ಸಂಕಷ್ಟದಲ್ಲಿರುವ ಸಿನಿಮಾ ಕಾರ್ಮಿಕರ ನೆರವಿಗೆ ನಿಂತ ಉಪೇಂದ್ರ
ಕೊರೊನಾ ವೈರಸ್ ನಿಂದ ಚಿತ್ರರಂಗದ ದಿನಗೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದು, ಅವರ ಸಹಾಯಕ್ಕಾಗಿ ನಟ-ನಟಿಯರು ಸಹಾಯ ಹಸ್ತ ಚಾಚುತ್ತಿದ್ದಾರೆ.
ಹಲವು ನಟ-ನಟಿಯರು ತಮ್ಮ ಇಷ್ಟಾನುಸಾರ ದೇಣಿಗೆ ನೀಡಿದ್ದು, ನಿರ್ದೇಶಕ ಪವನ್ ಕುಮಾರ್ ಅವರು ಜನರಿಂದ ದೇಣಿಗೆ ಸಂಗ್ರಹಿಸಿ ಕಾರ್ಮಿಕರ ಕಲ್ಯಾಣಕ್ಕಾಗಿ ನೀಡಿದ್ದರು.
ಕೊರೊನಾ ವೈರಸ್ ತಡೆಗೆ ಈ ರೀತಿಯ ಕ್ರಮ ಅನುಸರಿಸಿ ಎಂದು ತಮ್ಮ ಕೆಲವು ಐಡಿಯಾಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ನಟ, ನಿರ್ದೇಶಕ ಉಪೇಂದ್ರ ಈಗ ರಂಗಕ್ಕೆ ಇಳಿದಿದ್ದು, ತಾವೂ ಸಹ ಚಿತ್ರ ಕಾರ್ಮಿಕರ ಕಲ್ಯಾಣಕ್ಕೆ ದೇಣಿಗೆ ನೀಡಿದ್ದಾರೆ.
ಕನ್ನಡ ಚಲನಚಿತ್ರ ಕಾರ್ಮಿಕ ಸಂಘಗಳ ಬಹುತೇಕ ಎಲ್ಲಾ ಒಕ್ಕೂಟಗಳಿಗೂ ಹಣ ಸಹಾಯ ಮಾಡಿರುವ ಉಪೇಂದ್ರ ತುಸು ದೊಡ್ಡ ಮೊತ್ತದ ಹಣವನ್ನೇ ದೇಣಿಗೆಯಾಗಿ ಇಂದು ನೀಡಿದ್ದಾರೆ.

ಹಣ ದೇಣಿಗೆ ನೀಡಿದ ಉಪೇಂದ್ರ
''ಕನ್ನಡ ಚಲನಚಿತ್ರ ಕಾರ್ಮಿಕ ಸಂಘಗಳ ಒಕ್ಕೂಟದ ಒಟ್ಟು ಹದಿನೆಂಟು ಸಂಘಗಳಿಗೆ ತಲಾ 25 ಸಾವಿರದಂತೆ 4,50,000/- ರೂಗಳನ್ನು ನೀಡುತ್ತಿದ್ದೇನೆ. ಆದಷ್ಟು ಬೇಗ ಈ ಕರೋನ ಸಮಸ್ಯೆಯಿಂದ ಎಲ್ಲರೂ ಹೊರಬರುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾ ನಿಮ್ಮ ಜೊತೆ ಎಂದೆಂದೂ ನಾನಿರುತ್ತೇನೆ ವಿಶ್ವಾಸವಿರಲಿ'' ಎಂದು ಉಪೇಂದ್ರ ಹೇಳಿದ್ದಾರೆ.

ಸಾ.ರಾ.ಗೋವಿಂದು ಅವರಿಗೆ ಚೆಕ್ ಹಸ್ತಾಂತರ
ನಟ ಉಪೇಂದ್ರ ಅವರು ಚೆಕ್ ಅನ್ನು ನಿರ್ಮಾಪಕರ, ಚಲನಚಿತ್ರ ಮಂಡಳಿಯ ಸಾ.ರಾ.ಗೋವಿಂದು ಅವರಿಗೆ ನೀಡಿದರು. ಉಪೇಂದ್ರ ಅವರ ಮನೆಯಲ್ಲಿಯೇ ಚೆಕ್ ಹಸ್ತಾಂತರ ನಡೆಯಿತು.

ಕಾರ್ಮಿಕರ ಕುಟುಂಬಕ್ಕೆ ತಲುಪಿಸುವ ಜವಾಬ್ದಾರಿ ನನ್ನದು: ಸಾ.ರಾ.ಗೋವಿಂದು
ಕನ್ನಡ ಚಿತ್ರರಂಗದ ಕಾರ್ಮಿಕರ ಕುಟುಂಬ ಕೊರೊನೊ ವೈರಸ್ ಎಂಬ ಮಾರಕ ರೋಗದಿಂದಾಗಿ ಕೆಲಸ ಇಲ್ಲದೆ ತುಂಬಾ ಕಷ್ಟದ ಸಮಯದಲ್ಲಿದೆ. ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಕಾರ್ಮಿಕರ ನೆರವಿಗೆ ಉಪೇಂದ್ರ ಅವರು ಸಹಾಯ ಹಸ್ತ ನೀಡಿದ್ದು, ಲಾಕ್ ಡೌನ್ ಇರುವ ಕಾರಣ ಸ್ವತಃ ನಾನೇ ಅವರ ಮನೆಗೆ ಭೇಟಿ ನೀಡಿ ಚಲನಚಿತ್ರ ಮಂಡಳಿಯ ಪರವಾಗಿ ಚೆಕ್ ಅನ್ನು ಸ್ವೀಕರಿಸಿರುತ್ತೇನೆ. ಹಾಗೂ ಇದನ್ನು ಕಷ್ಟದಲ್ಲಿರುವ ಚಲನಚಿತ್ರ ಕಾರ್ಮಿಕರ ಕುಟುಂಬಕ್ಕೆ ತಲುಪಿಸುವ ಜವಾಬ್ದಾರಿ ನನ್ನದು ಎಂದು ಸಾ.ರಾ.ಗೋವಿಂದು ಹೇಳಿದ್ದಾರೆ.

ಉಪೇಂದ್ರ ಅವರಿಂದ ನಿರೀಕ್ಷೆಗಳಿದ್ದುವು
ಉಪೇಂದ್ರ ಅವರು ರಾಜಕೀಯವಾಗಿಯೂ ಸಕ್ರಿಯರಾಗಿದ್ದು, ತಮ್ಮದೇ ರಾಜಕೀಯ ಪಕ್ಷ ಹೊಂದಿದ್ದಾರೆ. ಕೊರೊನಾ ದಂತಹಾ ಸಂಕಷ್ಟದ ಸಮಯದಲ್ಲಿ ಅವರಿಂದ ಹೆಚ್ಚಿನ ನಿರೀಕ್ಷೆಗಳೇ ಇದ್ದವು. ಅದಕ್ಕೆ ಸ್ಪಂದಿಸಿರುವ ಅವರು ತಮ್ಮ ಸಹಾಯ ಹಸ್ತ ಚಾಚಿದ್ದಾರೆ.


Click it and Unblock the Notifications











