ಮತ್ತೆರಡು ಥಿಯೇಟರ್ ಕ್ಲೋಸ್: ಇನ್ನಾದ್ರೂ ಮೈನ್ ಥಿಯೇಟರ್ ಕಾನ್ಸೆಪ್ಟ್ ಬಿಡಿ
ಒಂದೆಡೆ ಕನ್ನಡ ಚಿತ್ರಗಳಿಗೆ ಥಿಯೇಟರ್ ಸಮಸ್ಯೆ, ಇನ್ನೊಂದೆಡೆ ಕನ್ನಡ ಚಿತ್ರಗಳು ಹೆಚ್ಚಾಗಿ ಪ್ರದರ್ಶನಗೊಳ್ಳುತ್ತಿದ್ದ ಚಿತ್ರಮಂದಿರಗಳು ಒಂದೊಂದಾಗಿ ಬಾಗಿಲು ಮುಚ್ಚುತ್ತಿವೆ.
ಕಲ್ಪನ, ಮೆಜಿಸ್ಟಿಕ್, ತ್ರಿವೇಣಿ, ಸಾಗರ್ ಥಿಯೇಟರ್ ನಂತರ ಕೆಂಪೇಗೌಡ ರಸ್ತೆಯ ಮತ್ತೆರಡು ಚಿತ್ರಮಂದಿರಗಳು ಇತಿಹಾಸದ ಪುಟಕ್ಕೆ ಸೇರಲಿದೆ. ಈ ಪಟ್ಟಿಗೆ ಸೇರಲಿರುವ ಇನ್ನೆರಡು ಚಿತ್ರಮಂದಿರಗಳೆಂದರೆ ತ್ರಿಭುವನ್ ಮತ್ತು ಕೈಲಾಶ್.

ಗುರುವಾರ (ಏ 28) 7.30ರ ನೈಟ್ ಶೋ ಈ ಎರಡು ಚಿತ್ರಮಂದಿರಗಳ ಲಾಸ್ಟ್ ಶೋ. ತ್ರಿಭುವನ್ ಚಿತ್ರಮಂದಿರದಲ್ಲಿ ಸದ್ಯ ಹಿಂದಿ ಚಿತ್ರ ಪ್ರದರ್ಶನಗೊಳ್ಳುತ್ತಿದ್ದರೆ, ಕೈಲಾಶ್ ಚಿತ್ರಮಂದಿರದಲ್ಲಿ 'ಲಾಸ್ಟ್ ಬಸ್' ಕನ್ನಡ ಚಿತ್ರ ಪ್ರದರ್ಶನಗೊಳ್ಳುತ್ತಿದೆ.
ಒಟ್ಟಿನಲ್ಲಿ ಮಲ್ಟಿಪ್ಲೆಕ್ಸ್ ಭರಾಟೆಯಲ್ಲಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಅವಸಾನ ಮುಂದುವರಿದಿದೆ. ತ್ರಿಭುವನ್, ಕೈಲಾಶ್ ಅವಳಿ ಚಿತ್ರಮಂದಿರಗಳು ಬಂದ್ ಆಗಲಿವೆ ಎಂದು ಗಾಂಧಿನಗರದಲ್ಲಿ ಹರಿದಾಡುತ್ತಿದ್ದ ಸುದ್ದಿ ನಿಜವಾಗಿದೆ.
ತ್ರಿಭುವನ್ ಚಿತ್ರಮಂದಿರ 783 ಸೀಟು ಹೊಂದಿದ್ದರೆ, ಕೈಲಾಶ್ ಥಿಯೇಟರ್ 243 ಆಸನ ವ್ಯವಸ್ಥೆಯನ್ನು ಹೊಂದಿತ್ತು. ರಾಜ್ ಅಭಿನಯದ 'ಸಂಪತ್ತಿಗೆ ಸವಾಲ್', ಇತ್ತೀಚಿನ ಬ್ಲಾಕ್ ಬಸ್ಟರ್ ಚಿತ್ರ 'ರಂಗಿತರಂಗ', ಯಶಸ್ವೀ ಪ್ರದರ್ಶನಗೊಂಡಿದ್ದ 'ಫಸ್ಟ್ ರ್ಯಾಂಕ್ ರಾಜು' ಮುಂತಾದ ಚಿತ್ರಗಳು ತ್ರಿಭುವನ್ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡಿದ್ದವು.

ಹಲವಾರು ಚಿತ್ರಗಳಿಗೆ ಜೀವ ಕೊಟ್ಟಿದ್ದ ತ್ರಿಭುವನ್ ಮತ್ತು ಕೈಲಾಶ್ ಚಿತ್ರಮಂದಿರ ಅಂತಿಮ ಪರದೆ ಎಳೆಯಲಿದೆ. ನಷ್ಟ ಮತ್ತು ನಿರ್ವಹಣಾ ಸಮಸ್ಯೆಗಳಿಂದ ಬಂದ್ ಮಾಡುವ ನಿರ್ಧಾರಕ್ಕೆ ಬರಲಾಗಿದೆ ಎನ್ನುವುದು ಚಿತ್ರಮಂದಿರದ ಮಾಲೀಕರು ಹೇಳುವ ಮಾತು.
ಕೆ ಜಿ ರಸ್ತೆಯಲ್ಲಿ ಇನ್ನುಳಿದಿರುವ ಒಂಬತ್ತು ಚಿತ್ರಮಂದಿರಗಳಲ್ಲಿ ಮೂರು ಚಿತ್ರಮಂದಿರಗಳು ಹೆಚ್ಚುಕಮ್ಮಿ ಪರಭಾಷಾ ಚಿತ್ರಗಳಿಗೆ ಮೀಸಲು. ಜೊತೆಗೆ, ಕೆಲವೊಂದು ವಾರಗಳಲ್ಲಿ ಹಠಕ್ಕೆ ಬಿದ್ದವರಂತೆ ಒಂದರ ಮೇಲೊಂದರಂತೆ ಚಿತ್ರ ಬಿಡುಗಡೆ ಮಾಡುವ ಸ್ಯಾಂಡಲ್ ವುಡ್ ನಿರ್ಮಾಪಕರು/ವಿತರಕರು.
ಇನ್ನಾದರೂ ಕನ್ನಡ ಚಿತ್ರೋದ್ಯಮ ಮೈನ್ ಥಿಯೇಟರ್ ಎನ್ನುವ ಕಾನ್ಸೆಪ್ಟ್ ನಿಂದ ಹೊರಬರುತ್ತಾ ಎಂದು ಕಾದು ನೋಡಬೇಕಿದೆ.


Click it and Unblock the Notifications











