ನಟ ಉದಯ್ ಆತ್ಮಹತ್ಯೆ: ಪ್ರಾಥಮಿಕ ತನಿಖಾ ವರದಿ
ಟಾಲಿವುಡ್ ಹ್ಯಾಟ್ರಿಕ್ ಹೀರೋ ಉದಯ್ ಕಿರಣ್ ಅವರು ಹೈದರಾಬಾದಿನ ಶ್ರೀನಗರ ಕಾಲೋನಿಯಲ್ಲಿನ ತನ್ನ ನಿವಾಸದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು ಗೊತ್ತೆ ಇದೆ. ಈಗ ಹೈದರಾಬಾದ್ ಪೊಲೀಸರು ಉದಯ್ ಅವರ ಸಾವಿಗೆ ಸಂಬಂಧಿಸಿದ ಪ್ರಾಥಮಿಕ ತನಿಖಾ ವರದಿಯನ್ನು ಬಿಡುಗಡೆ ಮಾಡಿದ್ದಾರೆ.
ಬಂಜಾರಾಹಿಲ್ಸ್ ಪೊಲೀಸ್ ಠಾಣೆಯ ಡಿಸಿಪಿ ವಿ ಸತ್ಯನಾರಾಯಣ ಕೊಟ್ಟಿರುವ ಪ್ರಾಥಮಿಕ ತನಿಖಾ ವರದಿಯ ಹೇಳಿಕೆಗೆ ಈ ರೀತಿ ಇದೆ, "ಉದಯ್ ಕಿರಣ್ ಅವರ ಸಾವಿನ ವಿಚಾರದಲ್ಲಿ ಬೇರೆಯವರ ಕೈವಾಡ ಇರುವ ಶಂಕೆಯನ್ನು ಅವರು ಅಲ್ಲಗಳೆದಿದ್ದಾರೆ.
ಉದಯ್ ಆತ್ಮಹತ್ಯೆಗೆ ಮಾನಸಿಕ ಒತ್ತಡ ಹಾಗೂ ಆರ್ಥಿಕ ಸಮಸ್ಯೆಗಳೇ ಕಾರಣ ಎಂದಿದ್ದಾರೆ ಸತ್ಯನಾರಾಯಣ. ಏತನ್ಮಧ್ಯೆ ಉದಯ್ ಕಿರಣ್ ಅವರ ಅಂತ್ಯಕ್ರಿಯೆ ದುಃಖತಪ್ತ ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ನೆರವೇರಿದೆ. ಪಂಜಾಗುಟ್ಟ ಪ್ರದೇಶದಲ್ಲಿ ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ಅವರ ಅಂತ್ಯಕ್ರಿಯೆ ಮಂಗಳವಾರ ನಡೆಯಿತು.

ಆರ್ಥಿಕ ಸಮಸ್ಯೆ, ಮಾನಸಿಕ ಒತ್ತಡವೇ ಕಾರಣ
ಭಾನುವಾರ (ಜ.5) ರಾತ್ರಿ 1.16ರ ಸಮಯದಲ್ಲಿ ಉದಯ್ ಮೃತಪಟ್ಟಿದ್ದಾಗಿ ವೈದ್ಯಕೀಯ ವರದಿ ಹೇಳುತ್ತದೆ. ಇನ್ನು ಡಿಸಿಪಿ ವಿ ಸತ್ಯನಾರಾಯಣ ಅವರು ಹೇಳುವುದೇನೆಂದರೆ, "ಆರ್ಥಿಕ ಸಮಸ್ಯೆಗಳು, ತೆಲುಗು ಚಿತ್ರರಂಗದಲ್ಲಿ ಅವಕಾಶಗಳ ಕೊರತೆ ಹಾಗೂ ಅತೀವ ಮಾನಸಿಕ ಒತ್ತಡದ ಕಾರಣ ಉದಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ..." ಎಂದಿದ್ದಾರೆ.

ನಾನು ಸಾಯುತ್ತಿದ್ದೇನೆ ಎಂದಿದ್ದ ಉದಯ್
ಒಮ್ಮೆ ತಮ್ಮ ಪತ್ನಿಯ ಜೊತೆ ಮಾತನಾಡುತ್ತಾ ಉದಯ್ "ನಾನು ಸಾಯುತ್ತಿದ್ದೇನೆ" ಎಂದಿದ್ದರಂತೆ. ಉದಯ್ ಅವರ ಮನೆಯಲ್ಲಿ ಯಾವುದೇ ಮರಣಪತ್ರ ಸಿಕ್ಕಿಲ್ಲ. ಅವರ ಮೊಬೈಲ್ ಕರೆಗಳನ್ನು ಆಧರಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಸತ್ಯನಾರಾಯಣ ತಿಳಿಸಿದ್ದಾರೆ.

ತಮ್ಮ ತಂದೆಯಿಂದ ದೂರ ಉಳಿದಿದ್ದ ಉದಯ್
ಕೆಲವರ್ಷಗಳ ಹಿಂದೆ ಉದಯ್ ಅವರ ತಾಯಿ ತೀರಿಕೊಂಡಿದ್ದರು. ಆ ಬಳಿಕ ತಮ್ಮ ತಂದೆಯಿಂದ ಉದಯ್ ದೂರ ಉಳಿದಿದ್ದರು. ಉದಯ್ ತಂಗಿ ಓಮನ್ ನಲ್ಲಿ ವಾಸವಾಗಿದ್ದಾರೆ.

ಶೀಘ್ರದಲ್ಲೇ ಮರಣೋತ್ತರ ಪರೀಕ್ಷೆ ವರದಿ
ಉದಯ್ ಗೆ ಆಪ್ತರಾದವರ ಬಳಿ ಹಾಗೂ ನೆರೆಹೊರೆಯವರ ಬಳಿ ಮಾಹಿತಿ ಕಲೆಹಾಕಲಾಗುತ್ತಿದೆ. ಶೀಘ್ರದಲ್ಲೇ ಮರಣೋತ್ತರ ಪರೀಕ್ಷೆಯ ವರದಿ ಬರಲಿದೆ.

ಆಟೋಪ್ಸಿ ವಿಡಿಯೋ ರೆಕಾರ್ಡಿಂಗ್
ಉದಯ್ ಕಿರಣ್ ಅವರ ದೇಹದ ಆಟೋಪ್ಸಿ ತನಿಖೆಯನ್ನು ಉಸ್ಮಾನಿಯಾ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಸಲಾಗುತ್ತಿದೆ. ಇದರ ವಿಡಿಯೋ ರೆಕಾರ್ಡಿಂಗ್ ಮಾಡಲಾಗುತ್ತದೆ. ಆಟೋಪ್ಸಿ ದೊರೆತ ಬಳಿಕ ಉದಯ್ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ ಎಂದಿದ್ದಾರೆ ಪೊಲೀಸರು.


Click it and Unblock the Notifications











