ದರ್ಶನ್ ಕಾಯಕಕ್ಕೆ ಕೈಜೋಡಿಸಿ ಆಫ್ರಿಕನ್ ಆನೆ ದತ್ತು ಪಡೆದ ಉಪೇಂದ್ರ
ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯುವಂತೆ ನಟ ದರ್ಶನ್ ಮಾಡಿದ್ದ ಮನವಿಗೆ ಅಭೂತಪೂರ್ವ ಪ್ರತಿಕ್ರಿಯೆ ದೊರೆತಿದೆ. ದರ್ಶನ್ ಅಭಿಮಾನಿಗಳು, ಪ್ರಾಣಿ ಪ್ರಿಯರು ಸೇರಿದಂತೆ ಸೆಲೆಬ್ರಿಟಿಗಳು ಸಹ ಪ್ರಾಣಿಗಳನ್ನು ದತ್ತು ಪಡೆಯುತ್ತಿದ್ದಾರೆ.
Recommended Video
ಇದೀಗ ನಟ ಉಪೇಂದ್ರ, ಮೈಸೂರಿನ ಜಯಚಾಮರಾಜೇಂದ್ರ ಮೃಘಾಲಯದಿಂದ ಆಫ್ರಿಕನ್ ಆನೆಯೊಂದನ್ನು ದತ್ತು ಪಡೆದು ದರ್ಶನ್ ಮನವಿಗೆ ಸ್ಪಂದಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಉಪೇಂದ್ರ, 'ಪ್ರಾಣಿಗಳೇ ಗುಣದಲಿ ಮೇಲು.... ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಕರೆಯಂತೆ ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಮೃಘಾಲಯ ದಿಂದ ಆಫ್ರಿಕನ್ ಆನೆ ಒಂದನ್ನು ದತ್ತು ಪಡೆದು ಈ ಮೂಲಕ ದರ್ಶನ್ ರವರ ಮಹತ್ಕಾರ್ಯಕ್ಕೆ ಕೈಜೋಡಿಸಿದ್ದೇವೆ' ಎಂದಿದ್ದಾರೆ.

ಉಪೇಂದ್ರ ಅವರ ಕಾರ್ಯವನ್ನು ಪ್ರಶಂಸಿರುವ ನಟ ದರ್ಶನ್, 'ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಆಫ್ರಿಕನ್ ಆನೆ ದತ್ತು ಪಡೆದ ಶ್ರೀ ಉಪೇಂದ್ರ ಅವರಿಗೆ ಹೃದಯಪೂರ್ವಕ ಧನ್ಯವಾದಗಳು' ಎಂದಿದ್ದಾರೆ.
ಉಪೇಂದ್ರ ಹಾಗೂ ದರ್ಶನ್ 'ಅನಾಥರು' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಇಬ್ಬರೂ ಪರಸ್ಪರ ಉತ್ತಮ ಗೆಳೆಯರಾಗಿದ್ದಾರೆ. ಉಪೇಂದ್ರ ಮಾತ್ರವೇ ಅಲ್ಲದೆ ನಿರ್ಮಾಪಕಿ ಶೈಲಜಾ ನಾಗ್, ವಿ.ಹರಿಕೃಷ್ಣ ಹಾಗೂ ಇನ್ನೂ ಕೆಲವು ಸಿನಿಮಾ ಮಂದಿ ದರ್ಶನ್ ಕರೆಗೆ ಓಗೊಟ್ಟು ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ.
ಕೊರೊನಾ ಲಾಕ್ಡೌನ್ನಿಂದಾಗಿ ಮೃಗಾಲಯಗಳು ಬಂದ್ ಆಗಿ ಪ್ರವಾಸಿಗರಿಲ್ಲದ ಕಾರಣ ಮೃಗಾಲಯದ ಪ್ರಾಣಿಗಳ ಆರೈಕೆ ಕಷ್ಟವಾಗುತ್ತಿದೆ. ಮೃಗಾಲಯದ ಸಿಬ್ಬಂದಿಗಳಿಗೂ ಸಮಸ್ಯೆ ಆಗಿದೆ ಹಾಗಾಗಿ ಎಲ್ಲರೂ ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯಿರಿ ಎಂದು ದರ್ಶನ್ ಐದು ದಿನಗಳ ಹಿಂದೆ ಸಾಮಾಜಿಕ ಜಾಲತಾಣದ ಮೂಲಕ ಕರೆ ನೀಡಿದ್ದರು.
ದರ್ಶನ್ ಮನವಿಗೆ ಹಲವಾರು ಮಂದಿ ಸ್ಪಂದಿಸಿದ್ದು ಐದೇ ದಿನದಲ್ಲಿ ರಾಜ್ಯದ ಹಲವು ಮೃಗಾಲಯಗಳಿಂದ ನೂರಾರು ಪ್ರಾಣಿಗಳನ್ನು ದತ್ತುಪಡೆಯಲಾಗಿದೆ. ಇದರಿಂದ ಈವರೆಗೆ ಒಂದು ಕೋಟಿಗೂ ಹೆಚ್ಚು ಮೊತ್ತ ಮೃಗಾಲಯಗಳಿಗೆ ಸಂಗ್ರಹವಾಗಿದೆ.
ತಮ್ಮ ಕರೆಗೆ ಓಗೊಟ್ಟು ಮೃಗಾಲಯಗಳಿಂದ ಪ್ರಾಣಿಗಳನ್ನು ದತ್ತು ಪಡೆದ ಬಹುತೇಕರಿಗೆ ದರ್ಶನ್ ಅವರು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.


Click it and Unblock the Notifications











