ಇಂದು ಕನ್ನಡ ಚಿತ್ರರಂಗ ಹೊಗಳಿದ ತೆಲುಗು ನಟ ನಾನಿ ಅಂದು ಕನ್ನಡದ ಅಗತ್ಯವಿಲ್ಲ ಎಂದಿದ್ರು!
ಕನ್ನಡ ಚಿತ್ರರಂಗ ಇತ್ತೀಚೆಗೆ ಮತ್ತೆ ಈ ಹಿಂದಿನ ಸುವರ್ಣ ಯುಗವನ್ನು ಕಾಣುತ್ತಿದೆ. ಇತ್ತೀಚೆಗೆ ಬಿಡುಗಡೆಗೊಳ್ಳುತ್ತಿರುವ ಕನ್ನಡ ಸಿನಿಮಾಗಳು ಸಾಲು ಸಾಲಾಗಿ ಹಿಟ್, ಸೂಪರ್ ಹಿಟ್ ಆಗುತ್ತಿವೆ. ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ಅಡಿಯಲ್ಲಿ ಮೂಡಿ ಬಂದ ಕೆಜಿಎಫ್ ಸಿನಿಮಾ ಸರಣಿ ಬೃಹತ್ ಗೆಲುವು ಸಾಧಿಸುವುದರ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ಬರೆಯಿತು.
ಹೀಗೆ ಕೆಜಿಎಫ್ ಚಿತ್ರದ ಮೂಲಕ ಇಡೀ ಭಾರತ ಚಿತ್ರರಂಗ ತನ್ನತ್ತ ತಿರುಗಿ ನೋಡುವಂತೆ ಮಾಡಿದ ಕನ್ನಡ ಚಲನಚಿತ್ರರಂಗ ನಂತರ ಹಲವಾರು ನೂರು ಕೋಟಿ ಕ್ಲಬ್ ಚಿತ್ರಗಳನ್ನು ನೀಡಿತು. ಜೇಮ್ಸ್, 777 ಚಾರ್ಲಿ ಹಾಗೂ ವಿಕ್ರಾಂತ್ ರೋಣ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ನೂರು ಕೋಟಿ ಬಾಚಿದವು. ಕೇವಲ ಬಾಕ್ಸ್ ಆಫೀಸ್ ಮಾತ್ರವಲ್ಲದೆ ಕಂಟೆಂಟ್ ವಿಚಾರದಲ್ಲಿಯೂ ಕೂಡ ಕನ್ನಡ ಚಿತ್ರರಂಗ ಇತರೆ ಚಿತ್ರರಂಗಗಳನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದೆ.
ಕಳೆದ ವರ್ಷ ಬಿಡುಗಡೆಯಾದ ಗರುಡಗಮನ ವೃಷಭವಾಹನ, ಈ ವರ್ಷ ತೆರೆಕಂಡ ಚಾರ್ಲಿ, ವಿಕ್ರಾಂತ್ ರೋಣ ಹಾಗೂ ಸದ್ಯ ಅಬ್ಬರಿಸುತ್ತಿರುವ ಕಾಂತಾರ ಒಳ್ಳೆಯ ಕಥಾಹಂದರಗಳನ್ನು ಹೊಂದಿರುವುದರಿಂದ ಪರಭಾಷೆಯ ಪ್ರೇಕ್ಷಕರು ಈ ಚಿತ್ರಗಳನ್ನು ಕೊಂಡಾಡುತ್ತಿದ್ದಾರೆ. ಮುಂಬರುವ ಪುನೀತ್ ಅಭಿನಯದ ಗಂಧದಗುಡಿ ಚಿತ್ರ ಕೂಡ ಈ ಪಟ್ಟಿ ಸೇರುವುದು ಖಚಿತ. ಹೀಗೆ ಸಾಲು ಸಾಲು ಉತ್ತಮ ಚಿತ್ರ ನೀಡುತ್ತಿರುವ ಕನ್ನಡ ಚಿತ್ರರಂಗದ ಕುರಿತು ಇತ್ತೀಚೆಗಷ್ಟೆ ನ್ಯಾಚುರಲ್ ಸ್ಟಾರ್ ನಾನಿ ಫಿಲ್ಮ್ ಫೇರ್ ವೇದಿಕೆ ಮೇಲೆ ಹಾಡಿ ಹೊಗಳಿದ್ದರು. ಆದರೆ ಇದೇ ನಾನಿ ಈ ಹಿಂದೆ ಕನ್ನಡ ಭಾಷೆಗೆ ಡಬ್ ಮಾಡುವುದು ಅಷ್ಟೇನೂ ಅಗತ್ಯವಿಲ್ಲ ಬಿಡಿ ಎಂದು ಕನ್ನಡ ಭಾಷೆಯನ್ನು ಕಡೆಗಣಿಸಿದ್ದರು.

ಕನ್ನಡದ ಅಗತ್ಯವಿಲ್ಲ ಎಂದಿದ್ದ ನಾನಿ!
ಇತ್ತೀಚೆಗಷ್ಟೆ ನಾನಿ ಮತ್ತು ನಜ್ರಿಯಾ ನಜೀಮ್ ಅಭಿನಯದ ಅಂಟೆ ಸುಂದರಾನಿಕಿ ಎಂಬ ಚಿತ್ರ ಬಿಡುಗಡೆಗೊಂಡಿತ್ತು. ಈ ಚಿತ್ರದ ಪ್ರಚಾರ ಕಾರ್ಯಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ ನಾನಿ ತಮ್ಮ ಅಂಟೆ ಸುಂದರಾನಿಕಿ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಿ ಬಿಡುಗಡೆ ಮಾಡುವ ಅವಶ್ಯಕತೆಯಿಲ್ಲ ಎಂದಿದ್ದರು. ಏಕೆಂದರೆ ಕನ್ನಡಿಗರು ಎಲ್ಲಾ ಭಾಷೆಯ ಚಿತ್ರಗಳನ್ನು ಮೂಲಭಾಷೆಯಲ್ಲಿಯೇ ನೋಡುವುದರಿಂದ ಡಬ್ಬಿಂಗ್ ಮಾಡುವ ಅಗತ್ಯವಿಲ್ಲ ಎಂದಿದ್ದರು. ನಾನಿ ಅವರ ಈ ಹೇಳಿಕೆ ಕನ್ನಡ ಸಿನಿ ಪ್ರೇಕ್ಷಕರ ಕೋಪವನ್ನು ಸಹ ಕೆರಳಿಸಿತ್ತು.

ಈಗ ಕನ್ನಡ ಚಿತ್ರರಂಗವನ್ನೇ ಹೊಗಳಿದ ನಾನಿ
ಅಂದು ಕನ್ನಡ ಚಿತ್ರರಂಗದ ಪ್ರೇಕ್ಷಕರಿಗಾಗಿ ಪ್ರತ್ಯೇಕವಾಗಿ ಕನ್ನಡ ಡಬ್ ಮಾಡುವ ಅಗತ್ಯವಿಲ್ಲ ಎಂದಿದ್ದ ನಾನಿ ಇಂದು ಫಿಲ್ಮ್ ಫೇರ್ ರೀತಿಯ ಮಹಾವೇದಿಕೆ ಮೇಲೆ ಕನ್ನಡ ಚಿತ್ರರಂಗ ಒಳ್ಳೊಳ್ಳೆ ಚಿತ್ರಗಳನ್ನು ನೀಡುತ್ತಿದೆ. ಎಲ್ಲೇ ಹೋದರೂ ಕನ್ನಡ ಚಿತ್ರಗಳ ಕುರಿತಾಗಿಯೇ ಮಾತನಾಡುತ್ತಿದ್ದಾರೆ, ಕನ್ನಡದವರು ನಮ್ಮನ್ನು ಸಹ ಹೊಡೆದುಹಾಕಿ ಮುಂದೆ ಹೋಗಿಬಿಟ್ಟಿದ್ದಾರೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ ಎಂದು ನಾನಿ ಕನ್ನಡ ಚಿತ್ರರಂಗವನ್ನು ಹಾಡಿ ಹೊಗಳಿದ್ದಾರೆ.

'ಮೇಜರ್' ಕೂಡ ಕನ್ನಡ ಚಿತ್ರರಂಗಕ್ಕೆ ಫಿದಾ
ಇನ್ನು ಇತ್ತೀಚೆಗಷ್ಟೇ ಮೇಜರ್ ಎಂಬ ಸೂಪರ್ ಹಿಟ್ ಚಲನಚಿತ್ರ ನೀಡಿದ್ದ ತೆಲುಗು ನಟ ಅಡಿವಿ ಶೇಷ್ ಕೂಡ ಕೂಡ ಟ್ವಿಟ್ಟರ್ ಮೂಲಕ ಕನ್ನಡ ಚಿತ್ರರಂಗವನ್ನು ಹಾಡಿ ಹೊಗಳಿದ್ದಾರೆ. ನಿಜವಾಗಿಯೂ ಇತ್ತೀಚೆಗೆ ಬರುತ್ತಿರುವ ಕನ್ನಡ ಚಿತ್ರಗಳಿಂದ ಸ್ಫೂರ್ತಿ ಪಡೆದುಕೊಂಡಿದ್ದೇನೆ ಎಂದು ಮುಕ್ತ ಮನಸ್ಸಿನಿಂದ ಅಡಿವಿ ಶೇಷ್ ಟ್ವೀಟ್ ಮಾಡಿದ್ದರು.


Click it and Unblock the Notifications











