'ನಾಗರಹಾವು' ಚಿತ್ರದ ಬಗ್ಗೆ ವಿ ನಾಗೇಂದ್ರ ಪ್ರಸಾದ್ ಅಭಿಮಾನದ ಪತ್ರ
Recommended Video

'ನಾಗರಹಾವು' ಸಿನಿಮಾ ಬಿಡುಗಡೆ ಆಗಿ ನಾಲ್ಕು ದಶಕಗಳು ಕಳೆದರು ಕೂಡ ಇಂದಿಗೂ ಅದರ ಕ್ರೇಜ್ ಕರಗಿಲ್ಲ. ವಿಷ್ಣು ಅಭಿಮಾನಿಗಳು ಮಾತ್ರವಲ್ಲದೆ ಕನ್ನಡ ಸಿನಿಮಾ ಅಭಿಮಾನಿಗಳೆಲ್ಲರೂ 'ನಾಗರಹಾವು' ಚಿತ್ರವನ್ನು ಬೆಳ್ಳಿ ತೆರೆ ಮೇಲೆ ನೋಡಲು ಕಾದಿದ್ದಾರೆ.
ಸಿನಿಮಾ ಕಲಾವಿದರು ಕೂಡ ಹೊಸ ತಂತ್ರಜ್ಙಾನದಲ್ಲಿ ರಾಮಾಚಾರಿ, ಅಲಮೇಲು ಹಾಗೂ ಚಾಮಯ್ಯ ಮೇಷ್ಟ್ರನ್ನು ನೋಡಲು ಕಾತುರರಾಗಿದ್ದಾರೆ. ವಿಷ್ಣುವರ್ಧನ್ ಅಭಿಮಾನಿಗಳು ಸಿನಿಮಾವನ್ನು ಪ್ರತಿಯೊಬ್ಬರಿಗೂ ತಲುಪಿಸಲು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ.
ಇದೇ ಸಮಯದಲ್ಲಿ ನಿರ್ದೇಶಕ ಹಾಗೂ ಗೀತರಚನೆಕಾರ ಕವಿರತ್ನ ವಿ ನಾಗೇಂದ್ರ ಪ್ರಸಾದ್ ವಿಷ್ಣುವರ್ಧನ್ ಹಾಗೂ 'ನಾಗರಹಾವು' ಚಿತ್ರದ ಬಗ್ಗೆ ಅಭಿಮಾನದ ಪತ್ರವೊಂದನ್ನು ಬರೆದಿದ್ದಾರೆ. ಹಾಗಾದರೆ ಆ ಪತ್ರದಲ್ಲಿ ಏನಿದೆ? ಇಲ್ಲಿದೆ ಸಂಪೂರ್ಣ ಪತ್ರದ ವಿವರ..

70 ರ ದಶಕದ ಯುವಕರ ಮನಸ್ಸಿನಲ್ಲಿ ರಾಮಾಚಾರಿ
''70 ರ ದಶಕದ ಯುವಕರ ಮನಸ್ಸಿನಲ್ಲಿದ್ದ ಆಸೆ-ಕನಸು-ಮೊಂಡು ಧೈರ್ಯ -ಭಂಡತನ-ತುಂಟತನ-ಒಳ್ಳೆತನ ಎಲ್ಲದಕ್ಕೂ ರಾಯಭಾರಿಯಾದ -ಪ್ರತಿನಿಧಿಯಾದ ನಾಗರಹಾವಿನ ರಾಮಾಚಾರಿ. ಹಾಗೇ..ಅಂದಿನ ಯುವತಿಯರು ಬಯಸುತ್ತಿದ್ದ ಪ್ರೇಮಿಯಾಗಿ ಅಲಮೇಲು ರೀತಿಯ ಸಂಪ್ರದಾಯವಾದಿ ಮನಸ್ಥಿತಿಯ ಯುವತಿಯರಿಗೂ ರಾಮಾಚಾರಿ ಇಷ್ಟ ಆಗಿದ್ದ.'' - ವಿ.ನಾಗೇಂದ್ರ ಪ್ರಸಾದ್, ಗೀತರಚನೆಕಾರ, ನಿರ್ದೇಶಕ

ಎಲ್ಲಿಗೂ ಅಚ್ಚು ಮೆಚ್ಚು ರಾಮಾಚಾರಿ
''ಮಾರ್ಗರೇಟ್ ರೀತಿಯ ಪಾಶ್ಚಿಮಾತ್ಯ ರೀತಿ ರಿವಾಜುಗಳಲ್ಲಿ ನಂಬಿಕೆ ಇಟ್ಟ ಹುಡುಗಿಯರಿಗೂ ಅಚ್ಚುಮೆಚ್ಚಿನ ಹುಡುಗನಾಗಿ ತೆರೆಯನ್ನು ಆವರಿಸಿಕೊಳ್ಳುತ್ತಾ, ಸಹಜ ಸರಳತೆಯಿಂದ ನಾಡಿನಾದ್ಯಂತ ಅಸಂಖ್ಯಾತ ಅಭಿಮಾನಿಗಳನ್ನು ಸಂಪಾದಿಸಿದ ಸಂಪತ್ ಕುಮಾರ್ ಈತ.'' - ವಿ.ನಾಗೇಂದ್ರ ಪ್ರಸಾದ್, ಗೀತರಚನೆಕಾರ, ನಿರ್ದೇಶಕ

ಅಂಬರೀಶ್ ರಂತಹ ನಾಯಕನ ಉಗಮ
''ಪುಟ್ಟಣ್ಣ ಕಣಗಾಲ್ ಎಂಬ ಮಾಂತ್ರಿಕನ ಕೈಗೆ ಸಿಕ್ಕು ಜನಮನ್ನಣೆ ಪಡೆದ ಪ್ರತಿಭೆಗಳು ಒಂದೇ ಎರಡೇ...ಅಂಬರೀಶ್ ರಂತಹಾ ನಾಯಕನ ಉಗಮವೂ ನಾಗರ ಹಾವಿನಿಂದಲೇ. ಕೆ.ಎಸ್.ಅಶ್ವಥ್ ರಂತಹಾ ಮೇರುನಟನ ವಿಶ್ವರೂಪ ಲೀಲಾವತಿ, ಅಂಕಲ್ ಲೋಕ್ ನಾಥ್, ಆರತಿ, ಜಯಂತಿ ಶಿವರಾಮಣ್ಣ, ಎಂ.ಪಿ.ಶಂಕರ್, ಶಕ್ತಿ ಪ್ರಸಾದ್, ವಜ್ರಮುನಿ ಇನ್ನು ಅನೇಕರು.'' - ವಿ.ನಾಗೇಂದ್ರ ಪ್ರಸಾದ್, ಗೀತರಚನೆಕಾರ, ನಿರ್ದೇಶಕ

ನಿರ್ಮಾಣದಲ್ಲಿ ಧಾರಾಳತನ
''ಪರಕಾಯ ಪ್ರವೇಶ ಮಾಡುವ ಕಲಾವಿದರ ದಂಡನ್ನು ನೋಡುವುದೇ ಒಂದು ರಸಾನುಭೂತಿ. ತರಾಸು ಅವರ ಪಾತ್ರಗಳು, ವೀರಾಸ್ವಾಮಿ ಯವರ ಧಾರಾಳತನ, ವಿಜಯಭಾಸ್ಕರ್, ವಿಜಯನಾರಸಿಂಹ, ಆರ್.ಎನ್.ಜಯಗೋಪಾಲ್, ಪಿ.ಬಿ.ಎಸ್, ಪಿ.ಸುಶೀಲ, ನಮ್ಮ ಹಿಂದಿನ ತಲೆಮಾರಿನ ಪ್ರತಿಭೆಗಳ ಮಾಸ್ಟರ್ ಪೀಸ್.'' - ವಿ.ನಾಗೇಂದ್ರ ಪ್ರಸಾದ್, ಗೀತರಚನೆಕಾರ, ನಿರ್ದೇಶಕ

ಕನ್ನಡ ಇರುವವರೆಗೂ ರಾಮಾಚಾರಿ ಅಮರ
''ಡಾ.ವಿಷ್ಣುವರ್ಧನ್ ಆರಾಧ್ಯರಾಗಲು ನಾಂದಿಯಾದ 'ನಾಗರಹಾವು' ಮತ್ತೆ ತೆರೆಯ ಮೇಲೆ ಹೊಸ ತಾಂತ್ರಿಕ ಶಕ್ತಿಯೊದಿಗೆ ಬರುತ್ತಿದೆ. ಅಭಿಮಾನಿಗಳಿಗೆ ರೋಮಾಂಚನವನ್ನೂ, ಕನ್ನಡಿಗರಿಗೆ ಹೆಮ್ಮೆಯನ್ನೂ , ತಂದೊಡ್ಡುತ್ತಿರುವ ಈಶ್ವರಿ ಸಂಸ್ಥೆಯ ಬಾಲಾಜಿ ಯವರಿಗೆ ಅನಂತ ಧನ್ಯವಾದಗಳು. ಬನ್ನಿ..ನಾಗರಹಾವು ಸಿನಿಮಾ ನೋಡೋಣ. ನಮ್ಮ ಮಕ್ಕಳಿಗೆ ಮುಂದಿನ ತಲೆಮಾರಿಗೆ ಆ ಎಲ್ಲ ಪ್ರತಿಭೆಗಳನ್ನು ಪರಿಚಯಿಸೋಣ. ಕನ್ನಡ ಇರುವವರೆಗೂ ನಮ್ಮ ರಾಮಾಚಾರಿ ಅಮರ.'' -ವಿ.ನಾಗೇಂದ್ರ ಪ್ರಸಾದ್, ಗೀತರಚನೆಕಾರ, ನಿರ್ದೇಶಕ


Click it and Unblock the Notifications











