ತೆಲುಗು ಚಿತ್ರಕ್ಕೆ ಸಿದ್ದವಾದ ಕನ್ನಡದ ಮುಖ್ಯ ಚಿತ್ರಮಂದಿರ!
ಸ್ಯಾಂಡಲ್ವುಡ್ ಮೇಲೆ ಪರಭಾಷಾ ಚಿತ್ರಗಳ ಹಾವಳಿ ಮೊದಲಿನಿಂದಲೂ ಇದ್ದಿದ್ದೇ. ಇಂತಹ ಸಮಸ್ಯೆಗಳ ಮಧ್ಯೆಯೂ ಗಾಂಧಿನಗರದ ಕೆಲವು ಚಿತ್ರಮಂದಿರಗಳು ಕನ್ನಡ ಚಿತ್ರಗಳಿಗೆಂದೇ ಮೀಸಲಾಗಿಟ್ಟಿರುವಂತೆ, ಹಲವು ವರ್ಷಗಳಿಂದ ಕೇವಲ ಕನ್ನಡ ಚಿತ್ರಗಳನ್ನ ಮಾತ್ರ ಪ್ರದರ್ಶಿಸುತ್ತಾ ಬಂದಿದೆ.
ಆದ್ರೀಗ, ಈ ಸಂಪ್ರಾದಯವನ್ನ ಮುರಿದು ಕೆ.ಜಿ ರಸ್ತೆಯ ಮುಖ್ಯ ಚಿತ್ರಮಂದಿರವೊಂದು ತೆಲುಗು ಚಿತ್ರವನ್ನ ಸ್ವಾಗತ ಮಾಡಲು ಸಿದ್ದವಾಗಿದೆ.[ಬಾಲಕೃಷ್ಣರ 100ನೇ ಚಿತ್ರದಲ್ಲಿ ಶಿವಣ್ಣ: ಫಸ್ಟ್ ಲುಕ್ ರಿಲೀಸ್]

ಹೌದು, ಕೆ.ಜಿ ರಸ್ತೆಯಲ್ಲಿರುವ ಸಂತೋಷ್ ಚಿತ್ರಮಂದಿರ ಹಲವು ವರ್ಷಗಳಿಂದ ಕನ್ನಡ ಚಿತ್ರಗಳಿಗೆ ಮಾತೃಭೂಮಿಯಾಗಿದೆ. ಬಹುತೇಕ ಕನ್ನಡದ ಸ್ಟಾರ್ ನಟರ ಸಿನಿಮಾಗಳು ರಿಲೀಸ್ ಆಗುವುದೇ ಇದೇ ಚಿತ್ರಮಂದಿರದಲ್ಲಿ. ಆದ್ರೀಗ, ಸಂತೋಷ್ ಚಿತ್ರಮಂದಿರ ತೆಲುಗು ಚಿತ್ರಕ್ಕೆ ಸಾಕ್ಷಿಯಾಗುತ್ತಿದೆ. ಇದು ಗಾಂಧಿನಗರದಲ್ಲಿ ಹಲವು ಅಚ್ಚರಿಗಳಿಗೆ ಕಾರಣವಾಗಿದೆ.
ಸಂಕ್ರಾಂತಿ ಹಬ್ಬದ ವಿಶೇಷವಾಗಿ ಇದೇ ಜನವರಿ 12 ರಂದು ಸಂತೋಷ್ ಚಿತ್ರಮಂದಿರದಲ್ಲಿ ನಂದಮೂರಿ ಬಾಲಕೃಷ್ಣ ಅಭಿನಯದ 'ಗೌತಮಿಪುತ್ರ ಶಾತಕರ್ಣಿ' ಚಿತ್ರ ತೆರೆಕಾಣುತ್ತಿದೆ. ವಿಶೇಷ ಅಂದ್ರೆ, ಈ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಕೂಡ ಅಭಿನಯಿಸಿದ್ದಾರೆ.

ಸದ್ಯ, ಸಂತೋಷ್ ಥಿಯೇಟರ್ ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಸುಂದರಾಂಗ ಜಾಣ' ಸಿನಿಮಾ ಪ್ರದರ್ಶನವಾಗುತ್ತಿದೆ. ಆದ್ರೆ, ಗೌತಮಿಪುತ್ರ ಶಾತಕರ್ಣಿ' ಬಿಡುಗಡೆಯಾಗುತ್ತಿರುವ ಹಿನ್ನೆಲೆ 'ಸುಂದರಾಂಗ ಜಾಣ' ಈ ವಾರ ಸಂತೋಷ್ ಚಿತ್ರಮಂದಿರದಿಂದ ಎತ್ತಂಗಡಿ ಆಗುತ್ತಿದೆ.


Click it and Unblock the Notifications











