಂದು ಕರ್ನಾಟಕದಾದ್ಯಂತ ತೆರೆ ಕಾಣುತ್ತಿದೆ. ಕೊರೊನಾ ಎರಡನೇ ಅಲೆಯ ನಂತರ ಬಿಡುಗಡೆಯಾಗುತ್ತಿರುವ ಬಹು ನಿರೀಕ್ಷಿತ ಈ ಚಿತ್ರ ಜನರನ್ನು ಮತ್ತೆ ಚಿತ್ರಮಂದಿರಕ್ಕೆ ಬರಮಾಡಿಕೊಳ್ಳುವುದರಲ್ಲಿ ಯಶಸ್ವಿಯಾಗಲಿದೆ ಎಂಬುದು ಚಿತ್ರತಂಡದ ನಂಬಿಕೆ.

ಇಬ್ಬರು ಸ್ನೇಹಿತರ ನಡುವೆ ಪ್ರವೇಶಿಸುವ ಒಬ್ಬ ಚೆಲುವೆ, ಮತ್ತೆ ಆ ಮೂವರ ಸುತ್ತ ಸುತ್ತಿಕೊಳ್ಳುವ ಸಾಮಾಜಿಕ ವ್ಯವಸ್ಥೆಯ ಹಲವು ರೂಪಗಳು, ಇವುಗಳ ನಡುವೆ ಸಿಲುಕಿ ಹಾಕಿಕೊಂಡ ಸ್ನೇಹ, ಪ್ರೀತಿ ಮತ್ತಿತರ ಭಾವನಾತ್ಮಕ ಸಂಬಂಧಗಳು, ಹೀಗೆ ಹಲವು ಮಜಲುಗಳಲ್ಲಿ ತೆರೆದುಕೊಂಡು ಹೋಗುವ ಈ ಚಿತ್ರದ ಕಥೆಗೆ ಲೋಕೇಂದ್ರ ಸೂರ್ಯ ಚಿತ್ರಕಥೆ ಹಾಗೂ ಸಂಭಾಷಣೆ ಬರೆಯುವುದರ ಜೊತೆಗೆ ಬಹು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇಬ್ಬರು ಸ್ನೇಹಿತರ ನಡುವೆ ಬರುವ ಹುಡುಗಿಯ ಪಾತ್ರದಲ್ಲಿ ಮಲಯಾಳಿ ನಟಿ ಗೌರಿ ನಾಯರ್ ಅಭಿನಯಿಸಿದ್ದಾರೆ.
ಚಿತ್ರದ ಇತರ ಪಾತ್ರಗಳಲ್ಲಿ ಸಿ.ವಿ.ಜಿ, ಗಜರಾಜ್, ಪ್ರತಾಪ್, ಸತೀಶ್ ಗೌಡ, ರಾಜು ನಾಯಕ್, ವರ್ಧನ್ ಬಾಲು, ನವೀನ್ ಮಧುಗಿರಿ, ಮಾಸ್ಟರ್ ರಾಕಿನ್, ಮಹಾಲಕ್ಷ್ಮಿ, ಡಾ ಪದ್ಮಾಕ್ಷಿ, ಭಾನು, ಆಸಿಯಾ ಷರೀಫ್, ಮೈಸೂರು ಶೋಭ ಮತ್ತಿತರರು ನಟಿಸಿದ್ದಾರೆ. ಹರ್ಷಿತ ಕಲ್ಲಿಂಗಲ್ ಎಂಬುವ ಮಾದಕ ಚೆಲುವೆ ವಿಶೇಷ ಹಾಡೊಂದಕ್ಕೆ ನರ್ತಿಸಿದ್ದಾರೆ.
ತಾಂತ್ರಿಕ ವಿಭಾಗದಲ್ಲಿ ಅನಂತ್ ಆರ್ಯನ್ ಸಂಗೀತ, ಗಗನ್ ಕುಮಾರ್ ಛಾಯಾಗ್ರಹಣ, ಮರಿಸ್ವಾಮಿ ಸಂಕಲನ, ವೈಲೆಂಟ್ ವೇಲು ಸಾಹಸ, ಅಕುಲ್ ನೃತ್ಯ, ಶ್ರೀಧರ್ ಸಿಯಾ, ಕೃಷ್ಣಕುಮಾರ್ ಮತ್ತು ಸತೀಶ್ ಕ್ಯಾತಘಟ್ಟ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.


Click it and Unblock the Notifications











