'ಉಗ್ರಂ ವೀರಂ'ಗೆ ಶ್ರೀಕಾರ ಹಾಕಿದ ಶ್ರೀಮುರಳಿ
ಸ್ಯಾಂಡಲ್ ವುಡ್ ಬಾಕ್ಸ್ ಆಫೀಸಲ್ಲಿ 'ಉಗ್ರಂ' ಚಿತ್ರ ಉಗ್ರ ತಾಂಡವ ಆಡಿದ್ದು ಗೊತ್ತೇ ಇದೆ. ಸಾಮಾನ್ಯವಾಗಿ ಚಿತ್ರವೊಂದು ಯಶಸ್ವಿಯಾದರೆ ಅದರ ಮುಂದುವರಿದ ಭಾಗ ಮಾಡುವ ಯೋಚನೆ ಎಲ್ಲರಿಗೂ ಬಂದೇ ಬರುತ್ತದೆ. ಅದೇ ರೀತಿ 'ಉಗ್ರಂ' ಚಿತ್ರತಂಡಕ್ಕೂ ಈ ಯೋಚನೆ ಬಂದಿದೆ.
ಉಗ್ರಂ ಚಿತ್ರ ನೋಡಿದವರು ಪಾರ್ಟ್ ಟೂ ಬಂದಿದ್ದರೆ ಚೆನ್ನಾಗಿತ್ತು ಎಂದು ಹಲಬುತ್ತಿದ್ದರು. ಫೇಸ್ ಬುಕ್ ನಲ್ಲೂ ಈ ಬಗ್ಗೆ ಸಾಕಷ್ಟು ಸುದ್ದಿ ಹರಿದಾಡುತ್ತಿತ್ತು. ಈಗ ಎಲ್ಲವೂ ಪಕ್ಕಾ ಆಗಿದೆ. ಉಗ್ರಂ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಅವರು ತಮ್ಮ ಮುಂದಿನ ಚಿತ್ರಕ್ಕೆ 'ಉಗ್ರಂ ವೀರಂ' ಎಂಬ ಟೈಟಲ್ ರಿಜಿಸ್ಟರ್ಡ್ ಮಾಡಿಸಿದ್ದಾರೆ. [ಉಗ್ರಂ ಚಿತ್ರವಿಮರ್ಶೆ]
ತಮ್ಮ ಚೊಚ್ಚಲ ಚಿತ್ರದಲ್ಲೇ ಪ್ರಶಾಂತ್ ನೀಲ್ ಅವರು ಎಲ್ಲರ ಗಮನಸೆಳೆದಿದ್ದರು. ಈಗ ಅವರು ತಮ್ಮ ಮುಂದಿನ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿದ್ದಾರೆ. ಉಗ್ರಂ ವೀರಂ ಚಿತ್ರ ಸೆಟ್ಟೇರಬೇಕಾದರೆ ಒಂದು ವರ್ಷ ಕಾಯಲೇಬೇಕು.

ಪವರ್ ಸ್ಟಾರ್ ಜೊತೆ ಪ್ರಶಾಂತ್ 'ಆಹ್ವಾನ'
ಏಕೆಂದರೆ ಶ್ರೀಮುರಳಿ ಅವರು ಸದ್ಯಕ್ಕೆ ಮತ್ತೊಂದು ಚಿತ್ರದಲ್ಲಿ ಬಿಜಿಯಾಗಿದ್ದಾರಂತೆ. ಇನ್ನೊಂದು ಕಡೆ ಪ್ರಶಾಂತ್ ನೀಲ್ ಅವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಆ ಚಿತ್ರಕ್ಕೆ 'ಆಹ್ವಾನ' ಎಂದು ಹೆಸರಿಡಲಾಗಿದೆ.

ಉಗ್ರಂ ವೀರಂ ಸ್ಕ್ರಿಪ್ಟ್ ರೆಡಿಯಾಗಿದೆಯಂತೆ
ಈ ಪ್ರಾಜೆಕ್ಟ್ ಗಳು ಮುಗಿದ ನಂತರವಷ್ಟೇ ಉಗ್ರಂ ವೀರಂ ಚಿತ್ರ ಸೆಟ್ಟೇರಲಿದೆ. ಈಗಾಗಲೆ ಚಿತ್ರಕಥೆಯನ್ನೂ ಹೆಣೆದು ರೆಡಿ ಮಾಡಿಕೊಂಡಿದ್ದಾರಂತೆ ಪ್ರಶಾಂತ್ ನೀಲ್. ಕಥೆಯಲ್ಲಿ ಏನೆಲ್ಲಾ ವಿಶೇಷತೆಗಳುಂಟು ಎಂಬುದನ್ನು ಕಾದುನೋಡಬೇಕು.

ಶತಕ ಬಾರಿಸಿದ ವರ್ಷದ ಮೊದಲ ಚಿತ್ರ ಉಗ್ರಂ
'ಉಗ್ರಂ' ಚಿತ್ರದ ವಿಶೇಷ ಎಂದರೆ ಈ ವರ್ಷದ ಮೊದಲ ಶತದಿನೋತ್ಸವ ಸಂಭ್ರಮ ಆಚರಿಸಿಕೊಂಡ ಚಿತ್ರವಾಗಿ ಹೊರಹೊಮ್ಮಿದ್ದು. ಬೆಂಗಳೂರುನ ಸ್ವಪ್ನ ಸೇರಿದಂದ ರಾಜ್ಯದ ಸರಿಸುಮಾರು 30ಕ್ಕೂ ಅಧಿಕ ಕೇಂದ್ರಗಳಲ್ಲಿ 'ಉಗ್ರಂ' ಚಿತ್ರ ಶತದಿನೋತ್ಸವ ಆಚರಿಸಿಕೊಳ್ಳುತ್ತಿದೆ.

ಫೀನಿಕ್ಸ್ ನಂತೆ ಎದ್ದು ಬಂದ ಶ್ರೀ ಮುರಳಿ
ತನ್ನ ಮೇಕಿಂಗ್ ನಿಂದಾಗಿ, ಅತ್ಯುತ್ತಮ ಚಿತ್ರಕಥೆಯಿಂದಾಗಿ ಉಗ್ರಂ ಎಲ್ಲರ ಗಮನಸೆಳೆಯಿತು. ಶ್ರೀಮುರಳಿ ಅನ್ನೋ ಹೀರೋ ಫೀನಿಕ್ಸ್ ನಂತೆ ಎದ್ದು ಬರುವಂತೆ ಮಾಡಿತು. 'ಉಗ್ರಂ' ಸಿನಿಮಾ ಮೂಲಕ ಮುರಳಿ ಮರಳಿ ಬಂದಿದ್ದಾರೆ. ಮುರಳಿ ಸಿನಿಮಾವನ್ನ ಕೊಳ್ಳೋಕೆ ತಮಿಳು, ತೆಲುಗು ಚಿತ್ರರಂಗದವರು ಭರ್ಜರಿ ಆಫರ್ ಕೊಟ್ಟಿದ್ದಾರೆ.

ಕೊನೆಯತನಕ ಕುತೂಹಲ ಕೆರಳಿಸುವ ಉಗ್ರಂ
ಆರಂಭದಿಂದ ಕೊನೆಯವರೆಗೂ ಕುತೂಹಲ ಕೆರಳಿಸುವ 'ಉಗ್ರಂ' ತನ್ನ ಅತ್ಯುತ್ತಮ ಚಿತ್ರಕಥೆಯಿಂದಾಗಿ ಪ್ರೇಕ್ಷಕರ ಕುತೂಹಲವನ್ನು ಕಾಯ್ದುಕೊಳ್ಳುತ್ತದೆ. ಪಾತ್ರವರ್ಗದಲ್ಲಿ ತಿಲಕ್ ಶೇಖರ್, ಪದ್ಮಜಾ ರಾವ್, ಮಿತ್ರ, ಜೈ ಜಗದೀಶ್, ಅವಿನಾಶ್, ಅತುಲ್ ಕುಲಕರ್ಣಿ ಮುಂತಾದವರು ಅಭಿನಯಿಸಿದ್ದಾರೆ.


Click it and Unblock the Notifications











