"ದಿ ಕಾಶ್ಮೀರ್ ಫೈಲ್ಸ್" ಕನ್ನಡಕ್ಕೆ ಡಬ್: ಶಾಸಕ ರೇಣುಕಾಚಾರ್ಯ ಕಾರ್ಯೋನ್ಮುಖ
ದೇಶಾದ್ಯಂತ ತೀವ್ರ ವಿವಾದದ ಅಲೆಯನ್ನು ಸೃಷ್ಟಿಸಿರುವ 'ದಿ ಕಾಶ್ಮೀರಿ ಫೈಲ್ಸ್' ಹಿಂದಿ ಚಿತ್ರವು ಶೀಘ್ರದಲ್ಲೇ ಕನ್ನಡದ ಬೆಳ್ಳಿತೆರೆಯಲ್ಲೂ ಮೂಡಿಬರಲಿದೆ.
ಹಿಂದಿ ಅವತರಣಿಕೆಯ 'ದಿ ಕಾಶ್ಮೀರಿ ಫೈಲ್ಸ್' ಚಿತ್ರವನ್ನು ಕನ್ನಡಿಗರಿಗಾಗಿ ಕನ್ನಡದಲ್ಲಿ ತುರ್ಜುಮೆ ಮಾಡಿ ತೆರೆ ಮೇಲೆ ತರಲು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ತೀರ್ಮಾನಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಇದನ್ನು ಸ್ಪಷ್ಟಪಡಿಸಿರುವ ಅವರು 'ದಿ ಕಾಶ್ಮೀರಿ ಫೈಲ್ಸ್' ಚಿತ್ರದ ವಿವೇಕ್ ನಿರ್ದೇಶಕ ಅಗ್ನಿಹೋತ್ರಿ ಜೊತೆ ಚರ್ಚಿಸಿ ಕನ್ನಡದಲ್ಲಿ ತರಲು ತಾವು ಉತ್ಸುಕರಾಗಿದ್ದೇವೆ ಎಂದು ಹೇಳಿದರು.
ಶೀಘ್ರದಲ್ಲೇ ವಿವೇಕ್ ಅಗ್ನಿಹೋತ್ರಿ ಅವರ ಜೊತೆ ಮಾತುಕತೆ ನಡೆಸಿ ಚಿತ್ರಕ್ಕೆ ಬೇಕಾದ ಬಜೆಟ್ ಸೇರಿದಂತೆ ಎಲ್ಲ ವಿಷಯಗಳ ಬಗ್ಗೆಯೂ ಚರ್ಚೆ ನಡೆಸಿ ಕನ್ನಡದಲ್ಲಿ ತರಲು ತಾವು ಸರ್ವಪ್ರಯತ್ನ ಮಾಡುವುದಾಗಿ ತಿಳಿಸಿದರು.
ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಸಂಪರ್ಕ ಸಂಖ್ಯೆಯನ್ನು ಕಲೆ ಹಾಕಿದ್ದೇನೆ. ಈ ಚಿತ್ರದ ಡಬ್ಬಿಂಗ್ಗೆ ಅವರು ಒಪ್ಪಿದರೆ ಹಣ ಸಂಗ್ರಹಿಸಿ ಡಬ್ಬಿಂಗ್ ಮಾಡುತ್ತೇವೆ ಎಂದರು. 'ದಿ ಕಾಶ್ಮೀರ್ ಫೈಲ್ಸ್' ಈಗ ಹಿಂದಿಯಲ್ಲಿ ಮಾತ್ರ ಬಂದಿದೆ.
ದೇಶದೆಲ್ಲೆಡೆ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಕನ್ನಡ ಭಾಷೆಗೆ ಡಬ್ ಮಾಡಿ ತರಬೇಕು ಎಂದು ಯೋಚನೆ ಮಾಡಿದ್ದೀನಿ. ಈ ವಿಚಾರವಾಗಿ ನನ್ನ ಸ್ನೇಹಿತರ ಬಳಿ ಚರ್ಚೆ ಸಹ ಮಾಡಿದ್ದೀನಿ. ಕನ್ನಡದಲ್ಲಿ ಬಂದ್ರೆ ಇಲ್ಲಿನವರೆಲ್ಲರೂ ನೋಡಲು ಅನುಕೂಲವಾಗುತ್ತದೆ ಎಂದರು.
ಕೆಲವರಿಗೆ ಹಿಂದಿ ಭಾಷೆ ಅರ್ಥವಾಗುವುದಿಲ್ಲ. ಈ ಬಗ್ಗೆ ನನಗೆ ವೈಯಕ್ತಿಕವಾಗಿ ಕೆಲವರು ನನ್ನ ಬಳಿ ಹೇಳಿಕೊಂಡಿದ್ದಾರೆ. ಹೀಗಾಗಿ ಕನ್ನಡದಲ್ಲಿ 'ದಿ ಕಾಶ್ಮೀರಿ ಫೈಲ್ಸ್' ಚಿತ್ರವನ್ನು ತರಲು ಈಗಾಗಲೇ ಕಾರ್ಯೋನ್ಮುಖರಾಗಿದ್ದೇವೆ ಎಂದು ವಿವರಿಸಿದರು.

ಎಲ್ಲರಿಗೂ ಹಿಂದಿ ಬರಲ್ಲ: ರೇಣುಕಾಚಾರ್ಯ
ಕರುನಾಡಿನ ಜನರಿಗೆ ಎಲ್ಲರಿಗೂ ಹಿಂದಿ ಬರಲ್ಲ. 'ದಿ ಕಾಶ್ಮೀರ್ ಫೈಲ್ಸ್' ಒಂದು ಉತ್ತಮವಾದ ಚಿತ್ರ. ಪಂಡಿತರ ಮೇಲೆ ನಡೆದಿದ್ದ ದೌರ್ಜನ್ಯ ಎಲ್ಲರಿಗೂ ತಿಳಿಯಬೇಕು. ಈ ಹಿನ್ನೆಲೆಯಲ್ಲಿ ಕನ್ನಡದಲ್ಲಿ ತರಲು ಯೋಚನೆ ಮಾಡ್ತಾ ಇದ್ದೀನಿ ಎಂದರು. ಕನ್ನಡದಲ್ಲಿ ಚಿತ್ರ ಬಂದ ಮೇಲಾದರೂ ಕಾಂಗ್ರೆಸ್ ನಾಯಕರು ಚಿತ್ರ ನೋಡುವಂತಾಗಲಿ. ಇದರಲ್ಲಿ ದಯವಿಟ್ಟು ರಾಜಕೀಯ ಮಾಡಬೇಡಿ. ಚುನಾವಣೆ ಬಂದಾಗ ನೋಡಿಕೊಳ್ಳೋಣ ಎಂದು ಹೇಳಿದರು. ಈ ಚಿತ್ರವನ್ನು ಪ್ರತಿಯೊಬ್ಬ ಭಾರತೀಯನು ನೋಡಬೇಕಾದ ಚಿತ್ರವಾಗಿದೆ. ಕಾಶ್ಮೀರದಲ್ಲಿ ಹಿಂದೂಗಳು ಮತ್ತು ಪಂಡಿತರ ಮೇಲೆ ನಡೆದ ದೌರ್ಜನ್ಯ, ದಬ್ಬಾಳಿಕೆ , ಹಿಂಸಾಚಾರ, ಅವರು ಅನುಭವಿಸಿದ ಕಷ್ಟ ಎಲ್ಲವನ್ನೂ ಸಹ ಒಳಗೊಂಡಿದೆ. ಹೀಗಾಗಿ ಚಿತ್ರವನ್ನು ಕನ್ನಡದಲ್ಲಿ ತರಬೇಕು ಎಂಬ ಆಲೋಚನೆ ನನಗಿದೆ ಎಂದರು.

ಪ್ರತಿಯೊಬ್ಬರು ಸಿನಿಮಾ ವೀಕ್ಷಿಸಬೇಕು: ರೇಣುಕಾಚಾರ್ಯ
ಪ್ರತಿಯೊಬ್ಬ ಭಾರತೀಯನು ಈ ಚಿತ್ರವನ್ನು ವೀಕ್ಷಿಸಬೇಕು. ಸ್ವಾಭಿಮಾನಿ ಭಾರತೀಯನು ಈ ಚಿತ್ರವನ್ನು ವಿರೋಧಿಸುವುದಿಲ್ಲ. ಕೆಲವರು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ವಿರೋಸಿದರೆ ನಾವೇನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು. ಸರ್ಕಾರವೇ ಚಿತ್ರ ವೀಕ್ಷಣೆಗಾಗಿ ಜನಪ್ರತಿನಿಗಳಿಗೆ ವಿಧಾನಸಭಾಧ್ಯಕ್ಷರು ಉಚಿತ ಟಿಕೆಟ್ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಆದರೆ ಕೆಲವರು ಇದರಲ್ಲೂ ಕೂಡ ರಾಜಕೀಯ ಬೆರೆಸಲು ಮುಂದಾದರು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಸಿನಿಮಾ ವೀಕ್ಷಿಸದವರು ದೇಶದ್ರೋಹಿಗಳು: ರೇಣುಕಾಚಾರ್ಯ
''ಕಾಶ್ಮೀರಿ ಫೈಲ್ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸುವವರು ನನ್ನ ಪ್ರಕಾರ ದೇಶದ್ರೋಹಿಗಳಿಗೆ ಸಮ. ಯಾವೊಬ್ಬ ಭಾರತೀಯನ್ನು ಇದಕ್ಕೆ ವಿರೋಧ ವ್ಯಕ್ತಪಡಿಸುವುದಿಲ್ಲ. ಸತ್ಯ ತಡವಾದರೂ ಬೆಳಕಿಗೆ ಬಂದಿದೆಯಲ್ಲ ಎಂದು ಸಂತೋಷ ಪಡುತ್ತಿದ್ದಾರೆ. ಆದರೂ ಕೆಲವರು ಇದರಲ್ಲೂ ಕೂಡ ರಾಜಕಾರಣ ಮಾಡಲು ಹೊರಟಿದ್ದಾರೆ. ನನ್ನ ಪಾಲಿಗೆ ಅಂಥರು ದೇಶದ್ರೋಹಿಗಳು'' ಎಂದು ಕಿಡಿಕಾರಿದರು. 'ದಿ ಕಾಶ್ಮೀರಿ ಫೈಲ್ಸ್' ಸಿನಿಮಾ ಕಟ್ಟುಕಥೆ ಎಂಬ ಕಾಂಗ್ರೆಸ್ನವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಭಗವದ್ಗೀತೆ ಪಠ್ಯಪುಸ್ತಕದಲ್ಲಿ ತಂದರೆ ನಾನು ಸ್ವಾಗತ ಮಾಡುತ್ತೇನೆ. ಕೆಲವರಿಗೆ ಮುಜುಗರ ಆಗಬಹುದು. 'ಕಾಶ್ಮೀರಿ ಫೈಲ್ಸ್' ವಿಚಾರವಾಗಿ ಸ್ಪೀಕರ್ ಸಿನಿಮಾ ನೋಡಲು ಕರೆದಿದ್ದರು. ಆದರೆ ಯಾರೂ ಬರಲಿಲ್ಲ. ನೀವು ಈ ದೇಶದಲ್ಲಿ ನೆಲೆಸಲು ನಾಲಾಯಕ್ ಎಂದು ಗುಡುಗಿದರು.

''ಹಿಜಾಬ್ ವಿವಾದ: ನ್ಯಾಯಾಲಯದ ತೀರ್ಪು ಸ್ವಾಗತಿಸಿ''
ಹಿಜಾಬ್ ಕುರಿತಾಗಿ ರಾಜ್ಯ ಹೈಕೋಟ್ ನೀಡಿರುವ ತೀರ್ಪಿನ ವಿರುದ್ದ ಕೆಲವು ಸಂಘಟನೆಗಳು ಬಂದ್ಗೆ ಕರೆ ಕೊಟ್ಟಿರುವುದಕ್ಕೆ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ, ನೆಲದ ಕಾನೂನನ್ನು ಗೌರವಿಸಬೇಕೆಂದು ಒತ್ತಾಯಿಸಿದರು.
ಹೈಕೋರ್ಟ್ ತೀರ್ಪನ್ನು ಪ್ರತಿಯೊಬ್ಬರು ಗೌರವಿಸಬೇಕು. ಸರ್ಕಾರ ತೆಗೆದುಕೊಂಡಿರುವ ತೀರ್ಮಾನವನ್ನು ಎತ್ತಿ ಹಿಡಿದಿದೆ. ಭಾರತದ ಪ್ರಜೆಗಳಾಗಿದ್ದರೆ ನೀವು ಕಾನೂನಿಗೆ ಗೌರವ ಕೊಡಬೇಕು. ಇಲ್ಲದದಿದ್ದರೆ ನೀವು ದೇಶದಲ್ಲೇ ಇರಲು ನಾಲಾಯಕ್ ಎಂದು ವಾಗ್ದಾಳಿ ನಡೆಸಿದರು. ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದಾರೆ ಬಂದ್ ಕರೆ ಕೊಟ್ಟಿದ್ದಾರೆ. ನಿಮ್ಮಿಂದ ಮಕ್ಕಳ ವಿಧ್ಯಾಭ್ಯಾಸ ಹಾಳಾಗಿದೆ ಎಂದು ಹರಿಹಾಯ್ದರು.


Click it and Unblock the Notifications











