ತಮಿಳು ನಟ ಪಾರ್ಥಿಬನ್ ರ ಕನ್ನಡ ಪ್ರೇಮ
ಮೂರು ದಶಕಗಳ ಕಾಲ ಕಾಲಿವುಡ್ ಅಂಗಳದಲ್ಲಿ ನಟನಾಗಿ, ನಿರ್ಮಾಪಕನಾಗಿ ನಿರ್ದೇಶಕನಾಗಿ ತಮ್ಮದೇ ಆದ ಛಾಪು ಮೂಡಿಸಿರುವ ನಟ ಪಾರ್ಥಿಬನ್. ತಮಿಳು ಮಾತ್ರವಲ್ಲದೆ ತೆಲುಗು ಮತ್ತು ಮಲೆಯಾಳಂ ಸಿನಿ ರಂಗದಲ್ಲೂ ಖ್ಯಾತಿ ಗಳಿಸಿರುವ ಪಾರ್ಥಿಬನ್ ಈಗ ಸ್ಯಾಂಡಲ್ ವುಡ್ ಗೆ ಕಾಲಿಟ್ಟಿದ್ದಾರೆ.
ಹಾಗೆ, ಪಾರ್ಥಿಬನ್ ಕನ್ನಡಕ್ಕೆ ಕಾಲಿಡುತ್ತಿರುವುದು 'ದಾದಾ ಈಸ್ ಬ್ಯಾಕ್' ಚಿತ್ರದ ಮೂಲಕ. 'ಗೊಂಬೆಗಳ ಲವ್' ಚಿತ್ರವನ್ನ ನಿರ್ದೇಶಿಸಿದ್ದ ಸಂತೋಷ್, 'ದಾದಾ ಈಸ್ ಬ್ಯಾಕ್' ಚಿತ್ರದ ಸೂತ್ರಧಾರ.

'ದಾದಾ ಈಸ್ ಬ್ಯಾಕ್' ಮತ್ತು ಪಾರ್ಥಿಬನ್ ಅಂದಕೂಡಲೆ, ಚಿತ್ರದಲ್ಲಿ ಅವರೇ 'ದಾದಾ' ಅಂದುಕೊಳ್ಳಬೇಕಿಲ್ಲ. ಯಾಕಂದ್ರೆ, ಚಿತ್ರದ ನಾಯಕ ಯುವ ಪ್ರತಿಭೆ ಅರುಣ್. ಸಿನಿಮಾದ ವಿಶೇಷ ಪಾತ್ರವೊಂದಕ್ಕೆ ಮಾತ್ರ ಪಾರ್ಥಿಬನ್ ಬಣ್ಣ ಹಚ್ಚಲಿದ್ದಾರೆ.
ಹಾಗಂತ, ಪಾರ್ಥಿಬನ್ ರದ್ದು ಬರೀ ಕೇಮಿಯೋ ಪಾತ್ರ ಅಲ್ಲ. ಅವರದ್ದು ಬಹುಮುಖ್ಯ ಪಾತ್ರ. ಅದಕ್ಕೆ ಪವರ್ ಫುಲ್ ನಟ ಬೇಕು ಅಂತ ನಿರ್ದೇಶಕ ಸಂತೋಷ್ ಯೋಚಿಸುತ್ತಿದ್ದಾಗ ಹೊಳೆದವರು ಪಾರ್ಥಿಬನ್.

ಮೊದಲ ಬಾರಿ ಕನ್ನಡದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದಕ್ಕೆ ತಮಿಳು ನಟ ಪಾರ್ಥಿಬನ್ ಕೂಡ ಖುಷಿಯಿಂದ ಒಪ್ಪಿಕೊಂಡು ನಿನ್ನೆ ಬೆಂಗಳೂರಿಗೆ ಆಗಮಿಸಿದ್ದಾರೆ. ಕೂಡಲೆ, ನಗರದ ಕಂಠೀರವ ಸ್ಟುಡಿಯೋದಲ್ಲಿರುವ ಅಣ್ಣಾವ್ರ ಸಮಾಧಿಗೆ ಭೇಟಿ ನೀಡಿ, ಅಪ್ಪಾಜಿಯ ಆಶೀರ್ವಾದ ಪಡೆದಿದ್ದಾರೆ.
ಮೊದಲಿನಿಂದಲೂ ಡಾ.ರಾಜ್ ಮತ್ತು ವಿಷ್ಣುವರ್ಧನ್ ಗೆ ಪಾರ್ಥಿಬನ್ ಅಪ್ಪಟ ಅಭಿಮಾನಿ. ಹೀಗಾಗಿ, ಕರ್ನಾಟಕಕ್ಕೆ ಕಾಲಿಟ್ಟ ತಕ್ಷಣ, ರಾಜ್ ಸಮಾಧಿ ಸ್ಥಳದ ಜೊತೆಗೆ ಅಭಿಮಾನ್ ಸ್ಡುಡಿಯೋದಲ್ಲಿರುವ ವಿಷ್ಣು ಸಮಾಧಿ ಜಾಗಕ್ಕೂ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ.

ಪಾರ್ಥಿಬನ್ ಜೊತೆಗೆ ಇಡೀ 'ದಾದಾ ಈಸ್ ಬ್ಯಾಕ್' ಚಿತ್ರತಂಡ ಕೂಡ 'ದಿಗ್ಗಜರ' ಆಶೀರ್ವಾದ ಪಡೆದಿದೆ. ಅರುಣ್ ಮತ್ತು ಶ್ರಾವ್ಯ ಜೋಡಿಯಾಗಿರುವ 'ದಾದಾ ಈಸ್ ಬ್ಯಾಕ್' ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದೆ. ಪಾರ್ಥಿಬನ್ ನಟಿಸಬೇಕಿರುವ ಪೋರ್ಷನ್ ಮಾತ್ರ ಬಾಕಿಯಿದ್ದು, ಇಂದು ಬೆಂಗಳೂರಿನ ಸುತ್ತಮುತ್ತ ಶೂಟಿಂಗ್ ನಡೆಯುತ್ತಿದೆ.


Click it and Unblock the Notifications











