ಮೀಟೂ ಪ್ರಕರಣ ಆದ್ಮೇಲೆ ಗಂಡಸರು ಹೆದರಿದ್ದಾರಾ.? ಶ್ರುತಿ ಹರಿಹರನ್ ಏನಂದರು.?
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮೀಟೂ ಆರೋಪ ಮಾಡಿದ್ದರು. ಕಳೆದ ವರ್ಷ ಈ ವಿವಾದ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿತ್ತು. ಶ್ರುತಿ ಹರಿಹರನ್ ವಿರುದ್ಧ ಅರ್ಜುನ್ ಸರ್ಜಾ ಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣ ಆದ್ಮೇಲೆ ಶ್ರುತಿ ಹರಿಹರನ್ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಳ್ಳಲಿಲ್ಲ. ಗರ್ಭಿಣಿಯಾದ ಶ್ರುತಿ ಹರಿಹರನ್ ಇದೀಗ ಹೆಣ್ಣು ಮಗುವಿಗೆ ತಾಯಿ ಆಗಿದ್ದಾರೆ. ಮಗಳಿಗೆ ಜಾನಕಿ ಅಂತ ಹೆಸರಿಟ್ಟಿರುವ ಶ್ರುತಿ ಹರಿಹರನ್ ಇಷ್ಟು ದಿನ ಮಗುವಿನ ಆರೈಕೆಯಲ್ಲಿ ತೊಡಗಿದ್ದರು.
ಇಲ್ಲಿಯವರೆಗೂ ಮಗಳಿಗಾಗಿ ಬ್ರೇಕ್ ಪಡೆದಿದ್ದ ಶ್ರುತಿ ಹರಿಹರನ್ ಇತ್ತೀಚೆಗಷ್ಟೇ ಸಿಟಿಜನ್ಸ್ ಫಾರ್ ಬೆಂಗಳೂರು ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲಿ, ''ಮೀಟೂ ಪ್ರಕರಣ ಆದ್ಮೇಲೆ ಚಿಕ್ಕ ಮಟ್ಟದಲ್ಲಾದರೂ ಗಂಡಸರಿಗೆ ಹೆದರಿಕೆ ಬಂದಿದೆ'' ಅಂತ ಶ್ರುತಿ ಹರಿಹರನ್ ಹೇಳಿದ್ದಾರೆ. ಮುಂದೆ ಓದಿರಿ...

ರೇಪಿಸ್ಟ್ ಗಳಿಗೆ ಶಿಕ್ಷೆ ಕೊಡಬೇಕು
ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿದ ಶ್ರುತಿ ಹರಿಹರನ್, ''ಮೊದಲನೇಯದಾಗಿ ಪ್ರತಿ ಕುಟುಂಬದಲ್ಲೂ ಗಂಡು ಮಕ್ಕಳನ್ನು ಸರಿಯಾಗಿ ಬೆಳೆಸಬೇಕು. ಎರಡನೆಯದಾಗಿ ಅತ್ಯಾಚಾರಿಗಳಿಗೆ ಜಾಮೀನು ಕೊಡಬಾರದು. ರೇಪಿಸ್ಟ್ ಗಳಿಗೆ ಕಠಿಣ ಶಿಕ್ಷೆ ಕೊಡಬೇಕು'' ಅಂತ ಶ್ರುತಿ ಹರಿಹರನ್ ಆಗ್ರಹಿಸಿದರು.

ಸ್ವಲ್ಪ ಹೆದರಿಕೆ ಬಂದಿದೆ
''ಮೀಟೂ ಪ್ರಕರಣದಲ್ಲಿ ನಾನು ದನಿ ಎತ್ತಿದ ಮೇಲೆ ಏನಾದರೂ ಚೇಂಜ್ ಆಗಿದ್ಯಾ ಎಂಬ ಪ್ರಶ್ನೆ ನನಗೆ ಕಾಡುತ್ತಿರುತ್ತದೆ. ಇಂಡಸ್ಟ್ರಿಯಲ್ಲಿರುವ ಗಂಡಸರಿಗೆ ಸ್ವಲ್ಪನಾದರೂ ಹೆದರಿಕೆ ಬಂದಿದ್ಯಾ ಅಂದ್ರೆ ಖಂಡಿತ ಚಿಕ್ಕ ಮಟ್ಟದಲ್ಲಾದರೂ ಬದಲಾವಣೆ ಆಗಿದೆ'' ಎಂದಿದ್ದಾರೆ ಶ್ರುತಿ ಹರಿಹರನ್

ಯಾರಿಗೂ ಕ್ಷಮೆ ಕೇಳಿಲ್ಲ
''ನಾನು ಸೈಲೆಂಟ್ ಆಗಿಲ್ಲ. ಈಗಲೂ ನನ್ನ ಹೇಳಿಕೆಗಳಿಗೆ ನಾನು ಬದ್ಧಳಾಗಿದ್ದೇನೆ. ಯಾರಿಗೂ ಕ್ಷಮೆಯನ್ನ ಕೇಳಿಲ್ಲ. ನನಗೆ ಬ್ರೇಕ್ ಬೇಕಿತ್ತು. ಗರ್ಭಿಣಿ ಆದೆ, ಈಗ ಮಗುವಾಗಿದೆ. ಪ್ರಕರಣ ನ್ಯಾಯಾಲಯದಲ್ಲಿದೆ. ಪ್ರಕ್ರಿಯೆ ನಿಧಾನ ಆಗುತ್ತಿದೆ'' ಅಂತ ಬೇಸರ ವ್ಯಕ್ತಪಡಿಸಿದರು ಶ್ರುತಿ ಹರಿಹರನ್.

ಮೀಡಿಯಾ ಮೇಲೆ ಶ್ರುತಿ ಹರಿಹರನ್ ಗೆ ಬೇಸರ
''ಮೀಟೂ ಬಗ್ಗೆ ನಾನು ಧ್ವನಿ ಎತ್ತಿದ ತಕ್ಷಣ ದೊಡ್ಡದಾಗಿ ಮಾಡಿದ್ದು ಮೀಡಿಯಾ. ನನಗೆ ಆಗಿದ್ದ ಘಟನೆಯನ್ನ ನಾನು ಹೇಳಿದ್ದೇನೆ. ಆದರೆ ಮೀಡಿಯಾದವರು ಬೇರೆ ಕಥೆಯನ್ನು ಕಟ್ಟಿದರು. ಬೇರೆ ಬೇರೆ ಸುದ್ದಿಗಳು ಬರುತ್ತಿದ್ದಂತೆಯೇ, ನಮ್ಮ ಸುದ್ದಿಗಳನ್ನ ಕೈಬಿಡಲಾಯಿತು. ನಮ್ಮ ಧ್ವನಿ ಕೇಳಿಸುತ್ತಿಲ್ಲ ಎಂದ ಮಾತ್ರಕ್ಕೆ ನಾವು ಸೈಲೆಂಟ್ ಆಗಿದ್ದೀವಿ ಎಂದು ಅರ್ಥ ಬರಲ್ಲ'' ಅಂತ ಶ್ರುತಿ ಹರಿಹರನ್ ಹೇಳಿದ್ದಾರೆ.


Click it and Unblock the Notifications











