ಧರ್ಮಸ್ಥಳದಲ್ಲಿ ಸುಳ್ಳು ಹೇಳಿ ಮುಖ ಕೆಡಿಸಿಕೊಂಡ ಚಿತ್ರತಂಡ
'ಅಲೆ' ಚಿತ್ರತಂಡ ಪುಟ್ಟದೊಂದು ಎಡವಟ್ಟು ಮಾಡಿಕೊಂಡಿದೆ. ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ.ವೀರೇಂದ್ರ ಹೆಗ್ಗಡೆಯವರು ತಮ್ಮ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಆದರೆ 'ಅಭಿನಯ ನನ್ನ ಕ್ಷೇತ್ರವಲ್ಲ ನಾನು ಅಭಿನಯಿಸುವುದೂ ಇಲ್ಲ' ಎಂದು ಸ್ವತಃ ಹೆಗ್ಗಡೆಯವರೇ ಪತ್ರಕರ್ತರಿಗೆ ಹೇಳಿಕೆ ನೀಡಿದ್ದಾರೆ.
ಧರ್ಮಸ್ಥಳದಲ್ಲಿ ಚಿತ್ರೀಕರಣಕ್ಕೆ ಅವಕಾಶ ಸಿಗುವುದು ಕಷ್ಟ. ಧಾರ್ಮಿಕ ನಂಬಿಕೆ ಹೊತ್ತು ಬರುವ ಭಕ್ತಾದಿಗಳ ಭಾವನೆಗಳಿಗೆ ಯಾವುದೇ ಘಾಸಿಯಾಗದಿರಲಿ ಎಂಬ ಕಾರಣಕ್ಕೆ ದೇಗುಲದ ಸುತ್ತಮುತ್ತ ಕೂಡಾ ಚಿತ್ರೀಕರಣಕ್ಕೆ ಅವಕಾಶ ನೀಡಿದ ಉದಾಹರಣೆಗಳು ಕಮ್ಮಿ. ಹೀಗಿರುವಾಗ ಹೆಗ್ಗಡೆಯವರು ಚಿತ್ರದ ಸನ್ನಿವೇಶವೊಂದರ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ ಎಂದು ಅಲೆ ಚಿತ್ರತಂಡ ಹೇಳಿಕೊಂಡಾಗ ಅಚ್ಚರಿ ವ್ಯಕ್ತವಾಗಿತ್ತು. ಆದರೆ ಈ ಮಾಹಿತಿ ತಿರುಚಿದ ವರ್ತಮಾನ ಎನ್ನುವುದು ಈಗ ಸ್ಪಷ್ಟವಾಗಿದೆ.

ಅಲೆ ಸಿನಿಮಾಕ್ಕೆ ಕ್ಯಾಮೆರಾ ಚಾಲನೆ ಮಾಡಿಕೊಡುವಂತೆ ಹೆಗ್ಗಡೆಯವರ ಬಳಿ ಚಿತ್ರತಂಡ ವಿನಂತಿಸಿಕೊಂಡಿತ್ತು. ಅದಕ್ಕೊಪ್ಪಿದ ವೀರೇಂದ್ರ ಹೆಗ್ಗಡೆಯವರು ತಮ್ಮ ನಿವಾಸದಲ್ಲಿ ಭಕ್ತರಿಗೆ ದರ್ಶನ ಕಲ್ಪಿಸಿರುವ ಸಮಯದಲ್ಲೇ ಸ್ವಲ್ಪ ಬಿಡುವು ಮಾಡಿಕೊಂಡು ಕ್ಯಾಮರಾ ಚಾಲನೆ ಮಾಡಿಕೊಡಲು ಒಪ್ಪಿಕೊಂಡಿದ್ದರು.
ಅಷ್ಟು ಅವಕಾಶ ಸಿಕ್ಕಿದ್ದೇ ಪುಣ್ಯ ಎಂದುಕೊಂಡ ಅಲೆ ಚಿತ್ರತಂಡ ಅದನ್ನೇ ಹೆಗ್ಗಡೆಯವರು ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂದು ಹೇಳಿಕೊಂಡು ಪ್ರಚಾರ ಪಡೆದಿತ್ತು. ಕ್ಲೈಮ್ಯಾಕ್ಸ್ ಸೀನ್ ನಲ್ಲಿ ನಾಯಕ ನಾಯಕಿ ಮದುವೆ ಮಾಡಿಕೊಂಡು ಧರ್ಮಾಧಿಕಾರಿಗಳ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುವುದು ಚಿತ್ರತಂಡ ಆಯೋಜಿಸಿದ್ದ ಸನ್ನಿವೇಶ.
ಕ್ಯಾಮರಾ ಚಾಲನೆ ಮಾಡಿ ಶುಭ ಹಾರೈಸಿದ ಹೆಗ್ಗಡೆಯವರು ನೈತಿಕ ಮೌಲ್ಯಗಳನ್ನು ಎತ್ತಿಹಿಡಿಯುವಂಥ ಸಿನಿಮಾ ಮಾಡುವುದು ಚಿತ್ರರಂಗದ ಗುರಿಯಾಗಲಿ ಅದನು ಆಶಿಸಿದರು. ಆದರೆ ನಾಯಕ ನಾಯಕಿ ಪಾತ್ರಧಾರಿಗಳು ಅವರ ಆಶೀರ್ವಾದ ಪಡೆಯುವ ಸನ್ನಿವೇಶದಲ್ಲಿ ಕಾಣಿಸಿಕೊಳ್ಳಲು ನಿರಾಕರಿಸಿ ಅಲ್ಲಿಂದ ನಿರ್ಗಮಿಸಿದರು.
ಮುಕ್ತಾಯ ಹಂತಲ್ಲಿರುವ ಈ ಚಿತ್ರಕ್ಕೆ ಈಗ ಕ್ಯಾಮರಾ ಚಾಲನೆ ಮಾಡಿಕೊಡುವಂತೆ ಹೆಗ್ಗಡೆಯವರು ಬಳಿ ಹೋದದ್ದು ಯಾತಕ್ಕೆ ಎನ್ನುವುದಕ್ಕೆ ಚಿತ್ರತಂಡದ ಬಳಿ ಉತ್ತರವಿಲ್ಲ.
ತನುಸ್, ಹರ್ಷಿಕಾ ಪೂಣಚ್ಚಾ, ವಿಜಯಸಾರಥಿ, ಸುರೇಶ್ ಚಂದ್ರ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರವನ್ನು ಆದತ್ ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಮನೋಮೂರ್ತಿ ಸಂಗೀತ ನೀಡಿದ್ದಾರೆ.
ಈ ಹಿಂದೆ ಹೆಗ್ಗಡೆಯವರು ಡಾ. ರಾಜಕುಮಾರ್ ಅಭಿನಯದ ಶ್ರಾವಣ ಬಂತು ಚಿತ್ರದ ಸಣ್ಣ ಸನ್ನಿವೇಶವೊಂದರಲ್ಲಿ ಕಾಣಿಸಿಕೊಂಡಿದ್ದರು.


Click it and Unblock the Notifications











