ರಾಜಮೌಳಿ ನಿರ್ದೇಶನದಲ್ಲಿ ಮಹೇಶ್ ಬಾಬು!
ತೆಲುಗು ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ ರಾಜಮೌಳಿ ಅವರ ಬಹುನಿರೀಕ್ಷಿತ 'ಬಾಹುಬಲಿ' ಜೊತೆ ಕಾದಾಡುವುದೇಕೆ ಎಂದೆನಿಸಿ ಪ್ರಿನ್ಸ್ ಮಹೇಶ್ ಬಾಬು ಅವರು ತಮ್ಮ 'ಶ್ರೀಮಂತುಡು' ಚಿತ್ರವನ್ನು ಮುಂದಕ್ಕೆ ಹಾಕಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ನಡುವೆ ರಾಜಮೌಳಿ ಅವರ ನಿರ್ದೇಶನದಲ್ಲಿ ಮಹೇಶ್ ಬಾಬು ನಟಿಸುತ್ತಾರೆ ಎಂಬ ಸುದ್ದಿ ಮತ್ತೊಮ್ಮೆ ಹಬ್ಬಿದೆ.
ಟಾಲಿವುಡ್ ನಲ್ಲಿ 'ಬಾಹುಬಲಿ' ಆಗಮನಕ್ಕೆ ಸಕಲ ಸಿದ್ದತೆ ನಡೆಸಲಾಗಿದೆ. ಇತ್ತ ಬೆಂಗಳೂರಿನಲ್ಲೂ ಅಡ್ವಾನ್ಸ್ ಬುಕ್ಕಿಂಗ್ ಜೋರಾಗಿದ್ದು, ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಮೊದಲಿಗೆ ಟಿಕೆಟ್ ಬುಕ್ಕಿಂಗ್ ನಡೆಯುತ್ತಿದೆ. ಮಲ್ಟಿಪ್ಲೆಕ್ಸ್ ಗಳಲ್ಲಿ ಇನ್ನೂ ಕದ ತೆರೆದಿಲ್ಲ. ಕನ್ನಡ ನಟ ಸುದೀಪ್ ಅವರ ಪಾತ್ರದ ಬಗ್ಗೆ ಹೆಚ್ಚಿನ ಗುಟ್ಟು ಬಿಟ್ಟುಕೊಡದೆ ರಾಜಮೌಳಿ ಅವರು ಸಸ್ಪೆನ್ಸ್ ಉಳಿಸಿಕೊಂಡಿದ್ದಾರೆ.

ಪೈರಸಿ ತಡೆಗಾಗಿ ಕ್ರಮ ಕೈಗೊಳ್ಳಲಾಗಿದೆ. ಚಿತ್ರದ ಬಗ್ಗೆ ಎಲ್ಲೆಡೆ ನಿರೀಕ್ಷೆ ಹೆಚ್ಚುತ್ತಿದೆ. ಈ ಮಧ್ಯೆ ಚಿತ್ರದ ಪ್ರಚಾರ ಕಾರ್ಯದಲ್ಲಿ ನಿರತರಾಗಿರುವ ರಾಜಮೌಳಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಮಹೇಶ್ ಬಾಬು ಅವರಿಗಾಗಿ ಚಿತ್ರ ಮಾಡಲು ಸಿದ್ಧ ಎಂದಿದ್ದಾರೆ.
ಮಹೇಶ್ ಬಾಬು ಹಾಗೂ ನಾನು ಒಟ್ಟಿಗೆ ಕಾರ್ಯ ನಿರ್ವಹಿಸಲು ಸಮಯ ಕೂಡಿ ಬಂದಿಲ್ಲ. 2010ರಲ್ಲೇ ಮಹೇಶ್ ಹಾಗೂ ನಾನು ಚಿತ್ರವೊಂದಕ್ಕೆ ಸಹಿ ಹಾಕಿದ್ದೆವು, ನಿರ್ಮಾಪಕ ಕೆಎಲ್ ನಾರಾಯಣ ಅವರ ನಿರ್ಮಾಣದಲ್ಲಿ ಚಿತ್ರ ಸೆಟ್ಟೇರಬೇಕಾಗಿತ್ತು. ಅದರೆ, ಏಕೋ ಮುಂದುವರೆಯಲಿಲ್ಲ. ನನ್ನ ಸದ್ಯದ ಯೋಜನೆಗಳನ್ನು ಮುಗಿಸಿದ ನಂತರ ಈ ಬಗ್ಗೆ ಮತ್ತೊಮ್ಮೆ ಯೋಚಿಸುವೆ ಎಂದು ರಾಜಮೌಳಿ ಹೇಳಿದ್ದಾರೆ.
ಮಹೇಶ್ ಬಾಬು ಹಾಗೂ ರಾಜಮೌಳಿ ಕಾಂಬಿನೇಷನ್ ನಲ್ಲಿ ಚಿತ್ರ ಹೊರ ಬಂದರೆ ಸೂಪರ್ ಆಗಿರುತ್ತದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಅದರೆ, ಇಬ್ಬರು ಸಕತ್ ಬ್ಯುಸಿ ಇರುವುದರಿಂದ ಕನಿಷ್ಠ ಪಕ್ಷ ಇನ್ನೊಂದು ವರ್ಷ ಕಾಲ ಹೊಸ ಯೋಜನೆಗೆ ಕೈ ಹಾಕುವುದು ಕಷ್ಟ. ಕಾಲ ಯಾವಾಗ ಕೂಡಿ ಬರುತ್ತದೋ ಕಾದು ನೋಡೋಣ.. ಸದ್ಯಕ್ಕೆ 2010ರಲ್ಲಿ ಮಹೇಶ್ ಬಾಬು ಮಾಡಿದ್ದ ಟ್ವೀಟ್ ಹಾಗೂ ಅದಕ್ಕೆ ರಾಜಮೌಳಿ ನೀಡಿದ್ದ ಉತ್ತರ ನೋಡಿ.


Click it and Unblock the Notifications











