ನೇಪಾಳ ಭೀಕರ ಭೂಕಂಪಕ್ಕೆ ಬಲಿಯಾದ ನಟ ವಿಜಯ್
ಭೀಕರ ಭೂಕಂಪಕ್ಕೆ ತುತ್ತಾದ ನೇಪಾಳ ಈಗ ಅಕ್ಷರಶಃ ಮಸಣವಾಗಿದೆ. ಇದುವರೆಗೂ 4,000 ಮಂದಿ ಮಣ್ಣಾಗಿದ್ದು, 8,000ಕ್ಕೂ ಅಧಿಕ ಮಂದಿ ಗಾಯಾಳುಗಳಾಗಿದ್ದಾರೆ. ಶೇ.40ರಷ್ಟು ನೇಪಾಳ ನೆಲಸಮವಾಗಿದೆ. ಅಂದಾಜಿಗೆ ಸಿಗದಷ್ಟು ಆಸ್ತಿಪಾಸ್ತಿ ನಷ್ಟವಾಗಿದೆ.
ಇದೇ ದುರ್ಘಟನೆಯಲ್ಲಿ ಚಿತ್ರೀಕರಣಕ್ಕೆ ತೆರಳಿದ್ದ ತೆಲುಗಿನ ನಟ ಮೃತಪಟ್ಟಿದ್ದಾರೆ. 'ಎಟಕಾರಂ.ಕಾಮ್' ಚಿತ್ರದ ಚಿತ್ರೀಕರಣಕ್ಕಾಗಿ ನೇಪಾಳಕ್ಕೆ ಹೋಗಿದ್ದ ಕಾವಿಟ್ಯ ವಿಜಯ್ ಸಿಂಗ್ (20) ಭೂಕಂಪ ದುರ್ಘಟನೆಯಲ್ಲಿ ಸಾವಪ್ಪಿದ್ದಾರೆ. [ಮನೆ ಮುರುಕ ಭೂಕಂಪ ಮನ ಮಿಡಿಯುವ ಚಿತ್ರಗಳು]
ನೇಪಾಳದಲ್ಲಿ ಸೋಮವಾರ (ಏ.27) ಬೆಳಗಿನ ಜಾವ ಸಂಭವಿಸಿದ ಭೂಕಂಪನಕ್ಕೆ ಚಿತ್ರತಂಡ ಪ್ರಯಾಣಿಸುತ್ತಿದ್ದ ಕಾರು ಆಯತಪ್ಪಿ ಪಲ್ಟಿ ಹೊಡೆದಿದೆ. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ನಟ ವಿಜಯ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಗುಂಟೂರು ಮೂಲದ ನಟ ವಿಜಯ್ ಸಿಂಗ್
ಗುಂಟೂರು ಜಿಲ್ಲೆ ಬಾಪಟ್ಲ ಪಟ್ಟಣದ ಮಾರ್ಕೆಟ್ ಪ್ರದೇಶಕ್ಕೆ ಸೇರಿದ ವಿಜಯ್ ಸಿಂಗ್, ಚಿಕ್ಕಂದಿನಿಂದ ನೃತ್ಯ ಎಂದರೆ ಬಹಳ ಇಷ್ಟ. ನೃತ್ಯ ನಿರ್ದೇಶಕ ಪ್ರಭುದೇವ ಅವರನ್ನು ಸ್ಫೂರ್ತಿಯಾಗಿ ತೆಗೆದುಕೊಂಡ ಡಾನ್ಸ್ ಕಲಿತು ಕಳೆದ ಐದಾರು ವರ್ಷಗಳಿಂದ ಅವಕಾಶಕ್ಕಾಗಿ ಪ್ರಯತ್ನಿಸುತ್ತಿದ್ದರು.

ಏಪ್ರಿಲ್ 20ಕ್ಕೆ ನೇಪಾಳಕ್ಕೆ ಹೋಗಿದ್ದ ತಂಡ
ಅವರ ಚಿಕ್ಕಪ್ಪ ನಿರ್ಮಿಸುತ್ತಿರುವ 'ಎಟಕಾರಂ' ಚಿತ್ರದಲ್ಲಿ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಏಪ್ರಿಲ್ 20ರಂದು ಚಿತ್ರೀಕರಣ ನಿಮಿತ್ತ ನೇಪಾಳಕ್ಕೆ ಪ್ರಯಾಣಿಸಿದರು. ಶನಿವಾರ (ಏ.25) ಭೂಕಂಪ ಸಂಭವಿಸಿದ ಬಳಿಕ ವಿಜಯ್ ಅವರ ತಂದೆತಾಯಿ ಫೋನ್ ಮಾಡಿದ್ದರು.

ನಾನು ಕ್ಷೇಮವಾಗಿದ್ದೇನೆ ಎಂದಿದ್ದ
ಆದರೆ ಅಂದು ಸಿಗ್ನಲ್ ಸಿಕ್ಕಿರಲಿಲ್ಲ. ಚಿತ್ರತಂಡ ಎಲ್ಲರೂ ಕ್ಷೇಮವಾಗಿದ್ದಾರೆ ಎಂದಿತ್ತು. ತಮ್ಮ ಪುತ್ರ ಕ್ಷೇಮವಾಗಿದ್ದಾನೆಂದು ತಂದೆತಾಯಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಭಾನುವಾರ ತಂದೆತಾಯಿಗೆ ಸ್ವತಃ ಫೋನ್ ಮಾಡಿ ತಾನು ಕ್ಷೇಮವಾಗಿದ್ದೇನೆ. ಭಯಪಡುವ ಅಗತ್ಯವಿಲ್ಲ ಎಂದು ಹೇಳಿದ್ದರು ವಿಜಯ್.

ಸೋಮವಾರ ಸಂಭವಿಸಿದ ಭೂಕಂಪ
ಸೋಮವಾರ (ಏ.27) ಮುಂಜಾನೆ ಇವರು ಕಾರಿನಲ್ಲಿ ಪ್ರಯಾಣಿಸುತ್ತಿರಬೇಕಾದರೆ ಭೂಕಂಪದಿಂದ ಕಾರು ಪಲ್ಟಿ ಹೊಡೆದಿದೆ. ಕಾರಿನಲ್ಲಿದ್ದ ವಿಜಯ್ ಮೃತಪಟ್ಟಿದ್ದಾರೆ. ತಮ್ಮ ಪುತ್ರ ಕ್ಷೇಮವಾಗಿ ಹಿಂತಿರುಗುತ್ತಾನೆ ಎಂದು ನಿರೀಕ್ಷಿಸುತ್ತಿದ್ದ ಗೌರಿಭಾಯಿ, ರಾಜಾಸಿಂಗ್ ದಂಪತಿಗಳು ಶೋಕಸಮುದ್ರದಲ್ಲಿ ಮುಳುಗಿದರು.

ನೇಪಾಳಕ್ಕೆ ಹೊರಟಿದ್ದ ಚಿತ್ರತಂಡ
ನೇಪಾಳಕ್ಕೆ ಹೊರಟ ಚಿತ್ರ ತಂಡದಲ್ಲಿ ನಿರ್ದೇಶಕ ವೀರೇಂದ್ರ ರೆಡ್ಡಿ, ಹೀರೋ ದಿನೇಶ್, ಹೀರೋಯಿನ್ ನಾಯಕಿ, ಛಾಯಾಗ್ರಹಣ ರಂಜಿತ್, ತಾಂತ್ರಿಕ ಬಳಗದಲ್ಲಿ ಭರತ್, ವಿಜಯ್ ಹಾಗೂ ನವೀನ್ ಇದ್ದರು.


Click it and Unblock the Notifications











