ಸ್ಯಾಂಡಲ್ ವುಡ್ ಗೆ ಸಾಯಿಕುಮಾರ್ ಮಗನ ಅದ್ದೂರಿ ಎಂಟ್ರಿ
ಕನ್ನಡ ಚಿತ್ರರಂಗಕ್ಕೆ ಬಂದು ಹೆಸರು ಮಾಡಿದ, ಪರಭಾಷಾ ನಟರ ಹೆಸರು ಹುಡುಕುತ್ತಾ ಹೋದರೆ, ಹನುಮಂತನ ಬಾಲದಂತೆ ಪಟ್ಟಿ ಉದ್ದಕ್ಕೆ ಬೆಳೆಯುತ್ತಾ ಹೋಗುತ್ತದೆ.
ಅದರಲ್ಲೂ ವಿಶೇಷವಾಗಿ ನಟ ಸಾಯಿಕುಮಾರ್ ಮತ್ತು ನಟ ರವಿಶಂಕರ್ ಅವರು, ಪರಭಾಷಾ ನಟರಾದರೂ, ಹೆಚ್ಚು ಖ್ಯಾತಿ ಗಳಿಸಿದ್ದು ಮಾತ್ರ ಕನ್ನಡ ಚಿತ್ರರಂಗದಲ್ಲಿ. ಆದ್ದರಿಂದ ಬದುಕು ಕಟ್ಟಿಕೊಟ್ಟು, ಹೆಸರು ತಂದುಕೊಟ್ಟ ಕನ್ನಡ ಚಿತ್ರರಂಗದ ಬಗ್ಗೆ ಈ ಸಹೋದರ ನಟರಿಬ್ಬರಿಗೆ ಭಾರಿ ಹೆಮ್ಮೆ ಹಾಗೂ ಅಭಿಮಾನ.
ಇದೀಗ ಈ ಡೈಲಾಗ್ ಸಹೋದರರಿಬ್ಬರ ಮಕ್ಕಳು ಕನ್ನಡ ಚಿತ್ರರಂಗಲ್ಲಿ ಮಿಂಚಲು ಎಲ್ಲಾ ತಯಾರಿ ನಡೆಸುತ್ತಿದ್ದಾರೆ. ಸದ್ಯಕ್ಕೆ ಡೈಲಾಗ್ ಕಿಂಗ್ ಸಾಯಿಕುಮಾರ್ ಅವರ ಮಗ ನಟ ಆದಿ ಅವರು ಸ್ಯಾಂಡಲ್ ವುಡ್ ನಲ್ಲಿ ತಮ್ಮ ಪ್ರತಿಭೆ ತೋರಲಿದ್ದಾರೆ.[ಮೊಮ್ಮಗಳ ನಾಮಕರಣದ ಸಂಭ್ರಮದಲ್ಲಿ ಡೈಲಾಗ್ ಕಿಂಗ್ ಸಾಯಿ ಕುಮಾರ್]
ಹಲವಾರು ಸಮಯಗಳಿಂದ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಕಾಲಿಡಬೇಕು ಅಂತ ಆದಿ ಅವರು ಅಂದುಕೊಂಡಿದ್ದರು. ಅದಕ್ಕೆ ತಕ್ಕಂತೆ ತಂದೆ ಸಾಯಿಕುಮಾರ್ ಅವರಿಗೂ ತಮ್ಮ ಮಗನನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡಬೇಕೆಂಬ ಅಭಿಲಾಷೆ ಇತ್ತು. ಇದೀಗ ಇಬ್ಬರ ಕನಸು ನೆರವೇರುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ...

ಟಾಲಿವುಡ್ ನಲ್ಲಿ ಬಿಜಿ ನಟ
ನಟ ಆದಿ ಸಾಯಿಕುಮಾರ್ ಅವರ ಪೂರ್ತಿ ಹೆಸರು ಆದಿತ್ಯ ಪುಡಿಪೆಡ್ಡಿ. ಸದ್ಯಕ್ಕೆ ಇವರು ತೆಲುಗು ಚಿತ್ರರಂಗದಲ್ಲಿ ಅತ್ಯಂತ ಬಿಜಿ ನಟ. ತೆಲುಗಿನ 'ಪ್ರೇಮ ಕವಾಲಿ' ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪದಾರ್ಪಣೆ ಮಾಡಿದ ನಟ ಆದಿ ಅವರು, ಮೊದಲ ಚಿತ್ರದಲ್ಲಿ ಉತ್ತಮ ನಟ ಎಂಬ ಪ್ರಶಸ್ತಿ ಗಿಟ್ಟಿಸಿಕೊಂಡರು. ತದನಂತರ ನಟಿ ಶಾನ್ವಿ ಶ್ರೀವಾಸ್ತವ ಅವರ ಜೊತೆ 'ಲವ್ಲಿ' ಚಿತ್ರದಲ್ಲಿ ಮಿಂಚಿದರು.

ಕನ್ನಡಕ್ಕೆ ಎಂಟ್ರಿ
ಇದೀಗ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾಗಲು ತಯಾರಿ ನಡೆಸುತ್ತಿರುವ ನಟ ಆದಿ ಅವರು ಈಗಿನಿಂದಲೇ ಕನ್ನಡ ಭಾಷೆಯನ್ನು ಕಲಿಯುತ್ತಿದ್ದಾರಂತೆ. ಇನ್ನೇನು ಸದ್ಯದಲ್ಲೇ ಆದಿ ನಟನೆಯ ಕನ್ನಡದಲ್ಲಿ ಸಿನಿಮಾ ಸೆಟ್ಟೇರಲಿದ್ದು, ತೆಲುಗು ರೀಮೇಕ್ ಚಿತ್ರದಲ್ಲಿ ನಟಿಸಲಿದ್ದಾರೆ.

ಕಾರ್ತಿಕೇಯ ರೀಮೇಕ್
2014, ಅಕ್ಟೋಬರ್ ನಲ್ಲಿ ತೆರೆಕಂಡು, ಸೂಪರ್ ಹಿಟ್ ಆದ ತೆಲುಗಿನ 'ಕಾರ್ತಿಕೇಯ' ಸಿನಿಮಾವನ್ನು ಕನ್ನಡಕ್ಕೆ ರೀಮೇಕ್ ಮಾಡಲಿದ್ದಾರೆ. ಈ ಚಿತ್ರದ ಕನ್ನಡ ಅವತರಣಿಕೆಯಲ್ಲಿ ನಟ ಆದಿ ಸಾಯಿ ಕುಮಾರ್ ನಾಯಕನಾಗಿ ಮಿಂಚಲಿದ್ದಾರೆ. ತೆಲುಗಿನಲ್ಲಿ ನಟ ನಿಖಿಲ್ ಸಿದ್ಧಾರ್ಥ್ ಮತ್ತು ನಟಿ ಸ್ವಾತಿ ರೆಡ್ಡಿ ಪ್ರಮುಖ ಪಾತ್ರ ವಹಿಸಿದ್ದರು.

ಬಹುಬೇಡಿಕೆಯ ನಟ
ಟಾಲಿವುಡ್ ನಲ್ಲಿ ಬಹು ಬೇಡಿಕೆಯುಳ್ಳ ನಟನಾಗಿ ಹೊರಹೊಮ್ಮಿರುವ ನಟ ಆದಿ ಅವರು ಇಲ್ಲಿಯವರೆಗೆ ನಟಿಸಿದ 'ಲವ್ಲಿ', 'ಸುಕುಮಾರುಡು', 'ರಫ್', 'ಗರಂ' ಮುಂತಾದ ಸಿನಿಮಾಗಳು ಬಾಕ್ಸಾಫೀಸ್ ನಲ್ಲಿ ಒಳ್ಳೆ ಯಶಸ್ವಿಯಾಗಿವೆ. ಸದ್ಯಕ್ಕೆ ಆದಿ ಅವರು 'ಚುಟ್ಟಲಬ್ಬಾಯಿ' ಚಿತ್ರದ ಯಶಸ್ಸಿನಲ್ಲಿದ್ದಾರೆ. ಈ ಚಿತ್ರದಲ್ಲಿ ಅಪ್ಪ-ಮಗ ಒಂದಾಗಿ ಕಾಣಿಸಿಕೊಂಡಿದ್ದರು.

ರವಿಶಂಕರ್ ಮಗನೂ ಬರ್ತಾರಾ.?
ಕನ್ನಡ ಚಿತ್ರರಂಗದಲ್ಲಿ ಭಾರಿ ಬೇಡಿಕೆಯುಳ್ಳ ಖಳನಟನಾಗಿರುವ ರವಿಶಂಕರ್ ಅವರ ಮಗ ಅಧ್ವೈ ಅವರನ್ನು ಕೂಡ ಸ್ಯಾಂಡಲ್ ವುಡ್ ನಲ್ಲಿ ಪರಿಚಯ ಮಾಡಲು ರವಿಶಂಕರ್ ಅವರಿಗೆ ಅದಮ್ಯ ಆಸೆ ಇದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇವರೆಲ್ಲರೂ ಒಂದೇ ಸಿನಿಮಾದಲ್ಲಿ ಮಿಂಚುವ ಪ್ಲ್ಯಾನ್ ಮಾಡಿದ್ದಾರೆ.


Click it and Unblock the Notifications











