ಉಪ್ಪಿಗೂ 'ಕಾಂತಾರ'ದಂತಹ ಸಿನಿಮಾ ಮಾಡೋ ಆಸೆ: ಶೀಘ್ರದಲ್ಲೇ ರಿಷಬ್ ಜೊತೆ ಚರ್ಚೆ!
ಕನ್ನಡದ ಸಿನಿಮಾ 'ಕಾಂತಾರ' ದೇಶದೆಲ್ಲೆಡೆ ಹವಾ ಎಬ್ಬಿಸಿದೆ. ಕನ್ನಡ, ತೆಲುಗು, ಹಿಂದಿ ಭಾಷೆಯಲ್ಲಿ ಈ ಸಿನಿಮಾದ ಕಲೆಕ್ಷನ್ ನೋಡಿ ಬೇರಗಾದವರಿಗೇನು ಕಮ್ಮಿಯಿಲ್ಲ. ಸ್ಯಾಂಡಲ್ವುಡ್ ಸಿನಿಮಾವೊಂದು ರಾಷ್ಟ್ರ ಮಟ್ಟದಲ್ಲಿ ಇಷ್ಟ ಆಗುತ್ತಿದೆ.
ರಿಷಬ್ ಶೆಟ್ಟಿ ನಿರ್ದೇಶನ, ನಟನೆ ಎಲ್ಲದಕ್ಕೂ ಸಿನಿಪ್ರಿಯರು ಬಹುಪರಾಕ್ ಎಂದಿದ್ದಾರೆ. ಬಾಕ್ಸಾಫೀಸ್ನಲ್ಲಿಯೂ ಸಿನಿಮಾ ದೊಡ್ಡ ಮಟ್ಟದಲ್ಲಿಯೇ ಕಲೆಕ್ಷನ್ ಮಾಡುತ್ತಿದೆ. ಕೇವಲ ಕರ್ನಾಟಕದಲ್ಲಿಯೇ ಸಿನಿಮಾ 100 ಕೋಟಿ ರೂ. ಕಲೆ ಹಾಕಿದೆ ಎಂದು ವರದಿಯಾಗಿದೆ. ಇನ್ನೊಂದು ಕಡೆ ತೆಲುಗು ಹಾಗೂ ಹಿಂದಿಯಲ್ಲೂ ಕಲೆಕ್ಷನ್ ಜೋರಾಗಿಯೇ ಇದೆ.
ಈ ಮಧ್ಯೆ 'ಕಾಂತಾರ' ಸಿನಿಮಾ ಬಗ್ಗೆ ಟೀಕೆ ಕೂಡ ಮಾಡಲಾಗಿದೆ. ಇವೆಲ್ಲದರ ಮಧ್ಯೆವೂ 'ಕಾಂತಾರ' ಸಿನಿಮಾಗೆ ಸಿನಿಪ್ರಿಯರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಾಗೇ ರಿಯಲ್ ಸ್ಟಾರ್ ಉಪೇಂದ್ರ ಕೂಡ ಪ್ರತಿಕ್ರಿಯೆ ನೀಡಿದ್ದು, 'ಕಾಂತಾರ'ದಂತಹ ಸಿನಿಮಾ ಮಾಡುವ ಬಗ್ಗೆ ಆಸೆ ವ್ಯಕ್ತಪಡಿಸಿದ್ದಾರೆ.

'ಕಾಂತಾರ'ದಂತಹ ಸಿನಿಮಾ ಮಾಡುವ ಆಸೆಯಿದೆ'
ಉಪೇಂದ್ರ ಹಾಗೂ ರಿಷಬ್ ಶೆಟ್ಟಿ ಇಬ್ಬರ ಊರು ಒಂದೆನೇ. ಹೀಗಾಗಿ ರಿಯಲ್ ಸ್ಟಾರ್ ಉಪೇಂದ್ರಗೂ ಭೂತ ಕೋಲ ಆಚರಣೆ ಬಗ್ಗೆ ಅರಿವಿದೆ. ಹೀಗಾಗಿ 'ಕಾಂತಾರ'ದಂತಹ ಸಿನಿಮಾ ಮಾಡೋ ಆಸೆ ಅನ್ನು ಉಪೇಂದ್ರ ವ್ಯಕ್ತಪಡಿಸಿದ್ದಾರೆ. " ನಾನು ಸಿನಿಮಾ ಮಾಡಿದ್ದರೆ ಕಾಂತಾರ ಮಾಡಲು ಆಗುತ್ತಿರಲಿಲ್ಲ. ಕಾಂತಾರ ಸಿನಿಮಾವನ್ನು ತುಂಬಾ ಎಫೆಕ್ಟಿವ್ ಆಗಿ ಮಾಡಿದ್ದಾರೆ. ಸಂತೋಷ, ನನಗೂ ಮುಂದೆ ಇಂತಹ ಸಿನಿಮಾ ಮಾಡುವುದಕ್ಕೆ ಆಸೆಯಿದೆ. ರಿಷಬ್ ಹತ್ತಿರ ಮಾತಾಡುತ್ತೇನೆ." ಎಂದು ಉಪೇಂದ್ರ ಸುಳಿವು ನೀಡಿದ್ದಾರೆ.

ಧೈವಾರಾಧನೆ ಬಗ್ಗೆ ಉಪ್ಪಿ ಹೇಳಿದ್ದೇನು?
'ಕಾಂತಾರ' ಸಿನಿಮಾದಲ್ಲಿ ಕರಾವಳಿ ಭಾಗ ಭೂತ-ಕೋಲಾದ ಬಗೆಗಿನ ನಂಬಕೆ, ಆಚರಣೆಯನ್ನು ತೋರಿಸಲಾಗಿದೆ. ಇದು ಬಹಳ ಹಿಂದಿನಿಂದಲೂ ಜನರು ಆಚರಣೆ ಮಾಡಿಕೊಂಡು ಬರುತ್ತಿರುವ ನಂಬಿಕೆ. ರಿಯಲ್ಸ್ಟಾರ್ ಉಪೇಂದ್ರಗೂ ಕೂಡ ಈ ಬಗ್ಗೆ ನಂಬಿಕೆ ಹಾಗೂ ಅರಿವು ಇದೆ. ಹಾಗಾಗಿ ಅಲ್ಲಿನ ಜನರ ನಂಬಿಕೆ ಬಗ್ಗೆನೂ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. "ನಾನು ಅದೇ ಊರಿನವನು. ನಾನೂ ಅದನ್ನು ನೋಡಿದ್ದೀನಿ. ನಮ್ಮಲ್ಲಿ ಅದಕ್ಕೆ ವಿಶೇಷವಾದ ನಂಬಿಕೆ ಇದೆ. ಇವತ್ತಿಗೂ ನಮ್ಮ ತಂದೆ ನಾಗರಪೂಜೆ ತಪ್ಪದೆ ಮಾಡುತ್ತಾರೆ. ಬಹಳ ನಂಬಿಕೆ ಇರುವಂತಹ ಜಾಗ ಅದು. " ಎಂದು ಧೈವಾರಾಧನೆ ಬಗ್ಗೆ ಹೇಳಿದ್ದಾರೆ.

'ಬೆಂಕಿಗೆ ತುಪ್ಪ ಹಾಕೋದು ಸರಿಯಿಲ್ಲ'
ಇದೇ ವೇಳೆ ಚೇತನ್ ಅಹಿಂಸಾ ಮಾಡುತ್ತಿರುವ ಟೀಕೆಯನ್ನು ಉಪೇಂದ್ರ ವಿರೋಧಿಸಿದ್ದಾರೆ. " ಯಾವತ್ತೇ ಆಗಲಿ ಇಂತಹ ವಿಷಯಗಳನ್ನು ಮಾತಾಡಲೇ ಬಾರದು. ಇದನ್ನು ಜಾಸ್ತಿ ಪ್ರೋತ್ಸಾಹ ಮಾಡಬಾರದು. ನೆಗ್ಲೆಕ್ಟ್ ಮಾಡಿಬಿಡಬೇಕು. ಇಲ್ಲಾ ಅಂದರೆ, ನಾವೇ ಯಾವು ಯಾವುದಕ್ಕೋ, ಬೆಂಕಿಗೆ ತುಪ್ಪ ಹಾಕಿ ಜಾಸ್ತಿ ಬೆಳೆಸುವುದು ಸರಿಯಿಲ್ಲ. ಬಿಟ್ಟು ಬಿಡಿ ಅದನ್ನು. ಅದೆಲ್ಲಾ ಪರ್ಸನಲ್. ಅದೆಲ್ಲಾ ನಮ್ಮ ನಂಬಿಕೆಗಳು. ಅದನ್ನು ನಾವು ಸಾಮಾಜಿಕವಾಗಿ ಕಿತ್ತಾಡುವುದು ಸರಿಯಲ್ಲ." ಎಂದು ಟೀಕೆಗಳಿಗೆ ಟಕ್ಕರ್ ಕೊಟ್ಟಿದ್ದಾರೆ.

'ಕಾಂತಾರ' ಆರ್ಭಟ ನಿಂತಿಲ್ಲ
ರಿಷಬ್ ಶೆಟ್ಟಿಯ 'ಕಾಂತಾರ' ಸಿನಿಮಾ ಬಾಕ್ಸಾಫೀಸ್ನಲ್ಲಿ ಅರ್ಭಟಿಸುತ್ತಿದೆ. ಕನ್ನಡದಲ್ಲೂ ದಾಖಲೆ ಮಾಡುವತ್ತ ಮುನ್ನುಗ್ಗುತ್ತಿದೆ. ಅದೇ ತೆಲುಗಿನಲ್ಲಿ ಹೊಸ ದಾಖಲೆಯನ್ನು ಬರೆಯುವುದಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಮತ್ತೊಂದು ಕಡೆ ಹಿಂದಿಯಲ್ಲೂ ಸುಮಾರು 13 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಹಾಗೇ ಹಬ್ಬದ ದಿನಗಳಲ್ಲಿ 'ಕಾಂತಾರ' ಇfನೂ ಹೆಚ್ಚು ಕಲೆಕ್ಷನ್ ಮಾಡುತ್ತೆ ಎಂದು ನಿರೀಕ್ಷೆ ಮಾಡಲಾಗಿದೆ.


Click it and Unblock the Notifications











