ವಿಜಯ್ ಕಿರಗಂದೂರು, ಅಶ್ವಿನಿ ಪುನೀತ್ ರಾಜಕುಮಾರ್ & ತಾರಾ ಅನುರಾಧಾಗೆ ವಿಶೇಷ ಪ್ರಶಸ್ತಿ
ಕಳೆದ 47 ವರ್ಷಗಳಿಂದ ಕನ್ನಡದ ಸಿನಿಮಾ ಪ್ರಚಾರ ಸಂಸ್ಥೆ ಶ್ರೀರಾಘವೇಂದ್ರ ಚಿತ್ರವಾಣಿ ಕಲಾಸೇವೆಯನ್ನು ಮಾಡಿಕೊಂಡು ಬಂದಿದೆ. ಕಳೆದ 20 ವರ್ಷಗಳಿಂದ ಸಿನಿಮಾ ಪತ್ರಕರ್ತರು ಹಾಗೂ ಗಣ್ಯರಿಗೆ ಅವರ ಸಂಸ್ಥೆಗಳಿಂದ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದೆ.
ಸ್ಯಾಂಡಲ್ವುಡ್ ಮೊದಲ ಸಿನಿಮಾ ಪಿಆರ್ಓ ಎಂದೇ ಜನಪ್ರಿಯರಾಗಿದ್ದ ದಿವಂಗತ ಡಿ.ವಿ.ಸುಧೀಂದ್ರ ಅವರು ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯನ್ನು ಆರಂಭಿಸಿದ್ದರು. ಅಂದಿನಿಂದ ಇಂದಿನವರೆಗೂ ಆ ಕಾಯಕ ಮುಂದುವರೆದುಕೊಂಡು ಬಂದಿದೆ. ಜೊತೆಗೆ ಪ್ರಶಸ್ತಿ ನೀಡುವ ಕಾಯಕವನ್ನೂ ಮುಂದುವರೆಸಿದೆ.2022ನೇ ಸಾಲಿನ ಸುಮಾರು 11 ಪ್ರಶಸ್ತಿಗಳ ಜೊತೆಗೆ ಇನ್ನೂ 3 ವಿಶೇಷ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿದೆ.

2022 ಕನ್ನಡ ಚಿತ್ರರಂಗ ಎಂದೂ ಮರೆಯಲಾಗದ ವರ್ಷ. 'ಕೆಜಿಎಫ್' ಹಾಗೂ 'ಕಾಂತಾರ' ಎರಡು ಸಿನಿಮಾಗಳು ಕನ್ನಡ ಸಿನಿಮಾರಂಗವನ್ನು ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿತ್ತು. ಈ ಸಿನಿಮಾಗಳ ನಿರ್ಮಿಸಿದ್ದವರು ವಿಜಯ್ ಕಿರಗಂದೂರು. ಹೀಗಾಗಿ ಶ್ರೀ ರಾಘವೇಂದ್ರ ಚಿತ್ರವಾಣಿ ಹೊಂಬಾಳೆ ಫಿಲಂಸ್ನ ವಿಜಯ್ ಕಿರಗಂದೂರು ಅವರಿಗೆ ವಿಶೇಷ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ.
ಹಾಗೇ ಕಳೆದ ವರ್ಷ ಬಿಡುಗಡೆಯಾಗಿದ್ದ 'ಗಂಧದ ಗುಡಿ' ಸಿನಿಮಾ ಕನ್ನಡಿಗರಿಗೆ ತೀರ ಹತ್ತಿರ ಎನಿಸಿಕೊಂಡಿದೆ. ಜೊತೆಗೆ ಅದ್ಭುತ ಅನುಭವವನ್ನೂ ನೀಡಿದೆ. ಕನ್ನಡ ನಾಡಿನ ಪ್ರಾಕೃತಿಕ ಸಂಪತ್ತನ್ನು ತಮ್ಮ ಕಣ್ಣುಗಳ ಮೂಲಕ ಕನ್ನಡಿಗರಿಗೆ ತೋರಿಸಿದ ನಟ ದಿವಂಗತ ಪುನೀತ್ ರಾಜಕುಮಾರ್. ಇಂಥದ್ದೊಂದು ಮರೆಯಲಾಗದ ಅನುಭವವನ್ನು ಕಟ್ಟಿಕೊಟ್ಟ ಪವರ್ಸ್ಟಾರ್ ಹಾಗೂ ಈ ಸಾಹಸಕ್ಕೆ ಕೈ ಹಾಕಿದ್ಧ ನಿರ್ಮಾಪಕಿ ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಈ ವಿಶೇಷ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಇನ್ನು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟಿ ಶ್ರೀಮತಿ ತಾರಾ ಅನೂರಾಧ ಅವರ ಅಭಿನಯ, ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆಯನ್ನು ಸ್ಮರಿಸಿ ವಿಶೇಷ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 47ನೇ ವಾರ್ಷಿಕೋತ್ಸವ ಹಾಗೂ 21 ಮತ್ತು 22ನೇ ವಾರ್ಷಿಕ ಪ್ರಶಸ್ತಿಯನ್ನು ಸಂಸ್ಥೆಯ ಸ್ಥಾಪಕರಾದ ಶ್ರೀ ಡಿ.ವಿ. ಸುಧೀಂದ್ರ ಜನ್ಮದಿನದಂದು (ಜನವರಿ 25) ಚಾಮರಾಜಪೇಟೆಯ ಕನ್ನಡ ಚಲನಚಿತ್ರ ಕಲಾವಿದರ ಸಂಘದಲ್ಲಿ ನೀಡಿ ಗೌರವಿಸಲಾಗುತ್ತಿದೆ.


Click it and Unblock the Notifications











